ರೈಲ್ವೆಗೆ ಯುಪಿಎಗಿಂತ ಎನ್‌ಡಿಎ 3 ಪಟ್ಟು ಹೆಚ್ಚು ಅನುದಾನ

By Kannadaprabha NewsFirst Published Oct 12, 2022, 8:47 AM IST
Highlights

ಯುಪಿಎ ಸರ್ಕಾರಕ್ಕಿಂತ ಎನ್‌ಡಿಎ ಸರ್ಕಾರ ರೈಲ್ವೆ ಇಲಾಖೆಗೆ ಮೂರ್ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಿದೆ. ಹೀಗಾಗಿ ತೀವ್ರಗತಿಯಲ್ಲಿ ಎಲ್ಲ ಕೆಲಸಗಳು ನಡೆದಿವೆ ಎಂದು ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಸಂಪರ್ಕ ಇಲಾಖೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು.

ಹುಬ್ಬಳ್ಳಿ (ಅ.12) : ಯುಪಿಎ ಸರ್ಕಾರಕ್ಕಿಂತ ಎನ್‌ಡಿಎ ಸರ್ಕಾರ ರೈಲ್ವೆ ಇಲಾಖೆಗೆ ಮೂರ್ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಿದೆ. ಹೀಗಾಗಿ ತೀವ್ರಗತಿಯಲ್ಲಿ ಎಲ್ಲ ಕೆಲಸಗಳು ನಡೆದಿವೆ ಎಂದು ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಸಂಪರ್ಕ ಇಲಾಖೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ತಾವೂ ಮಲಗಂಗಿಲ್ಲ, ನಮ್ಮನ್ನು ಮಲಗೋಕೆ ಬಿಡುವುದಿಲ್ಲ. ಹೀಗಾಗಿ ದೇಶದಲ್ಲಿ ಅತ್ಯಂತ ತೀವ್ರಗತಿಯಲ್ಲಿ ಅಭಿವೃದ್ಧಿ ಕೆಲಸಗಳು ಸಾಗಿವೆ ಎಂದರು.

ಧಾರವಾಡ: ಸೌಂಡ್‌ ಸ್ಪೀಕರ್ ಹಚ್ಚಿದಕ್ಕೆ ದುರ್ಗಾಮಾತಾ ಮಂಟಪಕ್ಕೆ ನುಗ್ಗಿ ಮಹಿಳಾ ಅಧಿಕಾರಿಯಿಂದ ದರ್ಪ..!

Latest Videos

ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ 3ನೇ ಪ್ರವೇಶದ್ವಾರ, ಮರುರೂಪಿತಗೊಂಡ ಯಾರ್ಡ್‌ ಲೋಕಾರ್ಪಣೆ ಮಾಡಿ, ಎಸ್‌ಎಸ್‌ಎಸ್‌ ಹುಬ್ಬಳ್ಳಿ- ದೆಹಲಿ ನಡುವಿನ ನಿಜಾಮುದ್ದೀನ್‌ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರ ಅತ್ಯಂತ ಉದಾರತೆ ತೋರುತ್ತದೆ. ಎಷ್ಟುಹಣ ಬೇಕೋ ಅಷ್ಟುಅನುದಾನ ನೀಡಲು ಸಿದ್ಧವಿದೆ ಎಂದ ಅವರು, ಯುಪಿಎ ಸರ್ಕಾರವಿದ್ದಾಗ ಅಂದರೆ 2014ಕ್ಕಿಂತ ಮುಂಚೆ ಕರ್ನಾಟಕಕ್ಕೆ . 845 ಕೋಟಿ ಮಾತ್ರ ಅನುದಾನ ಬರುತ್ತಿತ್ತು. ಆದರೆ ಈ ವರ್ಷವೇ ಬರೋಬ್ಬರಿ . 6 ಸಾವಿರ ಕೋಟಿ ನೀಡಿದ್ದೇವೆ. ಮೊದಲು ಪ್ರತಿನಿತ್ಯ ಬರೀ 4 ಕಿಮೀ ಮಾತ್ರ ಹಳಿ ನಿರ್ಮಾಣ ಕಾರ್ಯವಾಗುತ್ತಿತ್ತು, ಈಗ ನಿತ್ಯ 12 ಕಿಮೀ ಹಳಿ ನಿರ್ಮಾಣವಾಗುತ್ತಿದೆ. ಅಂದರೆ ಬರೋಬ್ಬರಿ 3 ಪಟ್ಟು ಜಾಸ್ತಿ ಹಳಿ ನಿರ್ಮಾಣವಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಶೀಘ್ರ ಪ್ರಾರಂಭ:

ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಡಬ್ಲಿಂಗ್‌ ಕಾರ್ಯ ಭರದಿಂದ ಸಾಗಿದೆ. ಆದರೆ ತುಮಕೂರು-ದಾವಣಗೆರೆ ಮಧ್ಯೆ ಮಾತ್ರ ಕಾಮಗಾರಿ ಬಾಕಿ ಉಳಿದಿದೆ. ಅಲ್ಲಿ ಭೂಸ್ವಾಧೀನ ಕಾರ್ಯ ನಡೆದಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ನಾವು ಕೆಲಸ ಪ್ರಾರಂಭಿಸುತ್ತೇವೆ. ಈ ಕೆಲಸವಾದರೆ ಹುಬ್ಬಳ್ಳಿ-ಬೆಂಗಳೂರು ಪ್ರಯಾಣದ ಅವಧಿಯೂ ಸಾಕಷ್ಟುಕಡಿಮೆಯಾಗುತ್ತದೆ. ಇನ್ನಷ್ಟುಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಕೊಡಿ ಎಂದರು.

ಮೋದಿ ಕಾರ್ಯ ಅದ್ಭುತ:

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ಅತ್ಯದ್ಭುತ. ಅವರು ದೂರಾಲೋಚನೆಯೊಂದಿಗೆ ಕೆಲಸಕ್ಕೆ ಇಳಿಯುತ್ತಾರೆ. ಕೆಲಸ ಮಾಡಿಸುತ್ತಾರೆ. ನಮ್ಮದು ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂಬ ಗುರಿ ಅವರದು. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದೆಂದೂ ಆಗದಷ್ಟುಕೆಲಸಗಳಾಗುತ್ತಿವೆ. ಅವರು ತಾವೂ ಮಲಗಿಂಗಿಲ್ಲ. ನಮ್ಮನ್ನು ಮಲಗೋಕೆ ಬಿಡುವುದಿಲ್ಲ. ಆ ಪರಿ ಕೆಲಸ ಮಾಡಿಸುತ್ತಾರೆ. ಇದು ನಮಗೆ ಖುಷಿ ಕೊಡುವ ಸಂಗತಿಯೂ ಹೌದು ಎಂದು ಮೋದಿ ಅವರ ಗುಣಗಾನ ಮಾಡಿದರು.

2014ರಲ್ಲಿ ಆರ್ಥಿಕತೆಯಲ್ಲಿ ನಮ್ಮ ದೇಶ 10ನೇ ಸ್ಥಾನದಲ್ಲಿತ್ತು. ಇದೀಗ 5ನೇ ಸ್ಥಾನಕ್ಕೆ ಬಂದು ತಲುಪಿದ್ದೇವೆ ಎಂದರೆ ಬಿಜೆಪಿ ಸರ್ಕಾರದ ಕಾರ್ಯವೈಖರಿ ನೋಡಿ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕರಾದ ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ವಿ.ಎಸ್‌. ಸಂಕನೂರು, ಪ್ರದೀಪ ಶೆಟ್ಟರ್‌, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ವೀರಣ್ಣ ಸವಡಿ, ಸಂತೋಷ ಚವ್ಹಾಣ ಸೇರಿದಂತೆ ಹಲವರಿದ್ದರು.

ಧಾರವಾಡ ಪ್ರತ್ಯೇಕ ಪಾಲಿಕೆಗೆ ನಡೆದಿದೆ ಪ್ರಯತ್ನ: ಜೋಶಿ

ಹುಬ್ಬಳ್ಳಿ-ಶಬರಿಮಲೈ ರೈಲು ಶೀಘ್ರ

ಹುಬ್ಬಳ್ಳಿ- ಶಬರಿಮಲೈ ರೈಲನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು. ಹುಬ್ಬಳ್ಳಿ-ಶಬರಿಮಲೈಗೆ ನೇರವಾಗಿ ರೈಲು ಸಂಪರ್ಕ ಬೇಕೆಂದು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಇನ್ನೆರಡು ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

 ಜೋಶಿ ನನ್ನ ರಾಜಕೀಯ ಗುರು: ವೈಷ್ಣವ

ಪ್ರಹ್ಲಾದ ಜೋಶಿ ನನ್ನ ಸಹೋದರ ಹಾಗೂ ರಾಜಕೀಯ ಗುರು. ಸದನಲ್ಲಿ ಯಾವ ರೀತಿ ಪ್ರಶ್ನೋತ್ತರಗಳಿಗೆ ಅಣಿಯಾಗಬೇಕು. ಯಾವ ರೀತಿ ವಿಪಕ್ಷದ ಪ್ರಶ್ನೆಗಳನ್ನು ಹ್ಯಾಂಡಲ್‌ ಮಾಡಬೇಕೆಂಬುದರ ಬಗ್ಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು. ಇಲ್ಲಿನ ರೈಲು ನಿಲ್ದಾಣದ ಮೂರನೆಯ ಪ್ರವೇಶ ದ್ವಾರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜೋಶಿ ಅವರು, ಮೋದಿ ಅವರ ನಿಕಟ ಹಾಗೂ ಪ್ರಭಾವಿ ಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ. ತೀವ್ರ ಒತ್ತಡಕ್ಕೂ ಮಣಿಯದೇ ಕಲ್ಲಿದ್ದಲು, ಗಣಿಗಳ ಹಂಚಿಕೆಯನ್ನು ನ್ಯಾಯಬದ್ಧಗೊಳಿಸಲು ಗಣಿಕಾಯ್ದೆಗೆ ತಿದ್ದುಪಡಿ ಮಂಡಿಸಿ ಸಂಸತ್ತಿನಲ್ಲಿ ಅದು ಅಂಗೀಕೃತವಾಗುವಂತೆ ಮಾಡಿದ ಶ್ರೇಯಸ್ಸು ಕಲ್ಲಿದ್ದಲು ಖಾತೆ ಹೊಂದಿರುವ ಜೋಶಿ ಅವರಿಗೆ ಸಲ್ಲುತ್ತದೆ ಎಂದರು. ನನಗೊಬ್ಬನಿಗೆ ಮಾತ್ರ ಜೋಶಿ ಗುರುಗಳಾಗಿಲ್ಲ. ಆಡಳಿತ ಪಕ್ಷವಿರಲಿ, ವಿರೋಧ ಪಕ್ಷದ ಸಂಸದರಿರಲಿ ಎಲ್ಲರಿಗೂ ಅತ್ಯಂತ ಸಮಾಧಾನದಿಂದ ಮಾರ್ಗದರ್ಶನ ಮಾಡುತ್ತಾರೆ. ಯಾರೇ ಯಾವುದೇ ಕೆಲಸ ಇಟ್ಟುಕೊಂಡು ಇವರ ಬಳಿಗೆ ತೆರಳಿದರೂ ಆ ಕೆಲಸ ಮಾಡದೇ ಕಳುಹಿಸುವುದಿಲ್ಲ. ಎಲ್ಲರಿಗೂ ಅಚ್ಚುಮೆಚ್ಚಿನ ಸಚಿವರಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಧಾರವಾಡ ಐಐಟಿ ಡಿಸೆಂಬರ್‌ಗೆ ಮೋದಿ ಉದ್ಘಾಟನೆ

ಹುಬ್ಬಳ್ಳಿ: ಧಾರವಾಡ ಐಐಟಿಯನ್ನು ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಗುವುದು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಐಐಟಿ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯದ ಹಂತಕ್ಕೆ ತಲುಪಿದ್ದು, ಡಿಸೆಂಬರ್‌ನಲ್ಲಿ ಪೂರ್ಣವಾಗಲಿದೆ. ಇದೇ ವೇಳೆ, ಬೆಳಗಾವಿ-ಧಾರವಾಡ ರೈಲು ಮಾರ್ಗಕ್ಕೂ ಶಿಲಾನ್ಯಾಸ ನೆರವೇರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಕರೆಸಲಾಗುವುದು ಎಂದು ತಿಳಿಸಿದರು.

click me!