ಉಡುಪಿ: ಹೇರಳ ನೀರಿದ್ದರೂ ಇಲ್ಲಿ ಭೂಮಿ ಬಂಜರು, ಉಪ್ಪು ನೀರಿನಿಂದ ಗ್ರಾಮಸ್ಥರು ಕಂಗಾಲು

By Suvarna NewsFirst Published Feb 6, 2023, 5:19 PM IST
Highlights

ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕೋಡಿ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ, ಕೋಡಿ ವ್ಯಾಪ್ತಿಯ ಸಮಸ್ಯೆ. ಈ ಭಾಗದಲ್ಲಿ ಕೃಷಿಕರಿಗೆ ಜೀವ ಸೆಲೆ ಎನ್ನುವಂತೆ ಸೀತಾ ನದಿ ಹರಿಯುತ್ತಾಳೆ. ಇದೀಗ  ಸಮುದ್ರದ ಉಪ್ಪು ನೀರು ಭಾರಿ ಪ್ರಮಾಣದಲ್ಲಿ ಹೊಳೆಗೆ ಬರುತ್ತಿದ್ದು, ಕೃಷಿಗೆ ಭಾರಿ ಹೊಡೆತ ಬಿದ್ದಿದೆ.

ಉಡುಪಿ (ಫೆ.6): ಈ ಹಿಂದೆ ಇದೇ ಭಾಗದಲ್ಲಿ ಮೂರು ನಾಲ್ಕು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಕಿಲೋ ಮೀಟರ್ ಉದ್ದಕ್ಕೂ ಗದ್ದೆಗಳು ಬಂಜಾರಾಗಿ ಬಿದ್ದಿವೆ. ಹಾಗಾಂತ ಇಲ್ಲಿ ಕೃಷಿಗೆ ಪೂರಕವಾದ ವ್ಯವಸ್ಥೆ ಇಲ್ಲ ಅಂತಲ್ಲಾ. ಕೃಷಿ ಗದ್ದೆಯ ಪಕ್ಕದ ಹರಿಯು ಹೊಳೆ ಇದ್ದರು, ಅದೇ ನೀರು‌ ಸದ್ಯ ಕೃಷಿಕರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಇಷ್ಟಕ್ಕೂ ಇಲ್ಲಿನ ಸಮಸ್ಯೆ ಏನು ಗೊತ್ತಾ?.  ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕೋಡಿ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ, ಕೋಡಿ ವ್ಯಾಪ್ತಿಯ ಸಮಸ್ಯೆ. ಈ ಭಾಗದಲ್ಲಿ ಕೃಷಿಕರಿಗೆ ಜೀವ ಸೆಲೆ ಎನ್ನುವಂತೆ ಸೀತಾ ನದಿ ಹರಿಯುತ್ತಾಳೆ. ಅರಬ್ಬಿ ಸಮುದ್ರದ ಎರಡು ಕಿಮೀ ಈಚೆಗೆ ಸಮುದ್ರಕ್ಕೆ ಸಮಾನಾಂತರ ವಾಗಿ ಸೀತಾ ನದಿ ಸೆರಗು ಕಾಣಬಹುದಾಗಿದೆ. 

ಇಲ್ಲಿ ಸಮುದ್ರ ಉಬ್ಬರ ಇಳಿತ, ಅಮಾವಾಸ್ಯೆ ಹುಣ್ಣಿಮೆ ಸಂದರ್ಭ ಹೊಳೆಯ ನೀರಿನ ಏರಿಳಿತ ಸರ್ವೆ ಸಾಮಾನ್ಯ. ಈ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರು ಭಾರಿ ಪ್ರಮಾಣದಲ್ಲಿ ಹೊಳೆಗೆ ಬರುತ್ತಿರುತ್ತದೆ. ಮೊದಲೆಲ್ಲಾ ಈ ಭಾಗದ ಸೀತಾ ನದಿ ಆಳವಿದ್ದ ಕಾರಣ ಉಬ್ಬರ ಇಳಿತದ ಇಫೆಕ್ಟ್ ನದಿ ಪಾತ್ರದ ಜನಗಳಿಗೆ ಅಷ್ಟಾಗಿ ಆಗುತ್ತಿರಲಿಲ್ಲ.

ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ನಿರಂತರವಾಗಿ ವರ್ಷದ ಮೂರು ಕಾಲದಲ್ಲೂ ಹೊಳೆಯ ನೀರು ನದಿ ಪಾತ್ರದ ಕೃಷಿಭೂಮಿಗೆ ನುಗ್ಗುವ ಮೂಲಕ ಕೃಷಿ ಭೂಮಿ ಬಂಜಾರಾಗಿದೆ. ಇದಕ್ಕೆ ಮೂಲ ಕಾರಣ ಹೊಳೆಯ ಮಧ್ಯದ ದಂಡೆಗಳಲ್ಲಿ ಅರಣ್ಯ ಇಲಾಖೆ ಕಾಂಡ್ಲಾ ಗಿಡಗಳ ವನಮಹೋತ್ಸವ ಮಾಡಿರುವುದು. ಮೊದಲೇ ಹೂಳು ತುಂಬಿದ್ದ ಹೊಳೆಗಳ ಮಧ್ಯೆ ಇಳಿತ ಸಂದರ್ಭ ತೆರಳಿ ಕಾಂಡ್ಲಾ ಗಿಡಗಳನ್ನು ನಡುವ ಮೂಲಕ ಹೊಳೆಯ ಮಧ್ಯದಲ್ಲಿ ಬಹುತೇಕ ಕಡೆಗಳಲ್ಲಿ ಕಾಂಡ್ಲಾಗಿಡಗಳ ದ್ವೀಪ ಸೃಷ್ಟಿಯಾಗಿದೆ. 

ಶೃಂಗೇರಿಗೆ ಪಾದಯಾತ್ರೆ ಹೊರಟವರಿಗೆ ಬೀದಿನಾಯಿ ಸಾಥ್, ಕ್ಷೇತ್ರ ತಲುಪಿದ ನಂತರ

ಇದರಿಂದ ಹೊಳೆಯ ನೀರು ಹರಿಯಲು ಸಮಸ್ಯೆ ಯಾಗಿರುವುದಲ್ಲದೆ, ಹೊಳೆ ಮತ್ತು ಹೊಳೆ ಪಾತ್ರದ ಕೃಷಿ ಭೂಮಿ ಒಂದೆ ಎತ್ತರಕ್ಕೆ ಬಂದು ನಿಂತಿದೆ. ಇದಲ್ಲದೇ ಹೊಳೆ ಎರಡು ಬದಿಗಳಲ್ಲಿ ಸರಿಯಾದ ಬದಿಕಟ್ಟು ಇಲ್ಲದ ಕಾರಣ ಸಮುದ್ರ ಏರಿಳಿತದ ಸಂದರ್ಭ ನುಗ್ಗುವ ಉಪ್ಪು ನೀರು ಹೊಳೆಯ ಮೂಲಕ ಹೊಳೆ ಪಾತ್ರದ ಕಿಮೀ ಉದ್ದದ ಕೃಷಿ ಭೂಮಿ ನಾಶ ಮಾಡಿದೆ. ಇದಲ್ಲದೇ ಹೊಳೆ ಪಾತ್ರದಲ್ಲಿರುವ ಸ್ಥಳೀಯರ ಕುಡಿಯ ನೀರಿನ ಬಾವಿಯೂ ಕೂಡ ಉಪ್ಪು ನೀರಿನ ಪ್ರಭಾವಕ್ಕೆ ಒಳಗಾಗಿ ಸಂಕಷ್ಟ ಎದರಿಸುವಂತಾಗಿದೆ. ನೆಲಗಡಲೆ, ಉದ್ದು, ಅವಡೆ, ಭತ್ತ, ಗೆಣಸು ಮೊದಲಾದ ಕೃಷಿ ಮಾಡುತ್ತಿದ್ದ ಕೃಷಿಭೂಮಿಗಳು ಇಂದು ಉಪ್ಪು ನೀರಿನ ಪ್ರಭಾವದಿಂದ ಸತ್ವ ಕಳೆದುಕೊಂಡು ಬಂಜಾರಾಗಿದೆ.

ಉಡುಪಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ, ಯಶಸ್ವಿಯಾದ ಪ್ರಯೋಗ

ಒಟ್ಟಾರೆಯಾಗಿ ಕೋಡಿ ಕನ್ಯಾನ ಪಂಚಾಯತ್ ಹೊಳ ಪಾತ್ರದ ಜನರ ಸಂಕಷ್ಟ ಹೇಳ ತೀರದು. ಮಳೆಗಾಲದಲ್ಲಿ ನೆರೆಹಾವಳಿಯಿಂದ ಕಂಗೆಟ್ಟಿರುವ ಇಲ್ಲಿನ ಸ್ಥಳೀಯರು ಸದ್ಯ ಉಪ್ಪು ನೀರಿನ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಆದಷ್ಟು ಶೀಘ್ರದಲ್ಲಿ ಹೊಳೆಯ ಹೂಳು ಎತ್ತಿ, ಬದಿ ದಂಡೆ ನಿರ್ಮಾಣ ಮಾಡಿದಲ್ಲಿ ಈ ಭಾಗದ ಜನರ ಬಹುದೊಡ್ಡ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎನ್ನುವುದು ನಮ್ಮ ಆಶಯ.

click me!