Latest Videos

ರೈತರಿಗೆ ಅರಿವು ಮೂಡಿಸಲು ಇಂದಿನಿಂದ ಹೋರಾಟ: ಯೋಗೀಶ್ವರ ಸ್ವಾಮಿ

By Kannadaprabha NewsFirst Published Apr 1, 2023, 5:59 AM IST
Highlights

ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರದಿಂದ 5 ಸಾವಿರ ರು. ಪೋ›ತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಹಾಗೂ ಇತರೆ ರೈತ ಸಂಘಟನೆಗಳ ಸಹಕಾರದೊಂದಿಗೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸತತ 32 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದರೂ ಸರ್ಕಾರ ಸ್ಪಂದಿಸದ ಕಾರಣ ರೈತರನ್ನು ಎಚ್ಚರಿಸುವ ಸಲುವಾಗಿ ಹಳ್ಳಿ ಹಳ್ಳಿಗೆ ಹೋಗಿ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಯೋಗೀಶ್ವರಸ್ವಾಮಿ ತಿಳಿಸಿದರು.

  ತಿಪಟೂರು :  ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರದಿಂದ 5 ಸಾವಿರ ರು. ಪೋ›ತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಹಾಗೂ ಇತರೆ ರೈತ ಸಂಘಟನೆಗಳ ಸಹಕಾರದೊಂದಿಗೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸತತ 32 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದರೂ ಸರ್ಕಾರ ಸ್ಪಂದಿಸದ ಕಾರಣ ರೈತರನ್ನು ಎಚ್ಚರಿಸುವ ಸಲುವಾಗಿ ಹಳ್ಳಿ ಹಳ್ಳಿಗೆ ಹೋಗಿ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಯೋಗೀಶ್ವರಸ್ವಾಮಿ ತಿಳಿಸಿದರು.

ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಬಲ ಬೆಲೆಗಾಗಿ ನಾವು ಹೋರಾಟ, ಉಪವಾಸ ಸತ್ಯಾಗ್ರಹ, ಕಪ್ಪುಪಟ್ಟಿಧರಿಸಿ ಪ್ರತಿಭಟನೆ, ಸ್ವಾಭಿಮಾನಿ ಸಮಾವೇಶ ಹೀಗೆ ಹಲವು ಹೋರಾಟಗಳನ್ನು ಹಮ್ಮಿಕೊಂಡರೂ ಸರ್ಕಾರ ರೈತರ ಹೋರಾಟಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡಲಿಲ್ಲ. ಇಲ್ಲಿನ ಜನಪ್ರತಿನಿಧಿಗಳ ರೈತ ವಿರೋಧಿ ಧೋರಣೆಯಿಂದ ತೆಂಗುಬೆಳೆಗಾರರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಚುನಾವಣೆ ಸಮೀಪಿಸುತ್ತಿದ್ದು ರಾಜಕಾರಣಿಗಳು ರೈತನ ಮನೆ ಹತ್ತಿರ ಹೋಗಲೇಬೇಕು, ಮತ ಕೇಳಲೇ ಬೇಕು. ಅದಕ್ಕಾಗಿ ರೈತರನ್ನು ಜಾಗೃತಿಗೊಳಿಸಲು ನಮ್ಮ ಹೋರಾಟ ಸಮಿತಿ ಸಜ್ಜಾಗಿದೆ. ಏ.1ರಿಂದಲೇ ಹೋರಾಟ ಪ್ರಾರಂಭಿಸಲಾಗುತ್ತಿದ್ದು, ನಮ್ಮೆಲ್ಲರ ಉಳಿವಿಗಾಗಿ ನಮ್ಮ ನಡೆ ಹಳ್ಳಿಯ ಕಡೆ ಎಂಬ ಆಶಯದೊಂದಿಗೆ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ನಮ್ಮ ಸಮಿತಿ ಭೇಟಿ ನೀಡಿ ರೈತರನ್ನು ಸಂಘಟಿಸಿ ಅವರೊಂದಿಗೆ ಸಂವಾದ ಮಾಡಿ ರೈತರ ಬೇಡಿಕೆಗಳ ಕರಪತ್ರಗಳನ್ನು ಹಂಚುತ್ತೇವೆ. ರೈತರು ಒಗ್ಗಟ್ಟಾಗಿ ನಮ್ಮೊಂದಿಗೆ ಕೈಜೋಡಿಸಬೇಕು. ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಹಸಿರು ಸೇನೆಯ ತಿಮ್ಲಾಪುರ ದೇವರಾಜು, ರೈತ ಸಂಘದ ಜಯಾನಂದಯ್ಯ, ಜಯಚಂದ್ರಶರ್ಮ, ಶ್ರೀಹರ್ಷ, ಮನೋಹರ್‌ಪಟೇಲ್‌, ಆರ್‌ಕೆಎಸ್‌ನ ಸ್ವಾಮಿ, ಬೆಲೆಕಾವಲು ಸಮಿತಿಯ ಶ್ರೀಕಾಂತ್‌ ಕೆಳಹಟ್ಟಿಮತ್ತಿತರರಿದ್ದರು.

APMC ಸೆಸ್‌ನಿಂದ ಬೆಲೆ ನೀಡಿ

  ತಿಪಟೂರು :  ಸರ್ಕಾರ ತನ್ನ ಬೊಕ್ಕಸದ ಜೊತೆಗೆ ಕೊಬ್ಬರಿ ವರ್ತಕರು ಸರ್ಕಾರಕ್ಕೆ ಕೊಡುವ ತೆರಿಗೆ ಹಾಗೂ ಎಪಿಎಂಸಿ ಸೆಸ್‌ನಿಂದ ಕೊಬ್ಬರಿಗೆ ಬೆಂಬಲ ನೀಡಿ ಎಂದು ಕೊಬ್ಬರಿ ವರ್ತಕರ ಸಂಘದ ಅಧ್ಯಕ್ಷ ಜಹೇಶ್‌ ಮೆಹತಾ ಒತ್ತಾಯಿಸಿದರು.

ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ  ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು.ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 23ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಧರಣಿಗೆ ತಿಪಟೂರು ಕೊಬ್ಬರಿ ವರ್ತಕರ ಸಂಘ, ಕೌಟು ವ್ಯಾಪಾರಿಗಳು ಹಾಗೂ ಜಾಗೃತಿ ಯುವ ಕ್ರಾಂತಿ ಪಡೆಯು ಬೆಂಬಲ ವ್ಯಕ್ತಪಡಿಸಿತು.

ತುಮಕೂರು ಜಾಗೃತಿ ಯುವ ಕ್ರಾಂತಿ ಪಡೆ ಅಧ್ಯಕ್ಷ ಆರ್‌. ವಿನಯ್‌ ಪ್ರಸಾದ್‌ ಮಾತನಾಡಿ, ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ ಎಂದು ಹೇಳಿ ಘೋಷಣೆ ಮಾಡಿದ್ದು ಆದರೆ ಈ ಭಾಗದಲ್ಲಿ ಪ್ರಮುಖ ಬೆಳೆ ಕೊಬ್ಬರಿಗೇಕೆ ಬೆಲೆ ಇಲ್ಲ. ಸರ್ಕಾರದ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿಯುತ್ತಿವೆ. ದೇಶ ಕಾಯುವ ಸೈನಿಕ, ಅನ್ನದಾತ ರೈತ ನಿಶ್ಚಿಂತೆಯಿಂದ ಬದುಕಿದಾಗ ಮಾತ್ರ ದೇಶ ಸುಭಿಕ್ಷವಾಗಲಿದೆ. ಆದರೆ ಸರ್ಕಾರಗಳು ಕೋಮುಸೌಹಾರ್ದವನ್ನು ಹಾಳು ಮಾಡುತ್ತಾ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿವೆ. ರೈತರ ಕಷ್ಟವನ್ನು ಅರ್ಥಮಾಡಿಕೊಳ್ಳದ, ಆಲಿಸದ ಸರ್ಕಾರಕ್ಕೆ ರೈತರೇ ತಕ್ಕ ಪಾಠ ಕಲಿಸಬೇಕು. ಈಗಲಾದರೂ ಸರ್ಕಾರ ಮಧ್ಯಪ್ರವೇಶಿಸಿ ತೆಂಗು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು.ಬೆಂಬಲ ಬೆಲೆ ಹಾಗೂ 3 ಸಾವಿರ ರು. ಪೋ›ತ್ಸಾಹ ಧನ ಘೋಷಿಸಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ಕೊಬ್ಬರಿ ವರ್ತಕರ ಸಂಘದ ಸಂಪಿಗೆ ಶಿವಣ್ಣ, ಎಸ್‌.ಎಸ್‌.ಕುಮಾರ್‌, ಸೋನುಗೋಯಲ್‌, ಕುಮಾರ್‌ ಲೋಕೇಶ್ವರ, ಎಸ್‌ಆರ್‌ವಿ ಸಂತೋಷ್‌, ಧನಂಜಯ್‌, ರಾಜಶೇಖರ್‌, ಶಿವಕುಮಾರ್‌, ಮಂಜುನಾಥ್‌, ಮಂಜು, ತುಮಕೂರು ಜಾಗೃತಿ ಯುವ ಕ್ರಾಂತಿ ಪಡೆ ಕಾರ್ಯದರ್ಶಿ ಬಿ.ಎಸ್‌. ಸಿದ್ದು, ದೇವರಾಜು, ಸುರೇಶ್‌, ಕನಕರಾಜು, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ, ಕಾರ್ಯದರ್ಶಿ ಜಯಚಂದ್ರ ಶರ್ಮ, ಮನೋಹರ್‌ ಪಟೇಲ್‌, ಸಿದ್ದಯ್ಯ, ಶ್ರೀಹರ್ಷ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

 

click me!