ಉತ್ತರ ಕನ್ನಡ: ಮುರ್ಡೇಶ್ವರಕ್ಕೆ ಬಂದಿದ್ದ ಇಬ್ಬರು ಸಮುದ್ರಪಾಲು

By Kannadaprabha NewsFirst Published Jun 11, 2022, 7:03 AM IST
Highlights

*  ಕೋಲಾರ, ಶಿವಮೊಗ್ಗದಿಂದ ಆಗಮಿಸಿದ್ದ ಪ್ರವಾಸಿಗರ ತಂಡಗಳು
*  ಓರ್ವನ ಮೃತದೇಹ ಪತ್ತೆ
*  ಮತ್ತೋರ್ವನಿಗಾಗಿ ಮುಂದುವರಿದ ಶೋಧಕಾರ್ಯ
 

ಭಟ್ಕಳ(ಜೂ.11): ಮುರ್ಡೇಶ್ವರದ ಸಮುದ್ರದಲ್ಲಿ ಈಜಲು ತೆರಳಿದ್ದ ಪ್ರವಾಸಿಗರ ಪೈಕಿ ಇಬ್ಬರು ನೀರುಪಾಲಾದರೆ, ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ. ಶಿವಮೊಗ್ಗದ ಆಗುಂಬೆ ನಿವಾಸಿ ಸುಶಾಂತ ಎಂ.ಎಸ್‌. (23) ಮೃತದೇಹ ಪತ್ತೆಯಾಗಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಅಬ್ರಾರ್‌ ಶೇಖ್‌ (21) ಅವರಿಗಾಗಿ ಹುಡುಕಾಟ ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ 12 ಯುವಕರ ತಂಡ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಬಂದಿತ್ತು. ಎಲ್ಲರೂ ಸಮುದ್ರ ಸ್ನಾನಕ್ಕೆಂದು ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಮೂವರು ಸಿಲುಕಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡುವಲ್ಲಿ ಸ್ಥಳೀಯರು ಯಶಸ್ವಿಯಾದರು. ಆದರೆ ಅಬ್ರಾರ್‌ ಶೇಖ್‌ ನೀರಿನಲ್ಲಿ ನಾಪತ್ತೆಯಾಗಿದ್ದಾನೆ.

ಆನೆ ಕಾರಿಡಾರಲ್ಲಿ ಮಾನವ ಹಸ್ತಕ್ಷೇಪ: 79 ಆನೆ ಬಲಿ

ಅದೇ ರೀತಿ ಆಗುಂಬೆಯ ಒಂದೇ ಕುಟುಂಬದ ಮೂವರು ಸಮುದ್ರದಲ್ಲಿ ಈಜಾಡುತ್ತಿದ್ದಾಗ ಸುಶಾಂತ್‌ ಮತ್ತು ಆತನ ಚಿಕ್ಕಪ್ಪ ಅಲೆಗಳಿಗೆ ಸಿಲುಕಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಓರ್ವನನ್ನು ರಕ್ಷಿಸಿದರು. ಇದೇ ವೇಳೆ ತೀವ್ರ ಹುಡುಕಾಟದ ನಂತರ ಸುಶಾಂತ್‌ ಶವ ಪತ್ತೆಯಾಗಿದೆ.

ಈಗಾಗಲೇ ನಾಪತ್ತೆಯಾದ ಅಬ್ರಾರ್‌ ಕುಟುಂಬಸ್ಥರು ಮುರ್ಡೇಶ್ವರ ತಲುಪಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸ್‌ಐ ಪರಮಾನಂದ ಕೊಣ್ಣುರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ.

click me!