ದೇಶದಲ್ಲಿ 2050ಕ್ಕೆ ಆಹಾರ ಧಾನ್ಯಗಳ ಕೊರತೆ ಸಂಭವ: ನಿರ್ಮಲಾನಂದನಾಥ ಸ್ವಾಮೀಜಿ

By Kannadaprabha NewsFirst Published Aug 11, 2023, 5:35 PM IST
Highlights

2050ರ ವೇಳೆಗೆ ನಮ್ಮ ದೇಶದಲ್ಲಿ ಎಲ್ಲ ದೇಶಗಳಿಗಿಂತ ಜನಸಂಖ್ಯೆ ಹೆಚ್ಚಾಗಿ ಆಹಾರ ಧಾನ್ಯಗಳ ಕೊರತೆ ಕಾಣುವ ಸಂಭವವಿದೆ. ಉಳುವ ರೈತನ ಹೊಲದ ಪ್ರಮಾಣ ಕಡಿಮೆಯಾಗಿ ಕೈಗಾರಿಕೆಗಳು ಹೆಚ್ಚಾಗಲಿವೆ ಎಂದು ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ದೇವನಹಳ್ಳಿ (ಆ.11): 2050ರ ವೇಳೆಗೆ ನಮ್ಮ ದೇಶದಲ್ಲಿ ಎಲ್ಲ ದೇಶಗಳಿಗಿಂತ ಜನಸಂಖ್ಯೆ ಹೆಚ್ಚಾಗಿ ಆಹಾರ ಧಾನ್ಯಗಳ ಕೊರತೆ ಕಾಣುವ ಸಂಭವವಿದೆ. ಉಳುವ ರೈತನ ಹೊಲದ ಪ್ರಮಾಣ ಕಡಿಮೆಯಾಗಿ ಕೈಗಾರಿಕೆಗಳು ಹೆಚ್ಚಾಗಲಿವೆ ಎಂದು ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಮತ್ತು ನಾಡಪ್ರಭುಗಳ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡಬೇಕಾದರೆ ಬಂಜರು ಭೂಮಿಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಸಂಚಾರ ಸೌಲಭ್ಯ ನೀಡಬೇಕು. ಅದು ಬಿಟ್ಟು ಕೃಷಿ ಭೂಮಿಗಳಲ್ಲಿ ಅಲ್ಲ ಎಂದರು.

ನಾಡಪ್ರಭು ಕೆಂಪೇಗೌಡರ ದೂರ ದೃಷ್ಟಿಯಿಂದಾಗಿ ಎಲ್ಲ ಜನಾಂಗಗಳ ವೃತ್ತಿಯನ್ನು ಗೌರವಿಸಿ ಅವರಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ ಹಾಗೆ ರೈತರ ಹಿತದೃಷ್ಟಿಯಿಂದ ಕೆರೆಗಳ ನಿರ್ಮಾಣ ಮಾಡಿಸಿದರು. ಅದೇ ರೀತಿ ಸರ್ಕಾರಗಳು ರೈತರ ಹಿತ ಕಾಯಬೇಕು. ಹಣದಾಸೆಗಾಗಿ ರೈತರು ಇರುವ ಜಮೀನು ಮಾರಾಟ ಮಾಡಿದರೆ ಅವರಲ್ಲಿ ಎಷ್ಟುದಿನ ಹಣ ಇರುತ್ತೆ. ಮತ್ತೆ ಅದೇ ಜಮೀನಿನಲ್ಲಿ ನೌಕರನಾಗಿ ದುಡಿಯಬೇಕಾಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಫಲವತ್ತಾದ ಭೂಮಿಯನ್ನು ರೈತರಿಂದ ಕಸಿದುಕೊಳ್ಳದೆ ಅವರಿಗೆ ಬೇಕಾದ ಸವಲತ್ತುಗಳನ್ನು ಮಾಡಿಕೊಡಬೇಕು. 

ತರಗತಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಸಮವಸ್ತ್ರ ಕಡ್ಡಾಯಗೊಳಿಸಿದ ಕಾಲೇಜು ಆಡಳಿತ ಮಂಡಳಿ!

ಭಾಗದ ರೈತರು ಕಳೆದ ಎರಡು ವರ್ಷಗಳಿಂದ ತಮ್ಮ ಜಮೀನು ಉಳಿವಿಗಾಗಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಅವರ ಸಮಸ್ಯೆಯನ್ನು ಪ್ರಜಾಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಒಂದು ಸಮಾಜದ ನಾಯಕರಲ್ಲ. ಅವರು ನಾಡಿನ ಮಹಾಚೇತನ. ಸಮಸ್ತ ಜನರ ಸುಧಾರಣೆಗಾಗಿ ಶ್ರಮಿಸಿದವರು. ಎಲ್ಲರ ಹಿತವನ್ನು ಕಾಪಾಡಬೇಕೆಂದು ಆಯಾಯ ಸಮುದಾಯಗಳ ವೃತ್ತಿಗೆ ಅಗತ್ಯ ಅನುಕೂಲಗಳನ್ನು ಮಾಡಿಕೊಟ್ಟಮಹನೀಯರು. ಪ್ರತಿಯೊಬ್ಬರು ಬದುಕಬೇಕಾದರೆ ಕೆರೆ ಕುಂಟೆಗಳು ಅವಶ್ಯವೆಂದು ಅರಿತಿದ್ದರು. 

ಆದಿ ಚುಂಚನ ಗಿರಿ ಮಠಕ್ಕೆ ಸೇವಕನಾಗಿ ಕೆಲಸ ಮಾಡಿದ್ದೇನೆ, ಸ್ವಾಮೀಜಿಗಳು ಬಸವಣ್ಣನವರ ಚಿಂತನೆಯನ್ನು ಮೈಗೂಡಿಸಿಕೊಂಡು ಎಲ್ಲ ವರ್ಗದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಜೊತೆಗೆ ಅನ್ನದಾನ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು. ಈ ಭಾಗಕ್ಕೆ ಹರಿಯುತ್ತಿರುವ ಕೆಸಿ ವ್ಯಾಲಿ ನೀರನ್ನು ಮೂರನೇ ಬಾರಿ ಶುದ್ಧೀಕರಿಸಿ ಸರಬರಾಜು ಮಾಡಲು ಮಾಜಿ ಸಂಸದ ವೀರಪಪ ಮೊಯ್ಲಿಯವರೊಂದಿಗೆ ಒತ್ತಾಯ ಮಾಡಿದ್ದೇವೆ. ಕೆರೆಗಳಲ್ಲಿ ಹೂಳು ತೆಗೆಸಿ ನೀರು ಸಂಗ್ರಹಕ್ಕೆ ಸಹಕಾರ ಮಾಡಿದರೆ ನಮ್ಮ ಬದುಕು ಹಸನಾಗುತ್ತದೆ. 

ಲೇಡೀಸ್ ಹಾಸ್ಟೆಲ್‍ಗೆ ಕರ್ನಾಟಕ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ: ಪರಿಶೀಲನೆ

ಕೇಂಪೇಗೌಡರ ತ್ಯಾಗ, ಸಮಾಜಸೇವೆ ಬಗ್ಗೆ ಸವಿಸ್ತಾರವಾಗಿ ಮುಂದಿನ ಪೀಳಿಗೆಗೆ ಅಲ್ಲದೆ ಜಗತ್ತಿಗೆ ತಿಳಿಸಲು ಆವತಿ ಸಮೀಪ 20 ಎಕರೆ ಜಮೀನು ಅಗತ್ಯವಿದೆ ಎಂದು ಹೇಳಿದರು. ಕಂದಾಯ ಸಚಿವ ಕೃಷ್ಣಭೈರೇಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಹೊಸಕೋಟೆ ಕ್ಷೇತ್ರದ ಶಾಸಕ ಶರತ್‌ ಬಚ್ಚೇಗೌಡ ಹಾಗು ದಾನಿಗಳಾದ ಬಿ.ಮುನೇಗೌಡ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ ವಹಿಸಿದ್ದರು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ. ಶಿವಶಂಕರ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ.ಎನ್‌.ಅನುರಾಧ, ವಕೀಲ ಬಿ.ಎಂ.ಭೈರೇಗೌಡ ಹಾಗು ಇತರ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

click me!