Udupi ತಂಬಾಕು ಸೇವನೆ ಅಪಾಯದ ಕುರಿತು ಕಲಾವಿದನಿಂದ ವಿಶಿಷ್ಟ ಜಾಗೃತಿ

By Suvarna NewsFirst Published Jun 13, 2022, 4:10 PM IST
Highlights

* ವಿಶ್ವ ತಂಬಾಕು ರಹಿತ ದಿನಾಚರಣೆ 
* ತಂಬಾಕು ಸೇವನೆ ಅಪಾಯದ ಕುರಿತು ಕಲಾವಿದನಿಂದ ವಿಶಿಷ್ಟ ಜಾಗೃತಿ
* ಹಿರಿಯ ಕಲಾವಿದ ರಮೇಶ್ ರಾವ್ ಕಲಾಕೃತಿಗೆ ಚಾಲನೆ 

ಉಡುಪಿ, (ಜೂನ್.13): ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ತಂಬಾಕು ಸೇವನೆ ಅಪಾಯದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪರಿಸರ ಸ್ನೇಹಿ ವಿಶಿಷ್ಟ ಕಲಾಕೃತಿಯನ್ನುರಚಿಸಿದ್ದಾರೆ.ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಈ ಕಲಾಕೃತಿ ರಚಿಸಲಾಗಿದೆ. ಹಿರಿಯ ಕಲಾವಿದ ರಮೇಶ್ ರಾವ್ ಕಲಾಕೃತಿಗೆ ಚಾಲನೆ ನೀಡಿದರು.

ಬಸ್ ನಿಲ್ದಾಣ ಪರಿಸರದಲ್ಲಿ ಸಾವಿರಾರು ಮಂದಿ ಪ್ರಯಾಣಿಕರು ಬರುವುದರಿಂದ, ಜಾಗೃತಿ ಕಲಾಕೃತಿಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಸಾಧ್ಯವಾಗಿದೆ. ಅದರಲ್ಲೂ ಬಸ್ ನಿಲ್ದಾಣ ಪರಿಸರದಲ್ಲಿ ತಂಬಾಕು ಬಳಸಿ ಉಗುಳಿ ಹೋಗುವ ಕೆಟ್ಟಚಾಳಿ ಜನರಲ್ಲಿ ಹೆಚ್ಚಾಗಿರುವುದರಿಂದ, ಅಂತಹಾ ಸ್ಥಳದಲ್ಲಿ ಈ ಅಪೂರ್ವ ಕಲಾಕೃತಿ ರಚಿಸಿ ಇಟ್ಟ ಕಾರಣ ಜನರ ಗಮನ ಸೆಳೆದಿದೆ. 

World No Tobacco Day: ತಂಬಾಕು ವ್ಯಸನಿಗಳಿಗೆ ಬಹುಕಾಲ ಕಾಡಲಿರುವ ಚಿತ್ರ ರಚಿಸಿದ ಸುದರ್ಶನ್ ಪಟ್ನಾಯಕ್!

ಈ ಸಂದರ್ಭ ಮಾತನಾಡಿದ ಕಲಾವಿದ ಶ್ರೀನಾಥ್ ಮಣಿಪಾಲ್ ‘ನಮ್ಮ ಪರಿಸರವನ್ನು ತಂಬಾಕಿನ ಅಪಾಯದಿಂದ ರಕ್ಷಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ತಂಬಾಕಿನಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಲಾಕೃತಿಯನ್ನು ಪ್ರದರ್ಶಿಸಲಾಗಿದೆ. ಇದನ್ನು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ರಚಿಸಲಾಗಿದೆ. ಮುಖ್ಯವಾಗಿ ಕಾರ್ಡ್ ಬೋರ್ಡ್ಗಳನ್ನು ಉಪಯೋಗಿಸ ಲಾಗಿದೆ ಎಂದು ಹೇಳಿದರು. ಈ ಕಲಾಕೃತಿಯಲ್ಲಿನ ಏಡಿಯು ಕ್ಯಾನ್ಸರ್ ನ್ನು ಪ್ರತಿಬಿಂಬಿಸುತ್ತದೆ. ಕೊಡೆಯನ್ನು ಇರಿಸಿ, ಕ್ಯಾನ್ಸರ್‌ ನ ನೆರಳು ನಮ್ಮ ಪರಿಸರದ ಮೇಲೆ ಬಿದ್ದಿರುವುದನ್ನು ಇದರಲ್ಲಿ ತೋರಿಸಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವ ಸಂದೇಶವನ್ನು ಸಾರಲಾಗಿದೆ ಎಂದರು.

ಅದೇ ರೀತಿ ತಂಬಾಕಿನ ಮೂಲಕ ಪಂಜರವನ್ನು ನಿರ್ಮಿಸಿದ್ದು, ಆ ಪಂಜರದಲ್ಲಿ ಸಿಲುಕಿರುವ ನಮ್ಮ ಪರಿಸರವನ್ನು ಹೊರ ತರಬೇಕೆಂಬ ಸಂದೇಶ ಕೂಡ ಕಲಾಕೃತಿಯಲ್ಲಿ ಅಡಕವಾಗಿದೆ. ಈ ಕಲಾಕೃತಿಯನ್ನು ಮುಂದೆ ಜನ ಸೇರುವ ಸ್ಥಳಗಳಲ್ಲಿ ಇರಿಸಿ ಜನಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.

ಈ ಮೊದಲು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಆವರಣದಲ್ಲಿ ಕಲಾಕೃತಿಯನ್ನು ಇರಿಸಲಾಗಿತ್ತು. ಅಲ್ಲಿ ಬರುವ ವೈದ್ಯಕೀಯ ವಿದ್ಯಾರ್ಥಿಗಳ ಗಮನ ಸೆಳೆದು ತಂಬಾಕಿನ ದುಷ್ಪರಿಣಾಮಗಳ ಕುರಿತು ಎಚ್ಚರಿಸಲಾಗಿತ್ತು. ಇದೀಗ ಜನಸಾಮಾನ್ಯರ ನಡುವೆ ಕಲಾಕೃತಿಯೊಂದು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ. ಕಲಾವಿದ ಶ್ರೀನಾಥ್ ಅವರ ಈ ಪರಿಶ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

click me!