ತಡರಾತ್ರಿ ಬಂಡೆಕಲ್ಲು ಸಮೇತ ಕುಸಿದ ಗುಡ್ಡ; ಅದೃಷ್ಟವಶಾತ್ ಮಧ್ಯಾಹ್ನವೇ ಮನೆ ಖಾಲಿ ಮಾಡಿದ್ದ ಕುಟುಂಬ!

Published : Jul 27, 2023, 06:47 AM ISTUpdated : Jul 27, 2023, 06:48 AM IST
ತಡರಾತ್ರಿ ಬಂಡೆಕಲ್ಲು ಸಮೇತ ಕುಸಿದ ಗುಡ್ಡ; ಅದೃಷ್ಟವಶಾತ್ ಮಧ್ಯಾಹ್ನವೇ ಮನೆ ಖಾಲಿ ಮಾಡಿದ್ದ ಕುಟುಂಬ!

ಸಾರಾಂಶ

ತಾಲೂಕಿನ ಸಂಶಿ ತೆಂಗಾರದಲ್ಲಿ ಬೃಹತ್‌ ಬಂಡೆಗಲ್ಲು ಸಮೇತ ಗುಡ್ಡ ಕುಸಿದು ನಾಗರಾಜ ನಾರಾಯಣ ನಾಯ್ಕ ಎನ್ನುವವರ ಮನೆಗೆ ಹಾನಿಯಾಗಿದ್ದು, ಕುಟುಂಬಸ್ಥರು ಮೊದಲೇ ಮನೆ ತೊರೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೊನ್ನಾವರ (ಜು.27):  ತಾಲೂಕಿನ ಸಂಶಿ ತೆಂಗಾರದಲ್ಲಿ ಬೃಹತ್‌ ಬಂಡೆಗಲ್ಲು ಸಮೇತ ಗುಡ್ಡ ಕುಸಿದು ನಾಗರಾಜ ನಾರಾಯಣ ನಾಯ್ಕ ಎನ್ನುವವರ ಮನೆಗೆ ಹಾನಿಯಾಗಿದ್ದು, ಕುಟುಂಬಸ್ಥರು ಮೊದಲೇ ಮನೆ ತೊರೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಡ್ಡ ಕುಸಿತದ ವೇಳೆ ಬಂಡೆಗಲ್ಲು ಉರುಳಿ ಮನೆಯ ಶೌಚಾಲಯ, ಸ್ನಾನಗೃಹದ ಗೋಡೆ ಜಖಂಗೊಂಡಿದೆ. ಶೌಚಾಲಯದ ಸೆಪ್ಟಿಕ್‌ ಟ್ಯಾಂಕ್‌ ಮೇಲು ಬಂಡೆಗಲ್ಲು ಬಿದ್ದು ಹಾನಿಯಾಗಿದೆ. ಕಳೆದ ನಾಲ್ಕೈದು ವರ್ಷವು ಇದೇ ಸಮಸ್ಯೆ ಕಂಡು ಬರುತ್ತಿದ್ದು, ಈ ಬಾರಿಯು ಗುಡ್ಡ ಕುಸಿದು ಮನೆಗೆ ಹಾನಿಯಾಗಬಹುದೆಂದು ಕುಟುಂಬಸ್ಥರಿಗೆ ಮೂನ್ಸೂಚನೆ ಇತ್ತು. ಜೀವ ಭಯದಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಮಧ್ಯಾಹ್ನವೇ ಮನೆ ತೊರೆದು ಜಲವಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡಿಸಿದ್ದರು. ಮಂಗಳವಾರ ತಡರಾತ್ರಿ ಏಕಾಏಕಿ ಸರಿ ಸುಮಾರು 30-40 ಫೀಟ್‌ ಅಗಲದಲ್ಲಿ ಗುಡ್ಡ ಕುಸಿದಿದೆ.

ಉತ್ತರ ಕನ್ನಡ: 5 ತಾಲೂಕುಗಳಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ!

ಮನೆಯ ಹಿಂಬದಿಯ ಎರಡ್ಮೂರು ಎಕರೆ ಜಾಗ ಗುಡ್ಡ ಪ್ರದೇಶವಾಗಿದೆ. ಇದು ಅರಣ್ಯ ಇಲಾಖೆಗೆ ಒಳಪಡುವ ಪ್ರದೇಶವಾಗಿದ್ದು ಗುಡ್ಡದ ತಳಭಾಗಕ್ಕೆ ಹೊಂದಿಕೊಂಡಂತೆ 8-10 ಮನೆಗಳಿದೆ. ಇದು ಮೇಲ್ಮೈ ಕೆಂಪು ಮಣ್ಣಿನಿಂದ ಕೂಡಿದ್ದು ತಳಭಾಗದ ಮಣ್ಣು ಸಂಪೂರ್ಣವಾಗಿ ಸೇಡಿ ಮಣ್ಣಾಗಿದೆ. ಧಾರಾಕಾರ ಮಳೆ ಸುರಿದರೆ ಸಂಪೂರ್ಣ ಗುಡ್ಡವೇ ಕುಸಿಯಬಹುದಾದ ಸ್ಥಿತಿಯಲ್ಲಿದೆ.

ಮಾಧ್ಯಮದೊಂದಿಗೆ ಮಾತನಾಡಿದ ನಾಗರಾಜ ನಾಯ್ಕ ಪತ್ನಿ ನೇತ್ರಾವತಿ, ಕಳೆದೆರಡು ವರ್ಷದಿಂದ ಗುಡ್ಡ ಕುಸಿದಿತ್ತು. ಗ್ರಾಪಂನಿಂದ ತಡೆಗೋಡೆ ನಿರ್ಮಿಸಿದ್ದರು. ಮತ್ತೆ ಕುಸಿದಿದೆ. ಮಕ್ಕಳನ್ನು ಸಂಬಂಧಿಕರ ಮನೆಗೆ ಬಿಟ್ಟು ಬಂದಿದ್ದೇವೆ. ಗ್ರಾಪಂ ಅಧಿಕಾರಿಗಳು ಭೇಟಿ ನೀಡಿದ್ದರು. ತಮ್ಮ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಪರಿಹಾರ ಅಸಾಧ್ಯ ಎಂದಿದ್ದಾರೆ. ನಮಗೆ ಶಾಶ್ವತ ಪರಿಹಾರ ಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮನೆ ನಿರ್ಮಿಸಲು ಸ್ಥಳಾವಕಾಶ ನೀಡಿದರೆ ಮನೆ ಕಟ್ಟಿಕೊಂಡಿರುತ್ತೇವೆ. ಚಿಕ್ಕ ಮಕ್ಕಳಿಟ್ಟುಕೊಂಡು ಇಲ್ಲಿ ವಾಸಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಅಳಲು ತೊಡಗಿಕೊಂಡರು.

 

ಅಮರನಾಥ ಭೂಕುಸಿತ: 80 ಕನ್ನಡಿಗರು ಅತಂತ್ರ, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ

ಸ್ಥಳಕ್ಕೆ ಗ್ರಾಪಂ ಸದಸ್ಯ ಹಮ್ಜಾ, ಪಿಡಿಒ ಕಲ್ಲಪ್ಪ ಕಾರುಣ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಭರತ್‌ ಆಚಾರ್ಯ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.

ಈ ಹಿಂದೆ ಗುಡ್ಡ ಕುಸಿದು ಬಂಡೆಗಲ್ಲು ಮನೆ ಗೋಡೆಗೆ ಬಡಿದು ಮನೆಯ ಆರ್‌ಸಿಸಿ ಮೇಲ್ಚಾವಣಿಗೆ ಹಾನಿಯಾಗಿ ಬಿರುಕುಬಿಟ್ಟಿತ್ತು. ಮಳೆಗಾಲದಲ್ಲಿ ನೀರು ಸೋರಿಕೆಯಾಗಿದ್ದರಿಂದ ತಗಡಿನ ಶೀಟ್‌ ಹಾಕಿದ್ದರು. ಇದೀಗ ಮತ್ತೆ ಎರಡ್ಮೂರು ಬಂಡೆಗಲ್ಲು ಕುಸಿದು ಬೀಳುವ ಹಂತದಲ್ಲಿದೆ. ತಕ್ಷಣ ಸಚಿವರು, ಅಧಿಕಾರಿಗಳು ಬಡಕುಟುಂಬಕ್ಕೆ ಪುನರ್ವಸತಿ ಕಲ್ಪಿಸಬೇಕು.

PREV
Read more Articles on
click me!

Recommended Stories

ಬೆಂಗಳೂರು ಏರ್‌ಪೋರ್ಟ್‌ ರಾಮೇಶ್ವರಂ ಕೆಫೆ ಒಂದು ಪ್ಲೇಟ್ ಇಡ್ಲಿಗೆ ₹315!; ಬಿಲ್ ನೋಡಿ ಶಾಕ್ ಆದ ಗ್ರಾಹಕ!
ಮಗಳ ಮದುವೆ, ಬೋರ್‌ವೆಲ್‌ಗಾಗಿ ಮಾಡಿದ 6 ಲಕ್ಷ ರೂ. ಸಾಲ, 120 ಅಡಿ ಟವರ್ ಏರಿ ಸಾಯಲು ಯತ್ನಿಸಿದ ರೈತನ ರಕ್ಷಣೆ