Mysuru : ವಕೀಲರು, ಪೊಲೀಸರ ನಡುವೆ ಸಹಕಾರ ಮುಖ್ಯ

Published : Dec 27, 2022, 06:04 AM IST
Mysuru :  ವಕೀಲರು, ಪೊಲೀಸರ ನಡುವೆ ಸಹಕಾರ ಮುಖ್ಯ

ಸಾರಾಂಶ

ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಕಲಿತದ್ದಕ್ಕಿಂತ ಹೆಚ್ಚನ್ನು ನ್ಯಾಯಾಲಯ ಆವರಣದಲ್ಲಿ ಕಲಿತಿದ್ದೇನೆ. ಅನೇಕ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರ ಸಹಕಾರ ಅತ್ಯಗತ್ಯ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಅಭಿಪ್ರಾಯಪಟ್ಟರು.

  ಮೈಸೂರು :  ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಕಲಿತದ್ದಕ್ಕಿಂತ ಹೆಚ್ಚನ್ನು ನ್ಯಾಯಾಲಯ ಆವರಣದಲ್ಲಿ ಕಲಿತಿದ್ದೇನೆ. ಅನೇಕ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರ ಸಹಕಾರ ಅತ್ಯಗತ್ಯ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಅಭಿಪ್ರಾಯಪಟ್ಟರು.

ಲಾ ಗೈಡ್‌ ಕಾನೂನು ಮಾಸ ಪತ್ರಿಕೆ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್‌ ಮತ್ತು ಡೈರಿ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ನಾನು ಈ ಹಿಂದೆ ಕೆಲಸ ಮಾಡಿದ ಎಲ್ಲೆಡೆಯೂ ವಕೀಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದೇನೆ. ಏಕೆಂದರೆ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರು ಮತ್ತು ಪೊಲೀಸರ ಪರಸ್ಪರ ಸಹಕಾರ ಮುಖ್ಯ ಎಂದರು.

ಬೇಗ ಇತ್ಯರ್ಥ್ಯವಾಗಲಿ:

ನ್ಯಾಯಾಲಯಕ್ಕೆ (Court)  ಸಂಬಂಧಿಸಿದ ಪ್ರಕರಣಗಳು ಬಹಳ ಬೇಗ ಇತ್ಯರ್ಥವಾಗಬೇಕು. ಇಲ್ಲದಿದ್ದರೆ ದೂರುದಾರರೂ ಸೇರಿ ಎಲ್ಲರೂ ಅನಗತ್ಯವಾಗಿ ಅಲೆಯಬೇಕಾಗುತ್ತದೆ. ತನಿಖೆ ವೇಳೆ ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಂದ ಸಾಕಷ್ಟುಪ್ರಾಯೋಗಿಕವಾದ ವಿಚಾರಗಳನ್ನು ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಮೈಸೂರಿನಂತಹ (Mysuru)  ಪ್ರಮುಖ ಪ್ರವಾಸಿ ತಾಣದಲ್ಲಿ ಭದ್ರತೆಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಸಾಂಸ್ಕೃತಿಕವಾಗಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಇಂತಹ ನಗರಕ್ಕೆ ದೇಶ, ವಿದೇಶದಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ವಕೀಲರ ಯಾವುದೇ ಸಮಸ್ಯೆ ಬಗೆಹರಿಸಲು ನಾವು ಯಾವಾಗಲು ಸಿದ್ಧನಿದ್ದು ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಅವರು ಭರವಸೆ ನೀಡಿದರು.

ಬಹೂಪಯೋಗಿ ಲಾ ಗೈಡ್‌:

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ ಮಾತನಾಡಿ, ನ್ಯಾಯಾಧೀಶ ಹುದ್ದೆ ಸೇರಿದಂತೆ ವಕೀಲರಿಗೆ ಸಂಬಂಧಿಸಿದ ಪರೀಕ್ಷೆಗಳಿಗೆ ಕನ್ನಡದಲೇ ತರಬೇತಿ ನೀಡುವ ಉದ್ದೇಶದಿಂದ ವಕೀಲ ವೆಂಕಟೇಶ್‌ ಅವರು ಲಾ ಗೈಡ್‌ ಸಂಸ್ಥೆಯನ್ನು ಆರಂಭಿಸಿದರು. ಸಂಸ್ಥೆ ಆರಂಭವಾದಗಿನಿಂದ ಈವರೆಗೆ ಸಾವಿರಾರು ಕಾನೂನು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ರಾಜ್ಯದ ವಿವಿಧೆಡೆ ಜಿಲ್ಲಾ ನ್ಯಾಯಲಯದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕೊರೋನಾ ವೇಳೆ ಲಕ್ಷಾಂತರ ವಕೀಲರಿಗೆ ಹಣಕಾಸಿನ ನೆರವು ಸೇರಿದಂತೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಿದ್ದಾರೆ. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ವಕೀಲರು ಮಾಡುವ ಕೆಲಸಗಳನ್ನು ಪಟ್ಟಿಮಾಡಿಕೊಳ್ಳಲು ಸಹಾಯವಾಗಲಿ ಎಂದು ಪ್ರತಿ ವರ್ಷ ಕ್ಯಾಲೆಂಡರ್‌ ಜೊತೆಗೆ ಒಂದು ಡೈರಿ ವಿತರಿಸುತ್ತಾ ಬಂದಿದ್ದಾರೆ ಎಂದು ಅವರು ತಿಳಿಸಿದರು.

ಇದೇ ವೇಳೆ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ್‌, ಜಸ್ಟ್‌ ಕನ್ನಡ ಆನ್‌ಲೈನ್‌ ಪತ್ರಿಕೆಯ ಕೊಳ್ಳೆಗಾಲ ಮಹೇಶ್‌, ನಿವೃತ್ತ ಸರ್ಕಾರಿ ಅಭಿಯೋಜಕ ಆನಂದ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಲಯದ ನ್ಯಾಯಾಧೀಶ ಸಿ.ಜೆ. ಹುನಗುಂದ, ವಕೀಲ ಸಂಘದ ಮಾಜಿ ಅಧ್ಯಕ್ಷ ಜಿ.ವಿ. ರಾಮಮೂರ್ತಿ, ಲಾ ಗೈಡ್‌ ಸಂಪಾದಕ ಎಚ್‌.ಎನ್‌. ವೆಂಕಟೇಶ್‌, ಸಂಘದ ಕಾರ್ಯದರ್ಶಿ ಉಮೇಶ್‌, ಎಸ್‌. ಲೋಕೇಶ್‌ ಮೊದಲಾದವರು ಇದ್ದರು.

ಹೊಸ ವರ್ಷ ಆಚರಣೆಯಲ್ಲಿ ಡಿಜೆಗೆ ಅವಕಾಶ ಇಲ್ಲ

 ಸರ್ಕಾರದ ಮಾರ್ಗಸೂಚಿಯಂತೆ ಡಿಜೆಗೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆ ವೇಳೆ ರಾತ್ರಿ ಒಂದು ಗಂಟೆವರೆಗೂ ಪಾರ್ಟಿ ಮಾಡಲು ಅವಧಿ ವಿಸ್ತರಿಸುವಂತೆ ಮನವಿ ಬಂದಿದೆ. ಆ ಬಗ್ಗೆ ಪರಿಶೀಲಿಸುತ್ತೇವೆ. ರಾಜ್ಯ ಸರ್ಕಾರದ ಮಾರ್ಗಸೂಚಿಯ ನಿರೀಕ್ಷೆಯಲ್ಲಿದ್ದೇವೆ. ಅದರ ಅನುಸಾರ ಇಲ್ಲಿ ನಿರ್ಬಂಧ ಕೈಗೊಳ್ಳುತ್ತೇವೆ. ಒಂದೆರಡು ದಿನಗಳಲ್ಲಿ ಮಾರ್ಗಸೂಚಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನಗರ ಯುವ ಮೋರ್ಚಾ ಅಧ್ಯಕ್ಷ ರೌಡಿ ಶೀಟರ್‌ ಎಂಬ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಕಿರಣ್‌ ಗೌಡ ಹೆಸರು ರೌಡಿಪಟ್ಟಿಯಲ್ಲಿ ಇಲ್ಲ. ಆತನ ಮೇಲೆ ಬೇರೆ ಒಂದೆರಡು ಕೇಸ್‌ ಗಳಿವೆ ಅಷ್ಟೇ. ಮೈಸೂರಿನಲ್ಲಿ ರೌಡಿಗಳ ಗಡೀಪಾರಿಗೆ ಮುಂದಾಗಿದ್ದೇವೆ. ಈಗಾಗಲೇ ಇಬ್ಬರನ್ನು ಗಡೀಪಾರು ಮಾಡಲಾಗಿದೆ. ಇನ್ನೂ ಐದು ಮಂದಿ ಗಡೀಪಾರಿಗೆ ಪರಿಶೀಲಿಸಿದ್ದೇವೆ ಎಂದರು.

ಪ್ರವಾಸಿ ತಾಣಗಳು ಭರ್ತಿ

ಬೆಂಗಳೂರು

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜನರು ಪ್ರವಾಸಿತಾಣಗಳಿಗೆ ಲಗ್ಗೆ ಇಡುತ್ತಿದ್ದು, ರಾಜ್ಯದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿನ ಲಾಡ್ಜ್‌, ರೆಸಾರ್ಚ್‌, ಹೋಂಸ್ಟೇಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಮಾಲೀಕರು ಬಾಡಿಗೆಯನ್ನು ಏಕಾಏಕಿ ಏರಿಸಿದ್ದು, ಕೆಲವೆಡೆ 2-3 ಪಟ್ಟು ಏರಿಕೆಯಾಗಿದೆ.

ದ.ಕ.ಜಿಲ್ಲೆಯಲ್ಲಿ 80 ನೋಂದಾಯಿತ ಹೋಂಸ್ಟೇಗಳು, ಮಂಗಳೂರಿನಲ್ಲಿ ಅಸೋಸಿಯೇಷನ್‌ನಿಂದ ಸದಸ್ಯತ್ವ ಪಡೆದ 100ಕ್ಕೂ ಅಧಿಕ ಹೋಟೆಲ್‌ಗಳಿದ್ದು, ಜನವರಿ 2ರವರೆಗೆ ಎಲ್ಲವೂ ಮುಂಗಡ ಬುಕ್ಕಿಂಗ್‌ ಆಗಿವೆ. ಹೋಟೆಲ್‌ಗಳಲ್ಲಿನ ಬಾಡಿಗೆ 2.5 ಸಾವಿರ ರು.ನಿಂದ 5-8 ಸಾವಿರ ರು.ವರೆಗೆ ಏರಿಕೆಯಾಗಿದೆ. ಇನ್ನು, ಗೋಕರ್ಣ, ಹಂಪಿ, ಮುರುಡೇಶ್ವರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿನ ವಸತಿಗೃಹಗಳು ಬಹುತೇಕ ಭರ್ತಿಯಾಗಿವೆ.

ಕೊಡಗು, ದಾಂಡೇಲಿ ಸೇರಿದಂತೆ ಕೆಲ ಪ್ರವಾಸಿತಾಣಗಳಲ್ಲಿನ ರೆಸಾರ್ಚ್‌ಗಳಲ್ಲಿ ದಿನವೊಂದರ ಬಾಡಿಗೆ ದರ 20 ಸಾವಿರ ರು.ಗೂ ಹೆಚ್ಚಾಗಿದೆ. ಇಲ್ಲಿನ ಊಟ, ತಿಂಡಿ ಬೆಲೆಯಲ್ಲಿಯೂ ಹೆಚ್ಚಳ ಮಾಡಲಾಗಿದೆ. ರೆಸಾರ್ಚ್‌ಗಳಲ್ಲಿನ ಟೆಂಟ್‌ ಬಾಡಿಗೆ 250 ರು.ಗಳಿಂದ 600-700 ರು.ಗೆ ಏರಿಕೆಯಾಗಿದೆ. 5-7 ಸಾವಿರ ರು. ಇದ್ದ ಡಿಜೆ ಬಾಡಿಗೆ 6-7 ಸಾವಿರ ರು.ಗೆ ಏರಿಕೆಯಾಗಿದೆ. ಮೈಸೂರಿನ ಹೋಟೆಲ್‌ಗಳಲ್ಲಿ ದರವನ್ನು ಶೇ.20 ರಿಂದ 25 ರಷ್ಟುಹೆಚ್ಚಳ ಮಾಡಲಾಗಿದೆ.

ಇದೇ ವೇಳೆ, ಖಾಸಗಿ ಟೂರಿಸ್ಟ್‌ ಬಸ್‌ಗಳು ಕೂಡ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿವೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC