ಕೊಡಗಿನ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ನಿರಾಸೆ

By Kannadaprabha NewsFirst Published Jun 16, 2020, 8:59 AM IST
Highlights

ಕೊಡಗಿನಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಚುಮು ಚುಮು ಚಳಿ... ಮಳೆಯ ಆಸ್ವಾದವನ್ನು ಸವಿಯಲು ಹಾಗೂ ಮಂಜಿನ ವಾತಾವರಣದ ನಡುವೆ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಕೆಲವು ಪ್ರವಾಸಿಗರು ಜಿಲ್ಲೆಯತ್ತ ಬರುತ್ತಿದ್ದಾರೆ. ಆದರೆ ಕೊರೋನಾದಿಂದಾಗಿ ಕೊಡಗಿನ ಎಲ್ಲ ಪ್ರವಾಸಿ ತಾಣಗಳು ಬಂದ್‌ ಆಗಿರುವುದರಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಗದೆ, ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ.

ಮಡಿಕೇರಿ(ಜೂ.16): ಕೊಡಗಿನಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಚುಮು ಚುಮು ಚಳಿ... ಮಳೆಯ ಆಸ್ವಾದವನ್ನು ಸವಿಯಲು ಹಾಗೂ ಮಂಜಿನ ವಾತಾವರಣದ ನಡುವೆ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಕೆಲವು ಪ್ರವಾಸಿಗರು ಜಿಲ್ಲೆಯತ್ತ ಬರುತ್ತಿದ್ದಾರೆ. ಆದರೆ ಕೊರೋನಾದಿಂದಾಗಿ ಕೊಡಗಿನ ಎಲ್ಲ ಪ್ರವಾಸಿ ತಾಣಗಳು ಬಂದ್‌ ಆಗಿರುವುದರಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಗದೆ, ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಮಾಚ್‌ರ್‍ 20ರಿಂದ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದೀಗ ಎರಡೂವರೆ ತಿಂಗಳಾದರೂ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಿಲ್ಲ. ಪ್ರವಾಸಿಗರು ತಂಗಲು ಜಿಲ್ಲೆಯ ಹೋಂಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಹಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ. ಆದರೆ ಪ್ರವಾಸಿ ತಾಣಗಳೇ ಬಂದ್‌ ಆಗಿರುವಾಗ ಪ್ರವಾಸಿಗರು ಯಾಕೆ ಜಿಲ್ಲೆಗೆ ಬರುತ್ತಾರೆ ಎನ್ನುವುದು ಕೆಲವರ ಪ್ರಶ್ನೆ.

ಪಾಸಿಟಿವ್ ಪ್ರಕರಣ ಹೆಚ್ಚಿರುವ ಉಡುಪಿಯಲ್ಲಿ 51 ಪರೀಕ್ಷಾ ಕೇಂದ್ರ, 14,034 ಪರೀಕ್ಷಾರ್ಥಿಗಳು

ಮಳೆಗಾಲ ಆರಂಭವಾಗಿರುವುದರಿಂದ ಮಡಿಕೇರಿಯಲ್ಲಿ ಮಂಜಿನ ವಾತಾವರಣ ಸಾಮಾನ್ಯವಾಗಿ ಕಂಡುಬರುತ್ತದೆ. ಮಂಜಿನ ವಾತಾವರಣ ಹಾಗೂ ವಿವಿಧ ಪ್ರವಾಸಿ ತಾಣಗಳನ್ನು ಕಣ್ತುಂಬಿಸಿಕೊಳ್ಳಲು ಕೆಲವು ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ. ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟಿಗೆ ಪ್ರತಿ ದಿನ ಪ್ರವಾಸಿಗರು ಬಂದು ಹೋಗುತ್ತಿರುವುದು ಸಾಮಾನ್ಯವಾಗಿದೆ. ರಾಜಾಸೀಟ್‌ನ ಪ್ರವೇಶ ದ್ವಾರ ಬಂದ್‌ ಆಗಿದ್ದು, ಅದರ ಮುಂಭಾಗ ಗೇಟಿನಿಂದಲೇ ರಾಜಾಸೀಟಿನ ಸೌಂದರ್ಯವನ್ನು ನೋಡಿ ಪ್ರವಾಸಿಗರು ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ. ಮಳೆಗಾಲದಲ್ಲಿ ರಾಜಾಸೀಟಿನಲ್ಲಿ ಮಂಜು ಮುಸುಕಿದ ವಾತಾವರಣ ವಿಶೇಷ ಅನುಭವ ನೀಡುತ್ತದೆ. ಇದಕ್ಕಾಗಿಯೇ ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಯುವಕರ ಬೈಕ್‌ ರೈಡ್‌: ಮಳೆಗಾಲ ಆರಂಭವಾಗುತ್ತಿದ್ದಂತೆ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಹಾಗೂ ಮಳೆಗಾಲದಲ್ಲಿ ಇಲ್ಲಿನ ತಿರುವು ಮುರುವು ರಸ್ತೆಗಳಲ್ಲಿ ಬೈಕ್‌ ರೈಡ್‌ ಮಾಡುವುದು ಯುವಕರಿಗೊಂದು ಕ್ರೇಜ್‌. ಈ ಬಾರಿಗೆ ವಿವಿಧ ಬಗೆಯ ಮೋಟಾರು ಬೈಕ್‌ಗಳಲ್ಲಿ ಯುವಕರ ತಂಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಆದರೆ ಪ್ರವಾಸಿ ತಾಣಗಳು ಬಂದ್‌ ಆಗಿರುವುದು ಅವರ ಉತ್ಸಾಹಕ್ಕೆ ತಣ್ಣೀರೆರೆಚಿದೆ.

ಜಲಪಾತಗಳೂ ಬಂದ್‌: ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಪ್ರವಾಸಿಗರು ಜಲಪಾತಗಳ ಸೊಬಗನ್ನು ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದೀಗ ಕೊರೋನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಪ್ರಮುಖ ಜಲಪಾತಗಳಾದ ಅಬ್ಬಿಜಲಪಾತ, ಮಲ್ಲಳ್ಳಿ, ಚೇಲವಾರ, ಇರ್ಪು ಸೇರಿದಂತೆ ಹಲವು ಜಲಪಾತಗಳ ವೀಕ್ಷಣೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಇದರಿಂದ ಮಳೆಗಾಲದಲ್ಲಿ ಪ್ರವಾಸಿಗರಿಗೆ ಜಲಪಾತದ ಸೌಂದರ್ಯವನ್ನು ನೋಡದಂತಾಗಿದೆ. ಜಿಲ್ಲಾಡಳಿತ ಬಂದ್‌ ತೆರವುಗೊಳಿಸಿದ ಬಳಿಕವಷ್ಟೇ ಪ್ರಕೃತಿ ಸೌಂದರ್ಯ ನೋಡುವ ಪ್ರವಾಸಿಗರ ಆಸೆ ಈಡೇರಲಿದೆ.

40 ಜನ ಐಸಿಯುಗೆ: ರಾಜ್ಯದಲ್ಲಿ ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್‌ ಹೆಚ್ಚಳ!

ರ‍್ಯಾಫ್ಟಿಂಗ್‌ಗೂ ಅವಕಾಶವಿಲ್ಲ: ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಮೊದಲೇ ಬಂದ್‌ ಆಗಿದೆ. ದುಬಾರೆಯ ಕಾವೇರಿ ನದಿಯಲ್ಲಿ ಮಳೆಗಾಲದ ಸಂದರ್ಭ ರಾರ‍ಯಫ್ಟಿಂಗ್‌ ಜಲ ಕ್ರೀಡೆ ನಡೆಯುತ್ತದೆ. ಇದೀಗ ಉತ್ತಮ ಮಳೆ ಕೂಡ ಆಗುತ್ತಿದ್ದು, ನದಿಗಳಲ್ಲಿ ಜಲ ಕ್ರೀಡೆಗೆ ಸೂಕ್ತ ಸಮಯವಾಗಿದೆ. ಆದರೆ ಕೊರೋನಾದಿಂದಾಗಿ ರಾರ‍ಯಫ್ಟಿಂಗ್‌ಗೆ ಸದ್ಯಕ್ಕಂತು ಅವಕಾಶ ದೊರಕುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಲಿದೆ.

ಪ್ರವಾಸಿ ತಾಣಗಳ ಸೌಂದರ್ಯ ಹೆಚ್ಚಳ

ಕೊಡಗು ಜಿಲ್ಲೆ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ಎಲ್ಲರನ್ನೂ ಆಕರ್ಷಿಸುತ್ತದೆ. ಕೊಡಗಿನ ಹಲವು ಪ್ರವಾಸಿ ತಾಣಗಳು ಬಂದ್‌ ಆಗಿ ಎರಡೂ ವರೆ ತಿಂಗಳು ಕಳೆದಿದೆ. ಪ್ರವಾಸಿಗರ ಹೆಜ್ಜೆ ಗುರುತು ಇಲ್ಲದೆ ಈಗ ಹಲವು ದಿನಗಳು ಸರಿದಿದ್ದು, ಪ್ರವಾಸಿ ತಾಣಗಳ ಸೌಂದರ್ಯ ಮತ್ತಷ್ಟುಹೆಚ್ಚಳವಾಗಿದೆ. ಮುಂಗಾರು ಮಳೆಯೂ ಆಗಮಿಸಿರುವುದರಿಂದ ಪ್ರವಾಸಿ ತಾಣಗಳು ಹಸಿರು ಹಸಿರಾಗಿ ಕಂಗೊಳಿಸುತ್ತಿದೆ. ಜಲಪಾತಗಳಂತೂ ಮೈದುಂಬಿ ಹರಿಯಲು ಆರಂಭಿಸಿವೆ. ಮಡಿಕೇರಿಯಲ್ಲಂತೂ ಮಂಜು ಮುಸುಕಿದ ವಾತಾವರಣ ಎಲ್ಲರನ್ನೂ ಪುಳಕಗೊಳಿಸುತ್ತಿದೆ.

ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ?

ರಾಜಾಸೀಟ್‌ಗೆ ಪ್ರತಿ ದಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಉದ್ಯಾನವನ ಬಂದ್‌ ಆಗಿರುವುದಿಂದ ಹೊರಗಿನಿಂದಲೇ ನೋಡಿ ಪ್ರವಾಸಿಗರು ಹಿಂತಿರುಗುತ್ತಾರೆ. ಪ್ರವಾಸಿ ತಾಣ ಬಂದ್‌ ಆಗಿರುವುದರಿಂದ ವ್ಯಾಪಾರ ಕೂಡ ಆಗುತ್ತಿಲ್ಲ. ಸ್ಥಳೀಯರಿಂದ ಮಾತ್ರ ವ್ಯಾಪಾರ ಆಗುತ್ತಿದೆ ಎಂದು ರಾಜಾಸೀಟು ಗೂಡಂಗಡಿ ವ್ಯಾಪಾರಿ ಕಲಂದರ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!