ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರು ಪಲ್ಟಿಯಾಗಿ ಐವರಿಗೆ ಗಂಭೀರ ಗಾಯ

By Sathish Kumar KHFirst Published Jun 5, 2023, 7:23 PM IST
Highlights

ಬೆಂಗಳೂರು - ಮೈಸೂರು ದಶಪಥ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರಿನ ಟೈರ್‌ ಬ್ಲಾಸ್ಟ್‌ ಆಗಿ ಭೀಕರ ಅಪಘಾತ ಸಂಭವಿಸಿದ್ದು, ಐವರಿಗೆ ಗಂಭೀರ ಗಾಯವಾಗಿದೆ.

ಮಂಡ್ಯ (ಜೂ.05): ಕರ್ನಾಟಕದ ಎಕ್ಸ್ಪ್ರೆಸ್‌ವೇ ಎಂದು ಕರೆಯಲಾಗುವುದು ಬೆಂಗಳೂರು - ಮೈಸೂರು ದಶಪಥ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರಿನ ಟೈರ್‌ ಬ್ಲಾಸ್ಟ್‌ ಆಗಿ ಭೀಕರ ಅಪಘಾತ ಸಂಭವಿಸಿದೆ. ಕಾರಿನ ಟೈರ್‌ ಸ್ಫೋಟಗೊಂಡಿದ್ದರಿಂದ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಸೋಮವಾರ ಸಂಜೆ ವೇಳೆ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಿಂದ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಟೈರ್ ಬಸ್ಟ್ ಆಗಿ ಪಲ್ಟಿ ಹೊಡೆದ ಕಾರು ಸುಮಾರು 100 ಮೀಟರ್‌ನಷ್ಟು ಉರುಳಿಕೊಂಡು ಹೋಗಿದೆ. ಈ ಘಟನೆಯು ಮಂಡ್ಯ ನಗರದ ಬಳಿಯ ಚಿಕ್ಕಮಂಡ್ಯದ ದಶಪಥ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದ್ದು, ಅಪಘಾತಕ್ಕೀಡಾದ ವಾಹನದ ಮುಂದೆ ವಾಹನಗಳು ಇಲ್ಲದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

Latest Videos

ಬೆಂಗಳೂರು - ಹಾಸನ ಹೆದ್ದಾರಿಯಲ್ಲಿ ಲಾರಿ ಹಿಂಭಾಗಕ್ಕೆ ಗುದ್ದಿದ ಕಾರು: ನೆಲಮಂಗಲ ಯುವಕರು ಸಾವು

100 ಮೀಟರ್ ಪಲ್ಟಿಯಾದ ಕಾರು: ವೇಗವಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಟೈರ್‌ ಬ್ಲಾಸ್ಟ್‌ ಆದ ತಕ್ಷಣವೇ ಕಾರು ಎರಡು ಬಾರಿ ಪಲ್ಟಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ಐವರಿಗೂ ಗಾಯವಾಗಿದೆ. ಆದರೆ, ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವ್ಯಕ್ತಿಗಳನ್ನು ಶ್ರೀಕಾಂತ್, ಕೃಷ್ಣನ್, ಮಂಜುನಾಥ್, ಅರ್ಜುನ್, ಮೂರ್ತಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. 

ಗಾಯಾಳುಗಳಿಗೆ ಮಂಡ್ಯದ ಮಿಮ್ಸ್‌ನಲ್ಲಿ ಚಿಕಿತ್ಸೆ: ಬೆಂಗಳೂರು ಕಡೆಯಿಂದ ಮೈಸೂರಿನತ್ತ ತೆರಳುತ್ತಿದ್ದ ಕಾರು ಅಪಘಾಕ್ಕೆ ಈಡಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ, ಕಾರು ಅಪಘಾತದಿಂದ ಕೆಲಹೊತ್ತು ಟ್ರಾಫಿಕ್‌ಜಾಮ್‌ ಉಂಟಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಅಪಘಾತಗೊಂಡ ಕಾರನ್ನು ದಶಪಥ ಹೆದ್ದಾರಿಯಿಂದ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಕುಟುಂಬ ಸಮೇತ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರು: ಪ್ರಾಣ ಉಳಿದಿದ್ದೇ ದೊಡ್ಡ ಪವಾಡ

ಬೆಂಗಳೂರು - ಹಾಸನ ಹೆದ್ದಾರಿಯಲ್ಲಿ ಲಾರಿ ಹಿಂಭಾಗಕ್ಕೆ ಗುದ್ದಿದ ಕಾರು: ಮಂಡ್ಯ (ಜೂ.04): ರಸ್ತೆಯಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ದುರ್ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವು: ಭಾನುವಾರ ಬೆಳಗ್ಗಿನ ಜಾವ ಬೆಂಗಳೂರು- ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನ ನೆಲಮಂಗಲದ ನಾಲ್ವರು ಯುವಕರು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಲಾರಿ ನಿಧಾನವಾಗಿ ಸಾಗುತ್ತಿತ್ತು. ಇದನ್ನು ಗಮನಿಸದೇ ವೇಗವಾಗಿ ಹೋಗುತ್ತಿದ್ದ ಕಾರು ಹಿಂಬದಿಯಿಂದ ಲಾರಿಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಅರ್ಧ ಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇನ್ನು ಇತರೆ ವಾಹನ ಸವಾರರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಬಂದು ಕಾರಿನಲ್ಲಿದ್ದ ಯುವಕರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ, ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇನ್ನು ಕಾರಿನಲ್ಲಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

click me!