
ಕೊಪ್ಪಳ (ಜೂ.25): ತುಂಗಭದ್ರಾ ಜಲಾಶಯ(TB Dam)ದ 33 ಗೇಟ್ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. ಈ ಐತಿಹಾಸಕ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಅತ್ಯುತ್ಸಾಹದಿಂದ ಭಾಗಿಯಾದದರು.
ತುಂಗಭದ್ರಾ ಕ್ರೆಸ್ಟ್ ಗೇಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬೆಳಗ್ಗೆಯೇ ಆಗಮಿಸಿ ಚಂದ್ರಬಾಬು ನಾಯ್ಡು ಕಾರ್ಯಕ್ರಮದ ಆರಂಭದಿಂದ ಉತ್ಸಾಹದಿಂದ ಲವಲವಿಕೆಯಿಂದ ಓಡಾಡುವುದು ಕಂಡುಬಂತು. ಕರ್ನಾಟಕದಲ್ಲೂ ನಾಯ್ಡು ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಹಿಯಾಯಿತು. ಅವರ ಭಾಷಣ ಆರಂಭಕ್ಕೂ ಮುನ್ನವೇ ಅಭಿಮಾನಿಗಳ ಉದ್ಘೋಷ ಕೇಳಿಬಂದವು. ನಾಯ್ಡು ಅವರು ಭಾವಚಿತ್ರ ಹಿಡಿದು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು.
'ಎಲ್ಲ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು..' ಎನ್ನುತ್ತಾ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕನ್ನಡದಲ್ಲೇ ಭಾಷಣ ಆರಂಭಿಸಿದರು. ತಾಯಿ ತುಂಗಭದ್ರೆಗೆ ಶಿರಭಾಗಿ ನಮಸ್ಕಾರ ಮಾಡ್ತೀನಿ. ಗೇಟ್ ಅಳವಡಿಕೆಯಲ್ಲಿ ಶ್ರಮವಹಿಸಿದ ತುಂಗಭದ್ರಾ ಆಡಳಿತ ಮಂಡಳಿಗೂ ಧನ್ಯವಾದ ಎಂದು ಕೈಮುಗಿದರು.
ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತಾಡ್ತಿದ್ದೆ: ನಾಯ್ಡು
ಕನ್ನಡಲ್ಲಿ ಭಾಷಣ ಮಾಡುವಾಗಲೇ 'ನನಗೆ ಸ್ಪಷ್ಟವಾಗಿ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡ್ತಿದ್ದೆ. ನಾವು ತುಂಗಾ ಪಾನಃ ಗಂಗಾ ಸ್ನಾನ: ಅಂತಾ ಹೇಳ್ತೀವಿ. ತುಂಗಾ ಕುಡಿಯಲು ಶುದ್ಧ ಎಂದೇ ಪ್ರಸಿದ್ಧಿ ಪಡೆದಿದೆ. ತುಂಗಭದ್ರಾ 19 ಕ್ರಸ್ಟ್ ಗೇಟ್ ಕೊಚ್ಚಿ ಹೋಗಿತ್ತು. ಆದರೀಗ ಕೊಚ್ಚಿಹೋದ ಗೇಟ್ ಅಷ್ಟೇ ಅಲ್ಲ ಜಲಾಶಯದ ಎಲ್ಲ 33 ಗೇಟ್ಗಳು ಹೊಸದಾಗಿ ಅಳವಡಿಸಿ ಲೋಕಾರ್ಪಣೆ ಮಾಡಿದ್ದೇವೆ. ಹೊಸ ಗೇಟ್ ಅಳವಡಿಕೆ ವಿಳಂಬವಾಗಿದ್ರೂ ಭಾರೀ ಅಪಾಯ ಎದುರಾಗ್ತಿತ್ತು. ಆದರೆ ಕೇವಲ ಆರು ತಿಂಗಳಲ್ಲೇ ಮುಗಿಸಿರೋದಕ್ಕೆ ಹೆಮ್ಮೆ ಅನಿಸುತ್ತಿದೆ. ಹೀಗಾಗಿ ಎದುರಾಗಬಹುದಾಗಿ ಒಂದು ದೊಡ್ಡ ಅಪಾಯ ದೂರವಾಗಿದೆ.
ಪ್ರಧಾನಿ ಮೋದಿ ಬಗ್ಗೆ ಹಾಡಿ ಹೊಗಳಿದ ನಾಯ್ಡು
ಈ ಕ್ರೆಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೂರು ರಾಜ್ಯದ ಮುಖ್ಯಮಂತ್ರಿಗಳು ಒಂದೇ ವೇದಿಕೆ ಹಂಚಿಕೊಂಡಿದ್ದು ಒಂದು ಚರಿತ್ರೆ. ಈ ಚರಿತ್ರೆ ಇಂದು ಇಲ್ಲಿ ಸೃಷ್ಟಿಯಾಗಿದೆ. ಇದೆಲ್ಲದಕ್ಕೆ ನರೇಂದ್ರ ಮೋದಿಯವರ ಟೈಮಿಂಗ್ ಕಾರಣ. ಅವರದ್ದು ರೈಟ್ ಟೈಂ, ರೈಟ್ ಡಿಸಿಷನ್ ಎಂದು ಭಾಷಣದ ವೇಳೆ ಪ್ರಧಾನಿ ಮೋದಿಯವರನ್ನ ನಾಯ್ಡು ಹಾಡಿ ಹೊಗಳಿದರು.