ಕೊಪ್ಪಳ: ಮೂವರು ಮಕ್ಕಳ ಜೀವ ಕಳೆಯಿತು ಮರಳಿನ ರಾಶಿ..!

By Web DeskFirst Published Aug 28, 2019, 3:38 PM IST
Highlights

ಅಕ್ರಮ ಮರಳುಗಾರಿಕೆ ದಂಧೆ ಎಲ್ಲಡೆ ವ್ಯಾಪಿಸಿದ್ದು, ಮರಳಿನ ರಾಶಿ ಮೂವರು ಅಮಾಯಕ ಮಕ್ಕಳ ಜೀವ ತೆಗೆದಿದೆ. ಮರಳಿನ ದಿಬ್ಬ ಕುಸಿದು ಮೂರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಜರುಗಿದೆ. ಆಟವಾಡಲು ತೆರಳಿದ್ದ ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೊಪ್ಪಳ (ಆ.28): ಮರಳಿನ ದಿಬ್ಬ ಕುಸಿದು ಮೂರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಜರುಗಿದೆ. ಮೃತ ಮಕ್ಕಳನ್ನು ಸೋನಂ (7), ಸವಿತಾ (4) ಹಾಗೂ ಕವಿತಾ (2) ಎಂದು ಗುರುತಿಸಲಾಗಿದೆ.

ಪಶ್ಚಿಮ ಬಂಗಾಳ ಮೂಲದ ಕೆಲವು ಅಲೆಮಾರಿ ಕುಟುಂಬಗಳು ಕೂಲಿಯನ್ನು ಅರಸಿ ಕೊಪ್ಪಳಕ್ಕೆ ಬಂದು ನವಲಿ ಎಂಬ ಗ್ರಾಮದಲ್ಲಿ ನೆಲೆಸಿತ್ತು. ಇಂದು ಮನೆಯ ಮುಂದೆ ಆಟವಾಡುತ್ತಿದ್ದ ಈ ಅಲೆಮಾರಿ ಕುಟುಂಬಗಳ ಮಕ್ಕಳು ಮರಳಿನ ಗುಡ್ಡ ಗವಿಯ ಆಕಾರದಲ್ಲಿರುವುದನ್ನು ಕಂಡು  ಅಲ್ಲಿಗೆ ಆಟವಾಡಲು ತೆರಳಿದ್ದಾರೆ.

ಸಾಮೂಹಿಕ ವಿವಾಹದಲ್ಲಿ ಅಸ್ಪೃಶ್ಯತೆಯ ಕರಿನೆರಳು!

ಈ ವೇಳೆ ಮರಳಿನ ಗುಡ್ಡ ಅಚಾನಕ್ಕಾಗಿ ಕುಸಿದು ಮೂರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ರೋಷನ್, ಕಿರಣ್ ಹಾಗೂ ಬಾಬು ಎಂಬ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನವಲಿ ಗ್ರಾಮದ ಹಳ್ಳದಲ್ಲಿ ಗುಣಮಟ್ಟದ ಮರಳಿಗಾಗಿ ಕೆಲವು ದಂಧೆಕೋರರು ಬಹುದಿನಗಳಿಂದ ಮರಳು ಮಾಫಿಯಾ ನಡೆಸುತ್ತಿದ್ದಾರೆ.

ಇಲ್ಲಿಂದ ಮರಳನ್ನು ಕದ್ದು ಬೇರೆಡೆಗೆ ಸಾಗಿಸುತ್ತಿದ್ದಾರೆ. ಹೀಗೆ ಮರಳು ಸಾಗಿಸುವಾಗ ಗುಡ್ಡ ಕುಸಿದು ಕಾರ್ಮಿಕರು ಸಾವಿಗೀಡಾಗಿರುವ ನಿದರ್ಶನಗಳು ಜಿಲ್ಲೆಯಲ್ಲಿ ಸಾಕಷ್ಟಿವೆ. ಆದರೆ, ಈ ಕುರಿತು ಈವರೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾಮ ಇದೇ ಮರಳು ಮಾಫಿಯಾ ಇದೀಗ ಅಲೆಮಾರಿ ಜನರ ಅಮಾಯಕ ಮಕ್ಕಳನ್ನು ಬಲಿ ತೆಗೆದುಕೊಂಡಿರುವುದು ಮಾತ್ರ ದುರಂತ.

click me!