ಸಾಕಪ್ಪಾ ಸಾಕು, ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಿ; ವಿದ್ಯಾರ್ಥಿಗಳ ಮನವಿ

By Kannadaprabha NewsFirst Published May 26, 2020, 2:45 PM IST
Highlights

ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಂಧ್ರಪ್ರದೇಶದ ನಂದ್ಯಾಲಕ್ಕೆ ಹೋಗಿದ್ದ ಸುಮಾರು 100 ವಿದ್ಯಾರ್ಥಿಗಳು ಲಾಕ್‌ಡೌನ್‌ ಕಾರಣಕ್ಕೆ ಅಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಕರೆತಂದು ಕ್ವಾರಂಟೈನ್ ಮಾಡಲಾಗಿದೆ. ಈಗ ವಿದ್ಯಾರ್ಥಿಗಳು ನಮ್ಮನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಸಿರಿಗೆರೆ(ಮೇ.26): ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಹೋಗಿ ಆಂಧ್ರಪ್ರದೇಶದ ನಂದ್ಯಾಲದಲ್ಲಿ ಸಿಲುಕಿಕೊಂಡು ನಂತರ ರಾಜ್ಯಕ್ಕೆ ಹಿಂದಿರುಗಿರುವ ವಿದ್ಯಾರ್ಥಿಯೊಬ್ಬ ರಾಜ್ಯ ಸರ್ಕಾರಕ್ಕೆ ಮಾಡಿಕೊಂಡಿರುವ ಮನವಿಯಿದು.

ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಂಧ್ರಪ್ರದೇಶದ ನಂದ್ಯಾಲಕ್ಕೆ ಹೋಗಿದ್ದ ಸುಮಾರು 100 ವಿದ್ಯಾರ್ಥಿಗಳು ಲಾಕ್‌ಡೌನ್‌ ಕಾರಣಕ್ಕೆ ಅಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಅಲ್ಲಿಂದ ರಾಜ್ಯಕ್ಕೆ ಕರೆತರಲು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಲವು ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿದ್ದರು. ವಾಪಸ್‌ ರಾಜ್ಯಕ್ಕೆ ಬರುವ ಮುನ್ನ ಅವರನ್ನು ನಂದ್ಯಾಲದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಹೀಗೆ ತನ್ನೂರಿಗೆ ಬಂದ ಎನ್‌.ಆರ್‌. ಹರೀಶ್‌ ಎಂಬ ವಿದ್ಯಾರ್ಥಿಯನ್ನು ಮಂಡ್ಯ ಜಿಲ್ಲೆಯ ಸಂತೆಕಸಲಗೆರೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಈಗ ಆತನ ಕ್ವಾರಂಟೈನ್‌ ಅವಧಿ ಮುಗಿದಿದ್ದರೂ ಆತನ ಬಿಡುಗಡೆ ಸಾಧ್ಯವಾಗುತ್ತಿಲ್ಲದಿರುವಕ್ಕೆ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕೊರೋನಾ ಪರೀಕ್ಷೆಗಾಗಿ ಗಂಟಲು ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಎರಡನೆ ಬಾರಿಗೆ ಮಾದರಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲವೆಂದೂ ಆತನಿಗೆ ತಿಳಿಸಲಾಗಿತ್ತು. ಆದರೆ ಈಗ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿದಿದ್ದರೂ ಬಿಡುಗಡೆಗೊಳಿಸುತ್ತಿಲ್ಲವೆಂದೂ, ಈಗ ಎರಡನೆ ಪರೀಕ್ಷೆಗೆ ಮಾದರಿಯನ್ನು ತೆಗೆದುಕೊಳ್ಳಲಾಗುವುದೆಂದು ಹೇಳಲಾಗುತ್ತಿದೆ.

ಕೊರೊನಾ ಸ್ಲಂ ಸ್ಫೋಟ; 38 ವರ್ಷದ ಮಹಿಳೆಗೆ ಸೋಂಕು

ತನ್ನ ಜೊತೆಗಿದ್ದ ಚಿತ್ರದುರ್ಗ, ಶಿವಮೊಗ್ಗ, ದೊಡ್ಡಬಳ್ಳಾಪುರ, ದಕ್ಷಿಣ ಕನ್ನಡ, ಹಾವೇರಿ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಗಿದೆ. ಆದ್ದರಿಂದ ಪೂಜ್ಯರು ನೆರವಾಗಿ ನನ್ನ ಬಿಡುಗಡೆಗೆ ಸಹಾಯ ಮಾಡಬೇಕಾಗಿ ಈ ವಿದ್ಯಾರ್ಥಿ ದೂರ​ವಾಣಿ ಮೂಲ​ಕ ಕೋರಿದ್ದಾನೆ.

ವಿದ್ಯಾರ್ಥಿಗಳಿದ್ದ ಪ್ರದೇಶದಲ್ಲಿ ಕೊರೋನಾ:

ರಾಜ್ಯದ ಸುಮಾರು 100 ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದ ನಂದ್ಯಾಲದ ಎನ್‌ಜಿಓ ಕಾಲೋನಿಯಲ್ಲಿ ಈಗ ಎರಡು ಕೊರೋನಾ ಕೇಸುಗಳು ಪತ್ತೆಯಾಗಿ ಆ ಭಾಗ ಸೀಲ್‌ಡೌನ್‌ ಆಗಿರುವುದಾಗಿ ವರದಿಯಾಗಿದೆ. ಸಕಾಲದಲ್ಲಿ ತಾವು ನೆರವಾಗಿ ನಮ್ಮನ್ನು ಇಲ್ಲಿಂದ ರಕ್ಷಿಸದೇ ಇದ್ದಲ್ಲಿ ನಾವೂ ಕೂಡ ವೈರಾಣು ದಾಳಿಗೆ ತುತ್ತಾಗಿ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತಿತ್ತು.

ತಾವು ನಮ್ಮ ಬಾಳಿನಲ್ಲಿ ಬೆಳಕಾಗಿ ಬಂದು ನಮ್ಮನ್ನು ರಕ್ಷಿಸಿದಿರಿ. ನಮ್ಮ ಪೋಷಕರು, ನಮ್ಮೆಲ್ಲರ ವತಿಯಿಂದ ತಮಗೆ ಕೃತಜ್ಞತೆ ಸಮರ್ಪಿಸುವುದಾಗಿ ಶಿವರೆಡ್ಡಿ ಎಂಬ ವಿದ್ಯಾರ್ಥಿ ಶ್ರೀಗಳಲ್ಲಿ ವಿನಂತಿ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಕ್ಷೇಮವಾಗಿ ಮನೆಗೆ ಮರಳಿರುವುದಾಗಿ ಶ್ರೀಗಳಿಗೆ ತಿಳಿಸಿದ್ದಾರೆ.
 
 

click me!