
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಫೆ.02): ನಮ್ಮ ಸಂಸ್ಕೃತಿ ನಮ್ಮ ಹಕ್ಕು ಎಂಬ ಘೋಷವಾಕ್ಯದ ಅಡಿಯಲ್ಲಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಆರಂಭವಾಗಿರುವ ಕೊಡವ ಭಾಷಿಕರ ಕೊಡವಾಮೆರ ಬಾಳೋ ಪಾದಯಾತ್ರೆಗೆ ಸಹಸ್ರ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದಾರೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಉಡುಗೆ ತೊಡುಗೆಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು ಅದರ ರಕ್ಷಣೆ ಆಗಬೇಕು ಎಂದು ಆಗ್ರಹಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಕೊಡಗು ಕೇರಳ ಗಡಿಭಾಗವಾದ ಕುಟ್ಟದಿಂದ ಮಡಿಕೇರಿಗೆ ನಡೆಯುತ್ತಿರುವ ಪಾದಯಾತ್ರೆಗೆ ಭಾನುವಾರ ಚಾಲನೆ ದೊರೆತ್ತಿದೆ.
ಕುಟ್ಟದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಹ್ಮಣಿ ಸೇರಿದಂತೆ ವಿವಿಧ ಕೊಡವ ಸಮಾಜಗಳು ಹಾಗೂ ಕೊಡವ ಭಾಷಿಕ ಸಮುದಾಯಗಳ ಮುಖಂಡರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. 8 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕೊಡವ ಭಾಷಿಕ ಸಮುದಾಯಗಳ ಜನರು ತಮ್ಮ ಸಾಂಪ್ರದಾಯಿಕ ಉಡುಗೆಯಾದ ಕುಪ್ಯೆಚಾಲೆ ತೊಟ್ಟಿದ್ದರೆ, ಕೊಡವತಿಯರು ತಮ್ಮದೇ ಕೊಡವ ಸೀರೆ ತೊಟ್ಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ನಮ್ಮ ಸಂಸ್ಕೃತಿ ನಮ್ಮ ಹಕ್ಕು ಎಂಬ ನಾಮಫಲಕಗಳ ಹಿಡಿದು ಮೌನವಾಗಿ ಪಾದಯಾತ್ರೆಯಲ್ಲಿ ಸಾಗಿದರು. ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನರು ಕೊಡವರು ರಸ್ತೆಯಲ್ಲಿ ಮೂರು ನಾಲ್ಕು ಕಿಲೋ ಮೀಟರ್ ದೂರದವರೆಗೆ ರಸ್ತೆ ತುಂಬ ನಡೆದು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಮೊದಲ ದಿನವೇ ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ 18 ಕಿಲೋ ಮೀಟರ್ ಉರಿ ಬಿಸಿಲನ್ನೂ ಲೆಕ್ಕಿಸಿದೇ ಪಾದಯಾತ್ರೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಮಧ್ಯಾಹ್ನದ ಸಮಯಕ್ಕೆ ಪಾದಯಾತ್ರೆ ಬಂದು ಕಾಕೂರು ತಲುಪಿದ ಜನರು ಅಲ್ಲಿ ಮಧ್ಯಾಹ್ನದ ಉಪಹಾರ ಸೇವಿಸಿ ಅಲ್ಲಿಂದ ಮತ್ತೆ ತಮ್ಮ ಪಾದಯಾತ್ರೆ ಮುಂದುವರಿಸಿದರು. ಅಲ್ಲಿಂದ ಟಿ. ಶೆಟ್ಟಿಗೇರಿವರೆಗೆ ನಡೆದು ಸಮಾವೇಶಗೊಂಡರು. ಮೊದಲ ದಿನದ ಪಾದಯಾತ್ರೆಯಲ್ಲಿ ಒಟ್ಟು 18 ಕಿಲೋಮೀಟರ್ ಕ್ರಮಿಸಿದರು. ಈ ವೇಳೆ ಮಾತನಾಡಿದ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಇತ್ತೀಚಿನ ಕೆಲವು ವರ್ಷಗಳಿಂದ ಕೊಡವ ಭಾಷಿಗರ ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಖಂಡಿಸಿ ಕೊಡವ ಭಾಷಿಗರು ಪಾದಯಾತ್ರೆ ಆರಂಭಿಸಿದ್ದೇವೆ.
ಇಲಾಖೆಗಳ ಗೊಂದಲಕ್ಕೆ ಮೂರು ವರ್ಷಗಳಿಂದ ರಸ್ತೆ ಕಾಮಗಾರಿ ಸ್ಥಗಿತ: ಬೇಸತ್ತ ಜನರಿಂದ ಮುತ್ತಿಗೆ ಹಾಕಿ ಆಕ್ರೋಶ
ಕುಟ್ಟದಿಂದ ಜಿಲ್ಲಾಕೇಂದ್ರ ಮಡಿಕೇರಿವರೆಗೆ ಒಟ್ಟು 80 ಕಿಲೋ ಮೀಟರ್ ಪಾದಯಾತ್ರೆ ನಡೆಸಲಿದ್ದೇವೆ. ಟಿ.ಶೆಟ್ಟಿಗೇರಿ, ಪೊನ್ನಂಪೇಟೆ, ಬಿಟ್ಟಂಗಾಲ, ಮೂರ್ನಾಡು ನಂತರ ಮೇಕೇರಿಗೆ ತಲುಪಿ ಅಲ್ಲಿಂದ ಮಡಿಕೇರಿ ತಲುಪಲಿದೆ. ಫೆಬ್ರವರಿ 7 ರಂದು ಮಡಿಕೇರಿಯಲ್ಲಿ ಕನಿಷ್ಠ 25 ಸಾವಿರ ಜನರು ಸೇರಲಿದ್ದೇವೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ದಬ್ಬಾಳಿಕೆ ಮಾಡಲು ಬಂದರೆ ಸುಮ್ಮನಿರಲ್ಲ ಎನ್ನುವುದರ ಎಚ್ಚರಿಕೆ ಇದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇದು ಯಾರ ವಿರುದ್ಧವೂ ನಮ್ಮ ಪ್ರತಿಭಟನೆಯಲ್ಲ. ಇದು ನಮ್ಮ ಸಂಸ್ಕೃತಿ, ಆಚಾರ, ವಿಚಾರ ಉಡುಗೆ ತೊಡುಗೆಗಳ ರಕ್ಷಣೆಗಾಗಿ ಎನ್ನುತ್ತಲೇ ಅಖಿಲ ಕೊಡವ ಸಮಾಜದ ತಮ್ಮ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಿದೆ.