ಬಾಲ್ಯವಿವಾಹ ತಡೆ ಕಾಯಿದೆಗೆ ಇನ್ನಷ್ಟುಬಲ ನೀಡಿ; ಸಚಿವ ಹಾಲಪ್ಪ ಆಚಾರ್

By Kannadaprabha NewsFirst Published Aug 23, 2022, 12:01 PM IST
Highlights

ಬಾಲ್ಯವಿವಾಹ ತಡೆಗೆ ರಾಜ್ಯ ಸರ್ಕಾರ ಹಲವಾರು ಕಾನೂನಾತ್ಮಕ ಕ್ರಮ ಕೈಗೊಂಡಿದ್ದು, ಇನ್ನಷ್ಟುಕಾನೂನು ನಿಬಂಧನೆ ಕೋರಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದಾರೆ.

ಕುಕನೂರು (ಆ.23) : ಬಾಲ್ಯವಿವಾಹ ತಡೆಗೆ ರಾಜ್ಯ ಸರ್ಕಾರ ಹಲವಾರು ಕಾನೂನಾತ್ಮಕ ಕ್ರಮ ಕೈಗೊಂಡಿದ್ದು, ಇನ್ನಷ್ಟುಕಾನೂನು ನಿಬಂಧನೆ ಕೋರಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಾಲ್ಯವಿವಾಹ ತಡೆಗೆ ತಿದ್ದುಪಡಿ ಮಾಡಿದ ಕಾನೂನು ಪರಿಣಾಮಕಾರಿಯಾಗಿದ್ದರೂ ಮುಂದಿನ ಹಂತವಾಗಿ ಕಾನೂನು ನಿಬಂಧನೆ ಬಲಪಡಿಸಲು ಕೇಂದ್ರ ಸರ್ಕಾರದ ಮಟ್ಟದಿಂದ ಬೆಂಬಲದ ಅಗತ್ಯವಿದೆ. ವ್ಯಾಪಕವಾದ ಉಪಕ್ರಮ ಹೊರತರುವ ಪ್ರಕ್ರಿಯೆಯಲ್ಲಿ ಇಲಾಖೆ ಇದ್ದು, ಬ್ರಾಂಡ್‌ ರಾಯಭಾರಿ, ಯೂಟ್ಯೂಬ್‌ ವಿಡಿಯೊಗಳು, ಎಸ್‌ಒಪಿಗಳು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪಠ್ಯಕ್ರಮದ ಸೇರ್ಪಡೆ ಮಾಡಬೇಕೆಂದು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು: ಗುರು ಹಿರಿಯರ ಸಮಕ್ಷಮದಲ್ಲಿ ನಡೆದ ಅದ್ದೂರಿ ಮದುವೆ

ತಡೆಗೆ ಹಲವು ಕ್ರಮ: ಬಾಲ್ಯವಿವಾಹಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಬಾಲ್ಯವಿವಾಹ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯಿದೆ- 2006ಕ್ಕೆ ತಿದ್ದುಪಡಿ ತಂದಿದೆ. 2018ರ ಮಾ. 3ರಿಂದ ಜಾರಿಗೆ ಬರುವಂತೆ ಬಾಲ್ಯವಿವಾಹ ಅನೂರ್ಜಿತವಾಗಿದೆ. ಪೊಲೀಸ್‌ ಇಲಾಖೆಯು ಸ್ವಯಂಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಬಹುದು. ಮಹಿಳೆಯರಿಗೆ ಜೈಲು ಶಿಕ್ಷೆಯೂ ಇದೆ. ಕನಿಷ್ಠ ಶಿಕ್ಷೆಯ ಪ್ರಮಾಣ 1 ವರ್ಷವಿದೆ. ಈ ತಿದ್ದುಪಡಿಯನ್ನು ನ್ಯಾ. ಮದನ್‌ ಲೋಕೂರ್‌ ಅವರು ನ್ಯಾಯಾಲಯದಲ್ಲಿ ಪ್ರಗತಿಪರ ಹೆಜ್ಜೆ ಎಂದು ಶ್ಲಾಘಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದೆ. 10 ವಿವಿಧ ಇಲಾಖೆಗಳಿಂದ(ಆರ್‌ಡಿಪಿಆರ್‌, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ, ಸಮಾಜ ಕಲ್ಯಾಣ, ಕಾರ್ಮಿಕ, ಪೊಲೀಸ್‌ ಇತ್ಯಾದಿ) 58,400 ಕಾರ್ಯನಿರ್ವಹಣಾಧಿಕಾರಿಗಳನ್ನು ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾಗಿ ನೇಮಿಸಿ ಬಾಲ್ಯವಿವಾಹ ತಡೆಗೆ ಜನರಿಗೆ ಶಿಕ್ಷಣ ನೀಡಲು ಮತ್ತು ಬಾಲ್ಯವಿವಾಹದಿಂದಾಗುವ ಪರಿಣಾಮ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ.

2021- 22ನೇ ಸಾಲಿನಲ್ಲಿ ರಾಜ್ಯದ 788 ಹೋಬಳಿಗಳಲ್ಲಿ 3000 ವಿಡಿಯೋ ಆನ್‌ ವೀಲ್ಸ್‌ ಶೋಗಳನ್ನು ಆಯೋಜಿಸಿ ರಾರ‍ಯಲಿ, ಮಾನವ ಸರಪಳಿ, ಪ್ರಮಾಣವಚನ ಸ್ವೀಕಾರ, ನಿರ್ಣಯ ಅಂಗೀಕರಿಸುವ ಮೂಲಕ ಸಮುದಾಯ ಮತ್ತು ಮಧ್ಯಸ್ಥಗಾರರಲ್ಲಿ ಭಾರಿ ಪ್ರಚಾರ ಮತ್ತು ಜಾಗೃತಿ ಮೂಡಿಸುವ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ, ಕರಪತ್ರಗಳ ಮೂಲಕ ಬಾಲ್ಯವಿವಾಹ ಅಭಿಯಾನ ಮಾಡಲಾಗಿದೆ.

Child Marriage ಕೊರೋನಾ ವೇಳೆ ರಾಜ್ಯದಲ್ಲಿ 296 ಬಾಲ್ಯ ವಿವಾಹ, ದೇಶದಲ್ಲಿ ಕರ್ನಾಟಕದಲ್ಲೇ ಹೆಚ್ಚು!

ಮಾದರಿಯಾದ ಕೊಪ್ಪಳದ ‘ಸ್ಫೂರ್ತಿ’ ಯೋಜನೆ:

ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಜಾಗೃತಿ ಮೂಡಿಸಲು ‘ಸ್ಫೂರ್ತಿ’ ಯೋಜನೆಯು ಭಾರಿ ಯಶಸ್ಸು ಕಂಡಿತ್ತು. ಹೀಗಾಗಿ 2022- 23ರ ಬಜೆಟ್‌ ಘೋಷಣೆಯಲ್ಲಿ ರಾಜ್ಯ ಸರ್ಕಾರ ‘ಸ್ಫೂರ್ತಿ’ ಕಾರ್ಯಕ್ರಮವನ್ನು ವಿಸ್ತರಿಸಿದೆ. ಸುರಕ್ಷಿಣಿ ಸಹಯೋಗದೊಂದಿಗೆ ಕರ್ನಾಟಕದ 5 ಜಿಲ್ಲೆಗಳಲ್ಲಿ (ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ) ಸ್ಫೂರ್ತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕ್ರಮವನ್ನು ಪ್ರಾರಂಭಿಸಲಾಗಿದೆ.

‘ಸುರಕ್ಷಿಣಿ’ ವೆಬ್‌ ಪೋರ್ಟಲ್‌ ವಿಸ್ತರಣೆ:

ಬಾಲ್ಯವಿವಾಹ ಸಂತ್ರಸ್ತರು ಮತ್ತು ಪುನರ್ವಸತಿ ಸೌಲಭ್ಯಗಳನ್ನು ಪತ್ತೆ ಹಚ್ಚಲು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನ್ಯಾಷನಲ್‌ ಇನ್‌ಫಾರಮೆಟಿಕ್‌ ಸೆಂಟರ್‌ ಸಹಾಯದಿಂದ ‘ಸುರಕ್ಷಿಣಿ’ ವೆಬ್‌ ಪೋರ್ಟಲ್‌ಅನ್ನು ವಿನ್ಯಾಸಗೊಳಿಸಿ, ಕಾರ್ಯಗತಗೊಳಿಸಲಾಗಿದೆ. ಸುರಕ್ಷಿಣಿ ಪೋರ್ಟಲ್‌ನ ಸೇವೆಯನ್ನು 2022- 23ರಲ್ಲಿ ಇತರ 30 ಜಿಲ್ಲೆಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ.

ಬಾಲ್ಯವಿವಾಹವು ಬಾಲ್ಯವನ್ನು ಕೊನೆಗೊಳಿಸುತ್ತದೆ. ಇದು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆಯ ಹಕ್ಕುಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಬಾಲ್ಯವಿವಾಹ ಕೊನೆಯಾಗಬೇಕು. ಆ ನಿಟ್ಟಿನಲ್ಲಿ ಮತ್ತಷ್ಟುಪರಿಣಾಮಕಾರಿಯಾಗಿ ರಾಜ್ಯದಲ್ಲಿ ಈ ಅನಿಷ್ಟದ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರ ಮತ್ತಷ್ಟುಕಾನೂನು ನಿಬಂಧನೆ ಬಲ ಕೋರಿ ಪತ್ರ ಬರೆದಿದ್ದೇವೆ.

ಹಾಲಪ್ಪ ಆಚಾರ, ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

click me!