'ಸಿದ್ದರಾಮಯ್ಯರನ್ನು ಬಲಿಪಶು ಮಾಡಲು ಹೊರಟಿದ್ದಾರೆ'

By Kannadaprabha NewsFirst Published Jan 8, 2023, 11:31 AM IST
Highlights

ಕೋಲಾರ ವಿಧಾನ ಸಭಾಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಬಲಿಕಾ ಬಕರಾ ಮಾಡಲು ಕಾಂಗ್ರೆಸ್‌ ಪಕ್ಷದ ಘಟಬಂಧನ್‌ ನಾಯಕರು ಹೊರಟಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಕ್ಷದ ಸಂಭವನೀಯ ಅಭ್ಯರ್ಥಿ ಸುಹೈಲ್‌ ದಿಲ್‌ ನವಾಜ್‌ ತಿಳಿಸಿದರು

 ಕೋಲಾರ  :  ಕೋಲಾರ ವಿಧಾನ ಸಭಾಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಬಲಿಕಾ ಬಕರಾ ಮಾಡಲು ಕಾಂಗ್ರೆಸ್‌ ಪಕ್ಷದ ಘಟಬಂಧನ್‌ ನಾಯಕರು ಹೊರಟಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಕ್ಷದ ಸಂಭವನೀಯ ಅಭ್ಯರ್ಥಿ ಸುಹೈಲ್‌ ದಿಲ್‌ ನವಾಜ್‌ ತಿಳಿಸಿದರು.

ನಗರ ಹೊರವಲಯದ ಖಾಸಗಿ ಹೋಟಲ್‌ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, (Congress)  ಪಕ್ಷದ ಶಾಸಕರು ಮುಖಂಡರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಬಳಿ ಹೋಗಲು ಮುಖ ಇಲ್ಲ, ಆದರಿಂದ ದೊಡ್ಡ ಮರದ ನೆರಳು ಅವರಿಗೆ ಬೇಕಾಗಿದ್ದು, ಮಾಜಿ ಮುಖ್ಯ ಮಂತ್ರಿ ಎಂಬ ಬೃಹತ್‌ ಮರ ಕರೆತಂದು ಅವರುಗಳ ಬೇಳೆ ಬೇಯಿಸಿ ಕೊಳ್ಳಲು ಘಟಬಂಧನ್‌ನ ಮುಖಂಡರು ಶಥಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನನ್ನ ಗೆಲುವಿಗೆ ತೊಂದರೆ ಇಲ್ಲ, ಸ್ಪರ್ಧೆ ಮಾಡಲು ಅಲ್ಪಸಂಖ್ಯಾತರ ವಿರೋಧ ಇದೆ. ಸಿದ್ದರಾಮಯ್ಯರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಇಷ್ಟಇಲ್ಲದಿದ್ದರೂ ಬಲವಂತವಾಗಿ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಳೆದ ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಹೆಚ್‌.ಮುನಿಯಪ್ಪರನ್ನು ಸೋಲಿಸಿ ಬಿ.ಜೆ.ಪಿಯ ಮುನಿಸ್ವಾಮಿನ್ನು ಗೆಲ್ಲಿಸಿದರು. ಈ ಬಾರಿ ಸಿದ್ದರಾಮಯ್ಯರನ್ನು ಬಲಿಕಾ ಬಕರಾ ಮಾಡಲು ಹೊರಟಿದ್ದಾರೆಂದು ಟೀಕಿಸಿದರು.

ದೆಹಲಿಯ ಮಾದರಿಯಲ್ಲಿ ಅರವಿಂದ್‌ ಕ್ರೇಜಿವಾಲ್‌ ಯೋಜನೆಗಳನ್ನು ಕ್ಷೇತ್ರದಲ್ಲಿ ತರಲು ಚಿಂತನೆ ನಡೆಸಿದ್ದು, ಈಗಾಗಲೇ ಪಕ್ಷದ ಯೋಜನೆಗಳನ್ನು ಕ್ಷೇತ್ರದ ಪ್ರತಿ ಮನೆ ಮನೆಗೆ ತಲುಪಿಸಲು ಪ್ರಚಾರ ಪ್ರಾರಂಭಿಸಲಾಗಿದೆ ಎಂದರು.

ಅಲ್ಪಸಂಖ್ಯಾತರ ಮತಗಳು ಎಂ.ಎಲ್‌.ಸಿ.ಅನಿಲ್‌ ಕುಮಾರ್‌ ಹಾಗೂ ನಿಸಾರ್‌ ಅಹ್ಮದ್‌ರ ಮನೆ ಮತಗಳಲ್ಲ,ಕನಿಷ್ಠ 100 ಮತಗಳನ್ನು ಅವರ ಬೂತ್‌ನಲ್ಲಿ ಅನಿಲ್‌ ಕುಮಾರ್‌ ಹಾಕಿಸಿಲ್ಲವೆಂದು ಛೇಡಿಸಿದರು.

ನಮಗೆ ಜನ ಬೆಂಬಲ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ತಾವು ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡವುದು ಖಚಿತ, ಜನರ ಆಶೀರ್ವಾದದಿಂದ ಗೆಲವು ಸಾಧಿಸುತ್ತೇನೆ. ಕಾಂಗ್ರೆಸ್‌ ಪಕ್ಷಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದರು.

ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ 

 ಮಂಡ್ಯ (ಜ. 04):  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಟಿಕೆಟ್‌ ಸಿಗುವ ಭರವಸೆ ಇದೆ ಎಂದು ಡಾ.ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಶಾಸಕನಾಗಿ ಆಯ್ಕೆಯಾದರೆ ಕ್ಷೇತ್ರದ ಜನತೆಗೆ ಉಚಿತ  ಹಾಗೂ ಉಚಿತ ಒದಗಿಸಲು ಬದ್ಧನಾಗಿದ್ದೇನೆ ಎಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.

ಪ್ರತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸ್ವಂತ ಹಣದಲ್ಲಿ ಶಾಲೆ ತೆರೆದು ಕ್ಷೇತ್ರದ 24 ಗ್ರಾಮ ಪಂಚಾಯ್ತಿಯಿಂದ ತಲಾ 50 ರಿಂದ 100 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜೊತೆಗೆ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯುತ್ತೇನೆ ಎಂದರು.

ಕ್ಷೇತ್ರದಲ್ಲಿ ಆರೋಗ್ಯ ಸಮಸ್ಯೆ ತೀವ್ರವಾಗಿದ್ದು, ನನ್ನ ಒಡೆತನ ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತೇನೆ. ಹೆಚ್ಚಿನ ಚಿಕಿತ್ಸೆ ಅಗತ್ಯಬಿದ್ದರೆ ಅಂತವರನ್ನು ಸ್ವಂತ ಹಣದಲ್ಲಿ ಬೆಂಗಳೂರು-ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಕೊಡುವುದಾಗಿ ಹೇಳಿದರು.

ಪಕ್ಷೇತರ ಸ್ಪರ್ಧೆ ಇಲ್ಲ:

ಒಂದು ವೇಳೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಇಲ್ಲ. ಹೈ ಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಎಲ್ಲರೂ ಒಗ್ಗೂಡಿ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಟಿಕೆಟ್‌ ಸಿಗದಿದ್ದರೂ ಜನ ಸೇವೆ ಮುಂದುವರೆಸುತ್ತೇನೆ ಎಂದ ಅವರು, ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲವಾಗಿದೆ. ನಮ್ಮಲ್ಲಿ ಒಡಕು ಉಂಟಾದರೆ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಕಷ್ಟ. ಹಾಗಾಗಿ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

click me!