ಯೋಧನ ನೋಡಲು ಹರಿದುಬಂದ ಜನಸಾಗರ: ಸಕಲ ಸರ್ಕಾರಿ ಗೌರವಗಳೊಂದಿಗೆ ಗಣೇಶ್ ಅಂತ್ಯಕ್ರಿಯೆ

Published : Jun 16, 2022, 05:01 PM IST
ಯೋಧನ ನೋಡಲು ಹರಿದುಬಂದ ಜನಸಾಗರ: ಸಕಲ ಸರ್ಕಾರಿ ಗೌರವಗಳೊಂದಿಗೆ ಗಣೇಶ್ ಅಂತ್ಯಕ್ರಿಯೆ

ಸಾರಾಂಶ

ರಜೆ ಮುಗಿಸಿ ಸೇನೆಗೆ ಹಿಂದಿರುಗುವಾಗ ಬಿಹಾರದ ಕಿಶನ್ ಗಂಜ್‌ನಲ್ಲಿ ಸಾವನ್ನಪ್ಪಿದ್ದ ಕಾಫಿನಾಡ ಯೋಧ ನಾಯಕ್ ಗಣೇಶ್ ಅಂತ್ಯಕ್ರಿಯೆ ಸ್ವಗ್ರಾಮ ಮಸಿಗದ್ದೆಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ನಡೆದಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.16): ರಜೆ ಮುಗಿಸಿ ಸೇನೆಗೆ ಹಿಂದಿರುಗುವಾಗ ಬಿಹಾರದ ಕಿಶನ್ ಗಂಜ್‌ನಲ್ಲಿ ಸಾವನ್ನಪ್ಪಿದ್ದ ಕಾಫಿನಾಡ ಯೋಧ ನಾಯಕ್ ಗಣೇಶ್ ಅಂತ್ಯಕ್ರಿಯೆ ಸ್ವಗ್ರಾಮ ಮಸಿಗದ್ದೆಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ನಡೆದಿದೆ. ಜನಸಾಮಾನ್ಯರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನ ಬಾಗಿಲು ಹಾಕಿ ಹೆಮ್ಮೆಯ ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ದರ್ಶನ ಪಡೆದರು. ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ನೆರೆದಿದ್ದ ಸಾವಿರಾರು ಜನ ನಾಯಕ್ ಗಣೇಶ್ ಅಮರ್ ರಹೇ ಎಂದು ಘೋಷಣೆ ಕೂಗಿದರು. ಶಾಲಾ ಮಕ್ಕಳು ರಸ್ತೆಯಲ್ಲಿ ಸಾಲಾಗಿ ನಿಂತು ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು.

ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಾಗಿಲು: ಚಿಕ್ಕಮಗಳೂರು ತಾಲೂಕಿನ ಮಸಿಗದ್ದೇ ಗ್ರಾಮದ ನಾಗಯ್ಯ-ಗಂಗಮ್ಮ ಎಂಬುವರ ಪುತ್ರ ಗಣೇಶ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 24ರಂದು ರಜೆ ಹಾಕಿ ಬಂದಿದ್ದ ಗಣೇಶ್ ಜೂನ್ 12ರಂದು ಸೇನೆಗೆ ಹಿಂದಿರುಗಬೇಕಿತ್ತು. ಹಾಗಾಗಿ, ಜೂನ್ 8ರಂದು ವಾಪಸ್ ಹೊರಟಿದ್ದರು. ಆದರೆ, ಸೇನೆ ತಂಡ ಕೂಡಿಕೊಳ್ಳುವ ಮೊದಲೇ ಜೂನ್ 11ರಂದು ಬಿಹಾರದ ಕಿಶನ್ ಗಂಜ್ ಪ್ರದೇಶದಲ್ಲಿ ಗಣೇಶ್ ಮೃತದೇಹ ಪತ್ತೆಯಾಗಿತ್ತು. 

ಯೋಧ ಗಣೇಶ್ ಪಾರ್ಥೀವ ಶರೀರಕ್ಕೆ ಸಿ.ಟಿ.ರವಿ ಗೌರವ ನಮನ

ದೇಹದ ಮೇಲೆ ಒಂದೇ ಒಂದು ಗಾಯವಿಲ್ಲ. ಗಾಯದ ಕಲೆಯೂ ಇಲ್ಲ. ಸೇನೆಗೂ ಹೋಗಿಲ್ಲ. ಹೇಗೆ ಸಾವನ್ನಪ್ಪಿದರೂ ಎಂದು ಯೋಧನ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತವಿದೆ. ಆದರೂ, ಮಸಿಗದ್ದೆ ಸಮೀಪದ ಸಂಗಮೇಶ್ವರಪೇಟೆಯ ಜನ ಅಂಗಡಿ-ಮುಂಗಟ್ಟುಗಳನ್ನ ಸ್ವಯಂಪ್ರೇರಿತವಾಗಿ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಸರ್ಕಾರಿ ಸಕಲ ಗೌರವಗಳೊಂದಿಗೆ ಗಾಳಿಯಲ್ಲಿ ಮೂರು ಗುಂಡು ಕುಶಾಲತೋಪು ಹಾರಿಸಿ ಗೌರವ ಸೂಚಿಸಿದರು.

ರಸ್ತೆ ಬದಿ ಸಾಲಾಗಿ ನಿಂತು ಆಗಲಿದ ಸೈನಿಕನಿಗೆ ಗೌರವ: ಯೋಧ ಗಣೇಶ್ ಜೂನ್ 11ರಂದೇ ಸಾವನ್ನಪ್ಪಿದರು. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಆರು ದಿನಗಳ ಬಳಿಕ ಮೃತದೇಹ ಜಿಲ್ಲೆಗೆ ಆಗಮಿಸಿದ್ದು ನೂರಾರು ದೇಶಭಕ್ತರು ಬೈಕ್ ರ್ಯಾಲಿಯಲ್ಲಿ ಘೋಷಣೆ ಕೂಗುವ ಮೂಲಕ ಮೃತದೇಹ ಬರಮಾಡಿಕೊಂಡರು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಮೆರವಣಿಗೆಯಲ್ಲಿ ಹೊರಟ ಮೃತದೇಹಕ್ಕೆ ದಾರಿಯುದ್ಧಕ್ಕೂ ಅಂತಮ ನಮನ ಸಲ್ಲಿಸಿದರು. ಸಂಗಮೇಶ್ವರಪೇಟೆ, ಕಡಬಗೆರೆ ಹಾಗೂ ಬಾಳೆಹೊನ್ನೂರಿನ  ಸಾವಿರಾರು ಜನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಯೋಧನ ಅಂತಿಮ ದರ್ಶನ ಪಡೆದರು. 

ಮೆರವಣಿಗೆಯಲ್ಲಿ ಸಮಯದಲ್ಲಿ ಹೆಮ್ಮೆಯ ಯೋಧನ ಮೃತದೇಹಕ್ಕೆ  ರಸ್ತೆ ಬದಿ ಸಾಲಾಗಿ ನಿಂತು ಅಗಲಿದ ಸೈನಿಕನಿಗೆ ಶಾಲಾ ಮಕ್ಕಳು, ಜನರು ಗೌರವ ಸಲ್ಲಿಸಿದರು. ನಾಯಕ್ ಗಣೇಶ್ ಅಮರ್ ರಹೇ ಎಂದು ಘೋಷಣೆಗಳನ್ನು ಕೂಗಿದರು. ಕಡಬಗೆರೆಯಿಂದ ಮಸಿಗದ್ದೆವರೆಗೂ ಪಾರ್ಥಿವ ಶರೀರದ ಜೊತೆ ಬಂದ ನೂರಾರು ಸಾರ್ವಜನಿಕರು ಯೋಧನ ಅಂತ್ಯಸಂಸ್ಕಾರ ಮುಗಿಯುವವರೆಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕರು ಬಿಹಾರ ಅಷ್ಟಾಗಿ ಮುಂದುವರಿದಿಲ್ಲ. ಅಲ್ಲಿ ನೂರು ರೂಪಾಯಿಗೆ ಏನು ಬೇಕಾದ್ರು ಮಾಡುತ್ತಾರೆ. ಈ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮಾಜಿ ಸೈನಿಕ ಪ್ರಕಾಸ್ ಮನವಿ ಮಾಡಿದ್ದಾರೆ.

ಮಾನಸಿಕ ಖಿನ್ನತೆ: ರೈಫಲ್‌ನಿಂದ ಶೂಟ್ ಮಾಡಿಕೊಂಡು ಪೇದೆ ಆತ್ಮಹತ್ಯೆ!

ನಿವೃತ್ತಿಗೆ ಇನ್ನು ಒಂದು ವರ್ಷ ಬಾಕಿ: 14 ವರ್ಷ ಸೇವೆ ಸಲ್ಲಿಸಿದ ಗಣೇಶ್ ಇನ್ನೊಂದು ವರ್ಷ ಕಳೆದಿದ್ರೆ ನಿವೃತ್ತಿ ಆಗ್ತಿತ್ತು. ಆದ್ರೆ, ಸೇನೆಗೆ ಹೋಗುವ ಮಾರ್ಗಮಧ್ಯೆಯೇ ಸಾವನ್ನಪ್ಪಿರುವುದು ಕುಟುಂಬಸ್ಥರ ನೋವನ್ನ ಹೆಚ್ವು ಮಾಡಿದೆ. ಮೃತ ಯೋಧ ಗಣೇಶ್ ಪ್ರಸ್ತುತ ಜಮ್ಮುವಿನಲ್ಲಿ ಸಿಗ್ನಲ್ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ಗಣೇಶ್ ಐದು ವರ್ಷದ ಓರ್ವ ಹೆಣ್ಣು ಮಗಳಿದ್ದಾಳೆ. ಕಳೆದ ಮೂರು ವರ್ಷಗಳ ಹಿಂದೆ ನಾಗಯ್ಯ-ಗಂಗಮ್ಮ ದಂಪತಿಯ ಇನ್ನೊಬ್ಬ ಮಗ ಹಾಗೂ ಯೋಧ ಗಣೇಶ್ ಸಹೋದರ ಕೂಡ ತೀರಿಕೊಂಡಿದ್ದರು. ಇದೀಗ ಯೋಧ ಗಣೇಶ್ ಕೂಡ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದ್ದು  ಮೂರು ವರ್ಷಗಳ ಅಂತರದಲ್ಲಿ ಇಬ್ಬರು ಗಂಡು ಮಕ್ಕಳನ್ನ ಕಳೆದುಕೊಂಡ ಕುಟುಂಬ ಭವಿಷ್ಯದ ಕತ್ತಲೆಯಲ್ಲಿದೆ. ಹಾಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕುಟುಂಬದ ಹೆಗಲಿಗೆ ನಿಲ್ಲಬೇಕಿದೆ. ಈ ಮಧ್ಯೆಯೂ ಸಾವಿರಾರು ಜನ ಅಗಲಿದೆ ದೇಶದ ಹೆಮ್ಮೆಯ ಯೋಧನ ಸಾವಿಗೆ ಕಂಬನಿ ಮಿಡಿದರು.

PREV
Read more Articles on
click me!

Recommended Stories

PM Kisan : ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?
Motor Vehical: ರಸ್ತೆಯಲ್ಲಿ ನಿಮ್ಮ ವಾಹನ ತಡೆದರೆ ತಕ್ಷಣ ದಾಖಲೆ ಕೊಡಬೇಕಾ? ಟ್ರಾಫಿಕ್ ಪೊಲೀಸ್‌-RTO ಅಧಿಕಾರದ ಅಸಲಿ ಸತ್ಯ ಇಲ್ಲಿದೆ!