Tumakur : ಸಿದ್ಧರಾಮೇಶ್ವರ ಜಯಂತಿ ಯಶಸ್ಸಿಗೆ ಸಹಕಾರ ಅಗತ್ಯ

By Kannadaprabha NewsFirst Published Dec 4, 2022, 5:44 AM IST
Highlights

ಶ್ರೇಷ್ಠ ದಾರ್ಶನಿಕರೂ, ಕರ್ಮಯೋಗಿಗಳಾದ ಗುರುಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವವನ್ನು ರಾಜ್ಯಮಟ್ಟದಲ್ಲಿ ಕೆರೆಗೋಡಿ-ರಂಗಾಪುರ ಶ್ರೀಮಠ ವತಿಯಿಂದ ಜ.14 ಮತ್ತು 15ರಂದು ನಗರದ ಸಿದ್ದರಾಮೇಶ್ವರ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಭಕ್ತರು, ದಾನಿಗಳು ಸಹಕಾರ ಮತ್ತು ಪೋ›ತ್ಸಾಹ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

 ತಿಪಟೂರು :  ಶ್ರೇಷ್ಠ ದಾರ್ಶನಿಕರೂ, ಕರ್ಮಯೋಗಿಗಳಾದ ಗುರುಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವವನ್ನು ರಾಜ್ಯಮಟ್ಟದಲ್ಲಿ ಕೆರೆಗೋಡಿ-ರಂಗಾಪುರ ಶ್ರೀಮಠ ವತಿಯಿಂದ ಜ.14 ಮತ್ತು 15ರಂದು ನಗರದ ಸಿದ್ದರಾಮೇಶ್ವರ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಭಕ್ತರು, ದಾನಿಗಳು ಸಹಕಾರ ಮತ್ತು ಪೋ›ತ್ಸಾಹ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಶನಿವಾರ ಗುರುಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಮಾಜ ಬಂಧುಗಳು ಹಾಗೂ ಭಕ್ತರೆಲ್ಲರ ಅಭಿಲಾಷೆಯಂತೆ ಈ ಬಾರಿಯೂ ಮಠದ ನೇತೃತ್ವದಲ್ಲಿ ಸಿದ್ಧರಾಮೇಶ್ವರ ಜಯಂತಿಯನ್ನು ನಡೆಸಲು ರಾಜ್ಯ ಸಮಿತಿಯ ಅನುಮತಿಯೊಂದಿಗೆ ತೀರ್ಮಾನಿಸಲಾಗಿದೆ. ಗುರುಸಿದ್ಧರಾಮೇಶ್ವರ ಜಯಂತಿಯನ್ನು ವ್ಯವಸ್ಥಿತವಾಗಿ ಹಾಗೂ ಶಿಸ್ತು ಬದ್ಧವಾಗಿ ಆಚರಿಸುವ ಮೂಲಕ ಸಮಾಜದ ಎಲ್ಲ ವರ್ಗದವರಿಗೂ ಗುರುಸಿದ್ಧರಾಮರÜ ಕಾಯಕ ಸಂದೇಶವನ್ನು ತಲುಪಿಸಲು ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಈ ಜಯಂತಿಯಲ್ಲಿ ವಿಶೇಷವಾಗಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ರಾಜ್ಯಮಟ್ಟದ ವಿನೂತನವಾದ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು ಬಂದಂತಹ ರೈತ ಶರಣಬಂಧುಗಳಿಗೆ ಕೃಷಿಯ ಬಗ್ಗೆ ಹಾಗೂ ಕೃಷಿಯಲ್ಲಿ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಮಾತನಾಡಿ, ನೊಳಂಬ ಕೇಂದ್ರ ಸಮಿತಿ ಮಠದ ಮೇಲೆ ವಿಶ್ವಾಸವಿಟ್ಟು ಜಯಂತಿಯನ್ನು 2ನೇ ಬಾರಿಗೆ ನಡೆಸಲು ಅನುವು ಮಾಡಿಕೊಟ್ಟಿದ್ದು, ಅವರ ಅಪೇಕ್ಷೆಯಂತೆ ವಿಜೃಂಭಣೆಯಿಂದ ನಡೆಯಲಿದೆ. ಜಯಂತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸೇರಿದಂತೆ ಸಾಕಷ್ಟುಮಂತ್ರಿಗಳು ಭಾಗವಹಿಸಲಿದ್ದು ಸರ್ಕಾರದ ಮಟ್ಟದಲ್ಲಿ ಬೇಕಾದ ಎಲ್ಲಾ ಸಹಕಾರ ಕೊಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ಸಿದ್ಧರಾಮರ 850ನೇ ಜಯಂತಿ ತಿಪಟೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದ್ದು ಎಲ್ಲರೂ ಸಹಕಾರ ನೀಡಬೇಕೆಂದರು.

ಕಾಂಗ್ರೆಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಜಯಂತಿಯು ಇತಿಹಾಸ ನಿರ್ಮಿಸುವಂತೆ ಅದ್ಧೂರಿಯಾಗಿ ಮಾಡಬೇಕಿದೆ. ಜಯಂತಿಗೆ ಭಾಗವಹಿಸುವ ಎಲ್ಲರಿಗೂ ವ್ಯವಸ್ಥಿತ ರೀತಿಯಲ್ಲಿ ಸ್ವಾಗತ ಸಮಿತಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ನೊಳಂಬ ಕೇಂದ್ರ ಸಮಿತಿಯ ನಿರ್ದೇಶಕರಾದ ಮಾದೀಹಳ್ಳಿ ದಯಾನಂದ್‌, ಎಂ.ಆರ್‌. ಸಂಗಮೇಶ್‌, ಕೃಷಿ ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷ ಕೆ.ಎಂ. ರಾಜಣ್ಣ, ಗೌರವಾಧ್ಯಕ್ಷ ಸಾವಯವ ಕೃಷಿ ಪರಿವಾರದ ಪೊ›. ನಂಜುಂಡಪ್ಪ, ಸ್ವಾಗತ ಸಮಿತಿಯ ದಕ್ಷಿಣಮೂರ್ತಿ, ಕಾರ್ಯಾಧ್ಯಕ್ಷ ಸೋಮಣ್ಣ, ಖಜಾಂಚಿ ಹೇಮಂತ್‌, ಲೋಕೇಶ್‌, ಶಂಕರಪ್ಪ, ವಿಶ್ವನಾಥ್‌, ಯೋಗಾನಂದ್‌, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಶಶಿಕಿರಣ್‌, ತಾಪಂ ಮಾಜಿ ಅಧ್ಯಕ್ಷ ಸುರೇಶ್‌ ಮತ್ತಿತರರಿದ್ದರು.

15 ಸಾವಿರ ಜನರಿಗೆ ವಸತಿ ಸೌಲಭ್ಯ

ಸ್ವಾಗತ ಸಮಿತಿ ಅಧ್ಯಕ್ಷ ಮಧುಬೋರ್‌ವೆಲ್‌ ಮಾತನಾಡಿ, ಕಾರ್ಯಕ್ರಮದಂದು ಕೆಂಪಮ್ಮ ದೇವಿ ದೇವಸ್ಥಾನದಿಂದ ವೇದಿಕೆಯವರೆಗೂ ಗೋಡೆಕೆರೆ ಸಿದ್ದರಾಮೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು 850 ಪೂರ್ಣಕುಂಭ ಸ್ವಾಗತ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಗುವುದು. ಬರುವ ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು, ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು. 15 ಸಾವಿರ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಗರದ ಸುತ್ತಲಿನ 40ಕಿಲೋ ಮೀಟರ್‌ವರೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗುವುದು. ಒಟ್ಟಾರೆ ಸಿದ್ಧರಾಮ ಜಯಂತಿಗೆ ಬರದಿಂದ ಸಿದ್ಧತೆಗಳು ನಡೆಯುತ್ತಿದ್ದು ಭಕ್ತರು, ದಾನಿಗಳು ಮತ್ತಷ್ಟುಸಹಕಾರ ಕೊಡುವ ಮೂಲಕ ಯಶಸ್ವಿಗೊಳಿಸಬೇಕೆಂದರು.

click me!