ವಾಹನ ಕಾಯ್ದೆ ಉಲ್ಲಂಘನೆ: 7 ತಿಂಗಳಲ್ಲಿ 2.78 ಲಕ್ಷ ದಂಡ ವಸೂಲಿ

By Kannadaprabha NewsFirst Published Jul 20, 2019, 10:06 AM IST
Highlights

ರಸ್ತೆ ನಿಯಮಗಳನ್ನು ಪಾಲಿಸೋದಕ್ಕೆ ಎಷ್ಟು ಸೂಚನೆ ಕೊಟ್ಟರೂ ಕಾಯ್ದೆ ಉಲ್ಲಂಘನೆ ನಡೆಯುತ್ತಲೇ ಇದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಜನವರಿಯಿಂದ ಜೂನ್‌ ಅಂತ್ಯದವರೆಗೆ ವಾಹನ ಕಾಯ್ದೆ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ .278200 ದಂಡ ವಸೂಲಿ ಮಾಡಲಾಗಿದೆ.

ಚಿಕ್ಕಮಗಳೂರು(ಜು.20): ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಜನವರಿಯಿಂದ ಜೂನ್‌ ಅಂತ್ಯದವರೆಗೆ ವಾಹನ ಕಾಯ್ದೆ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ .278200 ದಂಡ ವಸೂಲಿ ಮಾಡಲಾಗಿದೆ ಎಂದು ಪಿಎಸ್‌ಐ ಟಿ.ತೇಜಸ್ವಿ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಠಾಣಾ ವ್ಯಾಪ್ತಿಯಲ್ಲಿ ಭಾರತೀಯ ಮೋಟಾರ್‌ ವಾಹನ ಕಾಯ್ದೆ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ತಪಾಸಣೆ ವೇಳೆ 6 ತಿಂಗಳಲ್ಲಿ ಬೃಹತ್‌ ಮೊತ್ತದಲ್ಲಿ ದಂಡ ವಸೂಲಿ ಮಾಡಲಾಗಿದೆ. ಕಳೆದ 6 ತಿಂಗಳಲ್ಲಿ ಒಟ್ಟು 1450 ಕೇಸ್‌ಗಳನ್ನು ಹಾಕಲಾಗಿದೆ. 1450 ಪ್ರಕರಣಗಳಲ್ಲಿ ಕೆಲವು ಪ್ರಕರಣಗಳಿಗೆ ನ್ಯಾಯಾಲಯದಲ್ಲಿ ದಂಡ ಪಾವತಿಸಲು ಸೂಚಿಸಲಾಗಿದೆ. ಇದರಲ್ಲಿ 36,600 ಗಳನ್ನು ಪ್ರಕರಣ ದಾಖಲಿಸಿಕೊಂಡ ವ್ಯಕ್ತಿಗಳು ನ್ಯಾಯಾಲಯದಲ್ಲಿ ದಂಡ ಪಾವತಿಸಿದ್ದಾರೆ.

ಪರವಾನಗಿ ರದ್ದು:

ಠಾಣಾ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ ಕಾನೂನು ಉಲ್ಲಂಘಿಸಿದ 8 ವ್ಯಕ್ತಿಗಳ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ವಾಹನಗಳಿಗೆ ಎಫ್‌ಸಿ ಮಾಡಿಸದೇ ಚಲಾಯಿಸುತ್ತಿದ್ದ ಮೂರು ಗೂಡ್ಸ್‌ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಸೈಲನ್ಸರ್ ವಶಕ್ಕೆ:

ಠಾಣಾ ವ್ಯಾಪ್ತಿಯಲ್ಲಿ ಶಬ್ಧ ಮಾಲಿನ್ಯ ಮಾಡುತ್ತ ಕರ್ಕಶ ಶಬ್ಧ ಹೊಂದಿದ್ದ ಸುಮಾರು 20 ಬೈಕ್‌ಗಳ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು, ಬೈಕ್‌ಗಳ ಮಾಲೀಕರಿಗೆ ಎಚ್ಚರಿಗೆ ನೀಡಲಾಗಿದೆ. ಹೈ ಬೀಮ್‌ ಲೈಟ್‌ಗಳನ್ನು ಅಳವಡಿಸಿಕೊಂಡ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದೆ. ಹೈ ಬೀಮ್‌ ಲೈಟ್‌ ಅಳವಡಿಸಿಕೊಂಡವರು ಕೂಡಲೇ ತೆರವುಗೊಳಿಸಬೇಕು ಸೂಚಿಸಿದರು.

ಠಾಣಾ ವ್ಯಾಪ್ತಿಯಲ್ಲಿ ವಾಹನ ಕಾಯ್ದೆಗಳನ್ನು ಹಲವರು ಉಲ್ಲಂಘಿಸುತ್ತಿದ್ದಾರೆ. ಪ್ರಮುಖವಾಗಿ ಹೆಲ್ಮೆಟ್‌ ಧರಿಸದೇ, ವಿಮೆ ಇಲ್ಲದೇ ಹಾಗೂ ಹೊಗೆ ತಪಾಸಣೆ ಪತ್ರವಿಲ್ಲದೇ ಹಲವು ವಾಹನ ಚಲಾಯಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ.

ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ, ಮದ್ಯಪಾನ ಮಾಡಿ, ವಿಮೆ ಇಲ್ಲದೇ ವಾಹನ ಚಾಲನೆ ಮಾಡುವುದು ಕಾನೂನು ದೃಷ್ಠಿಗಿಂತಲೂ ತಮ್ಮ ಜೀವನದ ದೃಷ್ಠಿಯಿಂದ ವಾಹನ ಚಾಲಕರು ಪರಿಗಣಿಸಬೇಕು ಎಂದು ಪಿಎಸ್‌ಐ ಹೇಳಿದ್ದಾರೆ.

click me!