4.50 ಲಕ್ಷದ ಸಾಲಕ್ಕೆ 6.14 ಎಕರೆ ಜಮೀನು ಹರಾಜು ಹಾಕಿದ ಬ್ಯಾಂಕ್? ರೈತ ಸಂಘದ ಆರೋಪ

Published : May 15, 2026, 10:18 AM IST
Farmer

ಸಾರಾಂಶ

ಬ್ಯಾಂಕ್, ರಿಯಲ್ ಎಸ್ಟೇಟ್‌ನವರೊಂದಿಗೆ ಶಾಮೀಲಾಗಿ ರೈತನ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಅತಿ ಕಡಿಮೆ ಬೆಲೆಗೆ ಹರಾಜು ಹಾಕಿದೆ ಎಂದು ರೈತ ಸಂಘ ಆರೋಪಿಸಿದೆ. ಈ ಹಿಂದೆ ನೀಡಿದ ಭರವಸೆಯಂತೆ ರೈತನಿಗೆ ಭೂಮಿ ಹಿಂತಿರುಗಿಸದಿದ್ದರೆ, ಬ್ಯಾಂಕ್ ವಿರುದ್ಧ ಅಹೋರಾತ್ರಿ ಚಳುವಳಿ ನಡೆಸುವುದಾಗಿ ಸಂಘದ ಅಧ್ಯಕ್ಷರು ಎಚ್ಚರಿಸಿದ್ದಾರೆ.

ತುರುವೇಕೆರೆ: ಇಲ್ಲಿಯ ಕರ್ಣಾಟಕ ಬ್ಯಾಂಕ್ ರಿಯಲ್ ಎಸ್ಟೇಟ್ ನವರೊಂದಿಗೆ ಶಾಮೀಲಾಗಿ ಕೋಟ್ಯಂತರ ರು ಬೆಲೆ ಬಾಳುವ ಜಮೀನನ್ನು ಕೇವಲ ಕೆಲವೇ ಲಕ್ಷಗಳಿಗೆ ಮಾರಾಟ ಮಾಡಿಸಿ ರೈತನನ್ನು ಬೀದಿಪಾಲು ಮಾಡಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ ಗೌಡ ಆರೋಪಿಸಿದ್ದಾರೆ.

ನಾಲ್ಕೂವರೆ ಲಕ್ಷ ಪಡೆದಿದ್ರು!

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನ ತಾಳಕೆರೆ ಗ್ರಾಮದ ಈರಯ್ಯ ಹಾಗೂ ಕೃಷ್ಣಪ್ಪ ಕುಟುಂಬದವರು ಸರ್ವೆ ನಂ 273 ರ 6.14 ಎಕರೆ ಜಮೀನಿನ ಮೇಲೆ 4.50 ಸಾವಿರ ಸಾಲ ಪಡೆದಿದ್ದರು. ಅದನ್ನು ಬ್ಯಾಂಕ್ ಬಡ್ಡಿ, ಸುಸ್ತಿ ಬಡ್ಡಿ ಎಲ್ಲಾ ಸೇರಿ 34.80 ಲಕ್ಷ ರು.ಗಳ ಸಾಲ ಎಂದು ಡಿಕ್ರಿ ಮಾಡಿಸಿ 2024ರಲ್ಲಿ ರಿಯಲ್ ಎಸ್ಟೇಟ್ ನವರೊಂದಿಗೆ ಶಾಮೀಲಾಗಿ ರೈತನಿಗೆ ಗೊತ್ತಿಲ್ಲದಂತೆ ಈ ಹರಾಜು ಮೂಲಕ ಹರಾಜು ಮಾಡಿದೆ.

ಜಮೀನನ್ನು ಬ್ಯಾಂಕ್ ನವರು ರಿಯಲ್ ಎಸ್ಟೇಟ್ ಗಳ ಜೊತೆ ಶಾಮೀಲಾಗಿ ಬಿಡ್ ಹಾಕಿಸಿ ರೈತರ ಭೂಮಿಯನ್ನು ಪಡೆದುಕೊಂಡು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿದೆ. ಈ ಹರಾಜು ರದ್ದುಪಡಿಸಿ ರೈತನ ಭೂಮಿಯನ್ನು ರೈತನ ಹೆಸರಿಗೆ ಹಾಕಬೇಕು ಎಂದು ಆಗ್ರಹಿಸಿ ಈ ಹಿಂದೆಯೇ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಂತರ ಕರ್ನಾಟಕ ಬ್ಯಾಂಕ್ ಮುಖ್ಯಸ್ಥರು ಹಾಗೂ ರಾಜ್ಯ ರೈತಸಂಘದ ಮುಖಂಡರು ಮಾತಕತೆ ನಡೆಸಿ ರೈತ 5 ಲಕ್ಷ ಡಿಡಿ ತೆಗೆದು ಕಟ್ಟಿ ಜಮೀನು ವಾಪಸ್ಸು ರೈತನ ಹೆಸರಿಗೆ ನೀಡಬೇಕು ಎಂದು ಒಡಂಬಡಿಕೆ ಮಾಡಿಕೊಂಡು ಪ್ರತಿಭಟನೆ ಕೈಬಿಡಲಾಗಿತ್ತು. 

ನಂತರ ಸುಮಾರು 2 ವರ್ಷಗಳಿಂದ ಸಬೂಬು ಹೇಳಿಕೊಂಡು ಬಂದ ಬ್ಯಾಂಕ್ ಸಿಬ್ಬಂದಿಗಳು ಹರಾಜು ಮಾಡಿಕೊಂಡಿರುವ ಸುಬ್ರಮಣಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿಗೆ ಭೂಮಿ ಬಿಡಿಸಿಕೊಡಲು ಪೋಲೀಸರನ್ನು ಜಮೀನಿನ ಬಳಿ ಕರೆದುಕೊಂಡು ಹೋಗಿದ್ದರು. ವಿಷಯ ತಿಳಿದ ರಾಜ್ಯ ರೈತಸಂಘದವರು ಬ್ಯಾಂಕ್ ನ ರೈತ ವಿರೋಧಿ ಕ್ರಮ ಖಂಡಿಸಿ ಸಿಬ್ಬಂದಿ ಮತ್ತು ರಿಯಲ್ ಎಸ್ಟೇಟ್ ನವರನ್ನು ವಾಪಸ್ಸು ಕಳಿಸಲಾಗಿದೆ.

ಬ್ಯಾಂಕ್ ಎದುರು ಅಹೋರಾತ್ರಿ ಚಳುವಳಿ

ದಲಿತ ಕುಟುಂಬದ ರೈತರು ಇದೇ ಜಮೀನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಭೂಮಿ ಕಿತ್ತುಕೊಂಡರೆ ರೈತರು ಆತ್ಮ*ಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಬ್ಯಾಂಕ್ ನ ಅಧಿಕಾರಿಗಳು ಮಾತು ನೀಡಿದಂತೆ ರೈತನಿಂದ ಹಣ ಪಡೆದು ರೈತನ ಹೆಸರಿಗೆ ವಾಪಸ್ಸು ಭೂಮಿಯನ್ನು ನೀಡಬೇಕು. ಇಲ್ಲವಾದರೆ ಬ್ಯಾಂಕ್ ಎದುರು ಅಹೋರಾತ್ರಿ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಶ್ರೀನಿವಾಸ್ ಗೌಡ ಎಚ್ಚರಿಸಿದರು.

ಈ ವೇಳೆ ರೈತ ಸಂಘದ ಮುಖಂಡರಾದ ಸಿದ್ದರಾಮಣ್ಣ, ಗೋವಿಂದರಾಜು, ದೇವರಾಜು, ಚೆಂಡೂರು ರಹಮತ್, ಚರಣ್ ರಾಜ್, ಬ್ಯಾಟಪ್ಪ, ಪರಮೇಶ್ವರಯ್ಯ, ಶಶಿಕುಮಾರ್, ನಾಗರಾಜು, ಮಹಾಲಿಂಗಯ್ಯ ಸೇರಿದಂತೆ ರೈತ ಮುಖಂಡರು ಇದ್ದರು.

PREV
Read more Articles on
click me!

Recommended Stories

ವಾಹನ ಸವಾರರಿಗೆ ಬಿಗ್ ಶಾಕ್: 3 ರೂ. ದರ ಏರಿಕೆಯ ಬಳಿಕ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ₹95 ಒಳಗೆ, ರಾಯಚೂರಿನಲ್ಲಿ ₹107!
ಜನಗಣತಿ ಕರ್ತವ್ಯದಲ್ಲಿದ್ದ ಶಿಕ್ಷಕಿ ರಸ್ತೆ ಅಪಘಾತದಲ್ಲಿ ದುರ್ಮರಣ; ಟ್ರ್ಯಾಕ್ಟರ್‌ಗೆ ಬಲಿಯಾದ ಪೂರ್ಣಿಮಾ ಭಟ್