Uttara Kannada: ಶಿಕ್ಷಣ ಸಂಸ್ಥೆಗೆ ಜಾಗದ ಮಾಲೀಕರಿಂದ ತೊಂದರೆ?: ಆರೋಪಿಗಳ ಜತೆ ಪೊಲೀಸರು ಶಾಮೀಲು!

By Govindaraj SFirst Published Dec 11, 2023, 9:43 PM IST
Highlights

ಆ ಯುವತಿ ತನ್ನದೇ ಒಂದು ಟ್ರಸ್ಟ್ ಪ್ರಾರಂಭಿಸಿ ತನ್ನೂರಿನ ಮಕ್ಕಳಿಗೆ ಸಹಾಯವಾಗಲೆಂದು ಸಣ್ಣ ನರ್ಸರಿ ಕೂಡಾ ನಡೆಸುತ್ತಿದ್ದಾರೆ. ಅಲ್ಲದೇ, ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭಿಸುವ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆಗೂ ಅರ್ಜಿ ಸಲ್ಲಿಸಿದ್ದಾರೆ. 

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಉತ್ತರ ಕನ್ನಡ

ಅಂಕೋಲಾ (ಡಿ.11): ಆ ಯುವತಿ ತನ್ನದೇ ಒಂದು ಟ್ರಸ್ಟ್ ಪ್ರಾರಂಭಿಸಿ ತನ್ನೂರಿನ ಮಕ್ಕಳಿಗೆ ಸಹಾಯವಾಗಲೆಂದು ಸಣ್ಣ ನರ್ಸರಿ ಕೂಡಾ ನಡೆಸುತ್ತಿದ್ದಾರೆ. ಅಲ್ಲದೇ, ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭಿಸುವ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆಗೂ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಜಾಗ ಹಾಗೂ ಕಟ್ಟಡ ಲೀಸ್‌ಗೆ ನೀಡಿದ್ದ ಜಾಗದ ಮಾಲಕರು ಕಳೆದ ಮೂರು ವರ್ಷಗಳಿಂದ ಸೈಲೆಂಟ್ ಇದ್ದರೂ ಕಳೆದ 7-8 ತಿಂಗಳಿಂದ ತರಕಾರು ಮಾಡಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸರಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಕೂಡಾ ಜಾಗದ ಮಾಲಕರಿಗೆ ಸಾಥ್ ನೀಡುತ್ತಿದ್ದಾರೆ ಎಂದು ದೂರಲಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಗ್ರಾಮದಲ್ಲಿ ಅಕ್ಷರ ಅಧ್ಯಯನ ಬ್ರೈಟ್ ಎಜುಕೇಶನ್ ಟ್ರಸ್ಟ್  ಹೆಸರಿನಲ್ಲಿ ಎಬಿಇಟಿ ಪ್ರಿ ನರ್ಸರಿ ಶಾಲೆಯನ್ನು ಕಳೆದ 3 ವರ್ಷದಿಂದ ಸಂಸ್ಥೆಯ ಮುಖ್ಯಸ್ಥೆ ರಂಜಿತಾ ನಡೆಸುತ್ತಿದ್ದಾರೆ. ಇದಕ್ಕಾಗಿ ಜಯರಾಮ್ ಹಮ್ಮಣ್ಣ ನಾಯ್ಕ್ ಎಂಬವರಿಂದ 30 ವರ್ಷದ ಲೀಸ್ ನಲ್ಲಿ ಜಾಗ ಹಾಗೂ ಕಟ್ಟಡವನ್ನು ಪಡೆದುಕೊಂಡಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಶಾಲೆಯನ್ನು ತಮ್ಮ ಸುಪರ್ದಿಗೆ ನೀಡಲು ಜಾಗದ ಮಾಲಕ ಒತ್ತಾಯಿಸಿದ್ದರು ಎಂದೆನ್ನಲಾಗಿದ್ದು, ಇದಕ್ಕೆ ಒಪ್ಪದಾಗ ಸಂಸ್ಥೆಯನ್ನು ತೆರವುಗೊಳಿಸುವಂತೆ  ಜಾಗದ ಮಾಲಕ ಜಯರಾಮ್ ಹಮ್ಮಣ್ಣ ನಾಯ್ಕ ಶಾಲೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಡ ಹಾಕಿದ್ದಾರೆ ಎಂದು ದೂರಲಾಗಿದೆ. 

ನಿವೃತ್ತ ಅಧಿಕಾರಿ ನೇತೃತ್ವದಲ್ಲಿ ಅರ್ಜುನ ಸಾವಿನ ತನಿಖೆ: ಸಚಿವ ಈಶ್ವರ ಖಂಡ್ರೆ

30 ವರ್ಷ ಲೀಸ್ ಇರುವುದರಿಂದ ಸಂಸ್ಥೆಯ ಮಾಲಕಿ ರಂಜಿತಾ ತೆರವುಗೊಳಿಸಲು ನಿರಾಕರಿಸಿದ್ದಕ್ಕೆ ಜಾಗದ ಮಾಲಕರ ಸಹೋದರರಾದ ವೆಂಕಟರಮನ ನಾಯ್ಕ್, ರಾಜು ನಾಯ್ಕ್, ಗೋವಿಂದ ನಾಯ್ಕ್ ಕಿರಿಕ್ ಮಾಡುತ್ತಿದ್ದು, ಕತ್ತಿ ಹಿಡಿದುಕೊಂಡು ಶಾಲೆಗೆ ಬಂದು ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜೊತೆ ಶಾಲೆಯ ದ್ವಜ ಸ್ಥಂಭವನ್ನು ಜೆಸಿಬಿ ತರಿಸಿ ಕಿತ್ತು ಹಾಕಿ ಎಚ್ಚರಿಕೆ ನೀಡಿದ್ದಲ್ಲದೇ, ಶಾಲೆಯ ಮುಂಭಾಗದ ಹುಲ್ಲಿಗೆ ಬೆಂಕಿ ಹಾಕಿದ್ದಾರೆ ಎಂದೆನ್ನಲಾಗಿದೆ. ಈ ಕುರಿತು ಸಿಸಿ ಕ್ಯಾಮೆರಾ ವಿಡಿಯೋ ಸಮೇತ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರನ್ನು ಸಂಸ್ಥೆಯ ಮುಖ್ಯಸ್ಥೆ ದಾಖಲಿಸಿದ್ದರು. 

ಆದ್ರೆ, ಪೊಲೀಸರು ಆರೋಪಿಗಳ ಜತೆಗೂಡಿ ನವೆಂಬರ್ 29ರಂದು ಸಾಕ್ಷಿ ಕೊರತೆ ಕಾರಣ ನೀಡಿ ಬಿ.ರಿಪೋರ್ಟ್ ಹಾಕಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥೆ ರಂಜಿತಾ ಆರೋಪಿಸಲಾಗಿದೆ.  ಇನ್ನು ಫ್ರೀ ನರ್ಸರಿ ಶಾಲೆಯ ಮೇಲೆ ಮಾಲಕರು ಮಾಡಿದ ದೌರ್ಜನ್ಯದಿಂದ 10ರಿಂದ 15ಕ್ಕೂ ಹೆಚ್ಚು ಮಕ್ಕಳಿದ್ದ ಶಾಲೆಯಲ್ಲಿ ಇದೀಗ ಮೂವರು ಮಕ್ಕಳು ಮಾತ್ರ ಕಲಿಯುತ್ತಿದ್ದು, ಶಾಲೆ ಮುಚ್ಚುವ ಹಂತ ತಲುಪಿದೆ ಎಂದು ದೂರಲಾಗಿದೆ. ಲೀಸ್ ನೀಡುವ ಮುನ್ನ ಯಾವುದೇ ಸಮಸ್ಯೆ ಮಾಡದ ಮಾಲಕರು ಹಾಗೂ ಅವರ ಸಹೋದರರು ಲೀಸ್ ನೀಡಿದ ಮೂರು ವರ್ಷದ ಬಳಿಕ ಹಲವು ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಜಾತಿ ಗಣತಿ ವರದಿ ತಿಳಿಯದೇ ಕೆಲವರ ವಿರೋಧ: ಸಚಿವ ಶಿವರಾಜ ತಂಗಡಗಿ

ಜತೆಗೆ  ಶಾಲೆ ನಡೆಸಲು ಬಿಇಒ ಕೂಡಾ ಅನುಮತಿ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿರುವ ಶಾಲೆಯ ಮುಖ್ಯಸ್ಥೆ ರಂಜಿತಾ, ಇದೀಗ ನ್ಯಾಯಕ್ಕಾಗಿ ಜಾಗದ ಮಾಲಕರು, ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಬೇರೆಡೆ ಶಾಲೆಗಳಿಗೆ ತುಂಬಾ ದೂರ ಪ್ರಯಾಣ ಮಾಡಬೇಕಾದ್ದರಿಂದ ಮಕ್ಕಳಿಗೆ ಸಾಗಲು ಕಷ್ಟ. ಈ ಕಾರಣದಿಂದ ಬೇಲೆಕೇರಿಯಲ್ಲಿರುವ ಅಕ್ಷರ ಅಧ್ಯಯ‌ನ ಶಾಲೆಯಲ್ಲೇ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಮಕ್ಕಳ ಪೋಷಕರು ಕೂಡಾ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಅಕ್ಷರ ಅಧ್ಯಯನ ಸಂಸ್ಥೆ ಮುಖ್ಯಸ್ಥೆ ಮಾಡಿರುವ ಆರೋಪದಲ್ಲಿ ಎಷ್ಟು ಸತ್ಯವಿದೆ ಎಂದು ಸಂಬಂಧಪಟ್ಟ ಇಲಾಖೆಯ ತನಿಖೆ ನಡೆಸಬೇಕಿದ್ದು, ಪ್ರಕರಣದಲ್ಲಿ ನೈಜ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

click me!