
ತುಮಕೂರು (ಜು.04) ಮತದಾರರ ಪಟ್ಟಿ ಪರಿಷ್ಕರಣೆ (SIR)ತೆರಳುತ್ತಿದ್ದ ತುಮಕೂರು ಗ್ರಾಮ ಲೆಕ್ಕಾಧಿಕಾರಿ ಭುವನ್ ಅಪಘಾತದಲ್ಲಿ ಮೃತಪಟ್ಟ ಘಟನೆ ಇದೀಗ ಪ್ರತಿಭಟನೆಗೆ ಕಾರಣವಾಗಿದೆ. ಬೆಳಿಗ್ಗೆ ತುಮಕೂರಿನಿಂದ ಕುಣಿಗಲ್ ನತ್ತ ತೆರಳುತಿದ್ದ ಲಾರಿ, ಗೂಳೂರು ಬಳಿ ಗ್ರಾಮ ಲೆಕ್ಕಾಧಿಕಾರಿ ಭುವನ ಬೈಕ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸಿದ್ಧಗಂಗಾ ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಭುವನ್ ಮೃತಪಟ್ಟ ಘಟನೆ ಹಿಂದೆ ಅಧಿಕಾರಿಗಳ ಒತ್ತಡ ಆರೋಪ ಕೇಳಿಬಂದಿದೆ. ಬೆಳಗ್ಗೆ 6.30ಕ್ಕೆ ಸ್ಥಳಕ್ಕೆ ಹಾಜರಾಗಲು ತಹಶಿಲ್ದಾರ್ ಒತ್ತಡ ಹಾಕಿದ ಹಿನ್ನಲೆಯಲ್ಲಿ ಅಪಘಾತ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ.
ತುಮಕೂರು ತಹಸೀಲ್ದಾರ್ ರಾಜೇಶ್ವರಿ ಮಾತನಾಡಿರೋ ಆಡಿಯೋ ಲಭ್ಯವಾಗಿದೆ. AC ಆದೇಶದಂತೆ ಬೆಳಗ್ಗೆ 6:30 ಕ್ಕೆ SIR ಪ್ರಕ್ರಿಯೆಯಲ್ಲಿ ಇರಬೇಕೆಂಬ ಆಡಿಯೋ ಲಭ್ಯ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಉಪವಿಭಾಗ ಅಧಿಕಾರಿಗಳ (ಎ.ಸಿ)ಆದೇಶದಂತೆ ಬೆಳಗ್ಗೆ 6:30ಕ್ಕೆ ನೀವೆಲ್ಲರೂ ಇರಬೇಕು. ಎಸಿ ಮೇಡಂ ಗೆ 7:30 ಕ್ಕೆ ಎಲ್ಲರೂ ಇದ್ದಾರೆ ಎಂದು ರಿಪೋರ್ಟ್ ಸಲ್ಲಿಕೆ ಮಾಡಬೇಕು. ಹೀಗಾಗಿ ಎಲ್ಲರೂ ಫೀಲ್ಡ್ನಲ್ಲಿ ಒಂದು ನಿಮಿಷವೂ ತಡ ಮಾಡದಂತೆ ಇರಬೇಕು. ಸರ್ಪ್ರೈಸ್ ಆಗಿ AC ಮೇಡಂ, ಡಿಸಿ ಮೇಡಂ ಹಾಗೂ ಡಿಸ್ಟ್ರಿಕ್ಟ್ ಲೆವೆಲ್ ಆಫೀಸರ್ಸ್ ಸೇರಿದಂತೆ ಅಧಿಕಾರಿಗಳು ಸರ್ಪ್ರೈಸ್ ಭೇಟಿ ಇರಲಿದೆ. ಎಲ್ಲಾ BLO ಗಳಿಗೆ ಮಾತನಾಡಿ ತಾವು ಫೀಲ್ಡ್ ನಲ್ಲಿ ಇರಿ ಎಂದು ಮಾತನಾಡಿದ ಆಡಿಯೋ ಇದಾಗಿದೆ. ಇದೇ ಆಡಿಯೋದಲ್ಲಿ ಫೀಲ್ಡ್ ನಲ್ಲಿ ಇಲ್ಲ ಅಂದರೆ ನಾನು ಮೇಲಾಧಿಕಾರಿಗಳಿಗೆ ರಿಪೋರ್ಟ್ ಮಾಡುತ್ತೇನೆ. ಇದು ತುಂಬಾ ಸೀರಿಯಸ್ ಎಂದು ಹೇಳಿರುವ ಆಡಿಯೋ ಭಾರಿ ಕೋಲಾಹಲ ಸೃಷ್ಟಿಸಿದೆ.
ತುಮಕೂರು ಗ್ರಾಮ ಲೆಕ್ಕಾಧಿಕಾರಿ ಭುವನ ಸಾವಿಗೆ ಕಾರಣಾಗಿದ್ದ ಲಾರಿ ಚಾಲಕನ ಬಂಧಿಸಲಾಗಿದೆ. ತಮಿಳುನಾಡು ಮೂಲದ ಮುರುಗನ್ ಎಂದು ಗುರುತಿಸಲಾಗಿದೆ. ಇಂದು (ಜು.04) ಭುವನ ತೆರಳುತಿದ್ದ ಬೈಕ್ ಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಇತ್ತ ಭುವನ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್, ಬೆಳಗ್ಗೆ 6:30 ಕ್ಕೆ ಸ್ಪಾಟ್ ನಲ್ಲಿ ಇರಬೇಕು ಅಂತ ಮೇಲಾಧಿಕಾರಿಗಳು ಕಿರುಕುಳ ಕೊಟ್ಟಿದ್ದಾರೆ ಎಂದಿದ್ದಾರೆ. ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿರವು ತೆರಳುವಾಗ ಅಪಘಾತವಾಗಿದೆ. ದೇವರು ಅವರ ಕುಟುಂಬಕ್ಕೆ ಶಕ್ತಿ ಕೊಡಲಿ ಎಂದು ಯೋಗೇಶ್ ನಾಯ್ಕ ಹೇಳಿದ್ದಾರೆ.
ತಹಸೀಲ್ದಾರ್, ಎ.ಸಿ, ಎಡಿಸಿ, ಡಿಸಿ ಅವರು ಅತೀ ಹೆಚ್ಚು ಒತ್ತಡ ಹಾಕಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಕೆಲಸ ಮಾಡಿಸಿದ್ದಾರೆ.ತಮ್ಮ ಅಧಿಕಾರವನ್ನ ಸರ್ವಾಧಿಕಾರಿ ಅಂತೆ ಬಳಸಿಕೊಂಡು ಕೆಳ ಹಂತದ ಸಿಬ್ಬಂದಿಗಳ ಜೀವ ತೆಗೆದಿದ್ದಾರೆ.ರಾತ್ರಿ ಹತ್ತು ಗಂಟೆವರೆಗೂ ಸಭೆ ಮಾಡ್ತಾರೆ. ವೈಜ್ಞಾನಿಕವಾಗಿ ಕೆಲಸ ಮಾಡಿಸುತ್ತಾರೆ. ಸರ್ಕಾರಿ ಸುತ್ತೋಲೆ ವಿರುದ್ಧ ಕೆಲಸ ಮಾಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯೋಗೇಶ್ ನಾಯ್ಕ್ ಆಗ್ರಹಿಸಿದ್ದಾರೆ. ಮೃತಳ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ಕಾನೂನು ಕ್ರಮ ಆಗಬೇಕು ಎಂದಿದ್ದಾರೆ. ಕ್ರಮ ಆಗೋವರೆಗೂ ನಾವು ಜಿಲ್ಲಾಧಿಕಾರಿ ಕಚೇರಿ ಬಿಟ್ಟು ಹೋಗೋದಿಲ್ಲ. ತುಮಕೂರು ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ನೌಕರರು ಕೂಡ ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಮೃತರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಡಬೇಕು. ತಪ್ಪಿಸ್ಥರು ಯಾರಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.