
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಸೆ.7): ರಾಸುಗಳನ್ನು ಪಾಲನೆ, ಪೋಷಣೆ ಮಾಡಿದೇ ವಾಹಗಳಿಗೆ ಡಿಕ್ಕಿ ಹೊಡೆದು ಬಲಿಯಾಗುತ್ತಿರುವ ಘಟನೆ ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ನಡೆಯುತ್ತಿದೆ. ರಾಸುಗಳ ಮಾಲೀಕರು ಅವುಗಳನ್ನು ಸಾಕಿದೇ ರಸ್ತೆಗೆ ಬಿಟ್ಟಿರುವ ಪರಿಣಾಮ ಕಳೆದ 20 ದಿನದಲ್ಲಿ 50ಕ್ಕೂ ಹೆಚ್ಚು ರಾಸುಗಳು ಸಾವು ಮೃತಪಟ್ಟಿವೆ. ಕಳೆದ 20 ದಿನಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ರಾಸುಗಳು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಡಿಗೆರೆ-ಕೊಟ್ಟಿಗೆಹಾರ ಮಾರ್ಗದಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಬಳಿ ಇಂದು ಕೂಡ ಅಪಘಾತದಿಂದ ಎರಡು ಜಾನುವಾರುಗಳು ಸಾವನ್ನಪ್ಪಿವೆ. ಮೂಡಿಗೆರೆಯಲ್ಲಿ ಹಾದುಹೋಗುವ ವಿಲ್ಲುಪುರಂ-ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತದಿಂದ ಒಂದು-ಎರಡು ಜಾನುವಾರುಗಳು ಸಾವನ್ನಪ್ಪುತ್ತಿವೆ. ಹೀಗೆ ಸಾವನ್ನಪ್ಪುತ್ತಿರುವ ಜಾನುವಾರುಗಳ ಸಂಖ್ಯೆ 20 ದಿನದಲ್ಲಿ 50ಕ್ಕೂ ಹೆಚ್ಚಾಗಿದೆ. ಕೈಮರದಿಂದ ಕೊಟ್ಟಿಗೆಹಾರದವರೆಗೆ ಹಾದುಹೋಗುವ ಹತ್ತಾರು ಹಳ್ಳಿಗಳಲ್ಲಿ ರಸ್ತೆ ಮಧ್ಯೆ ನಿಲ್ಲುವ ಅಥವ ರಸ್ತೆ ಬದಿ ಮೇಯುತ್ತಿರುವ ರಾಸುಗಳು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿವೆ. ಅವುಗಳಲ್ಲಿ ರಾತ್ರಿ ವೇಳೆಯೇ ಹೆಚ್ಚು. ರಾಸುಗಳು ರಸ್ತೆ ಮಧ್ಯೆ ಮಲಗುವುದರಿಂದ ರಾತ್ರಿ ವೇಳೆ ವಾಹನ ಸಾವರರು ವೇಗವಾಗಿ ಹೋಗುವುದರಿಂದ ಒಂದೆಡೆ ರಾಸುಗಳು ಸಾವನ್ನಪ್ಪುತ್ತಿವೆ. ಮತ್ತೊಂದೆಡೆ ಅಪಘಾತಗಳನ್ನ ತಪ್ಪಿಸಲು ಹೋಗಿ ಕಾರು-ಬೈಕ್ಗಳು ಅಪಘಾತಗಳಾಗಿ ವಾಹನ ಸವಾರರು ಗಾಯಾಳುಗಳಾಗುತ್ತಿದ್ದಾರೆ.
ಬಿಡಾಡಿ ದನಗಳನ್ನು ಗೋ ಶಾಲೆಗೆ ಸೇರಿಸಬೇಕೆಂಬ ಒತ್ತಾಯ
ಮೂಡಿಗೆರೆ ಹ್ಯಾಂಡ್ಪೋಸ್ಟ್ನಿಂದ ಕೊಟ್ಟಿಗೆಹಾರದವರೆಗೂ ಸುಮಾರು 300ಕ್ಕೂ ಅಧಿಕ ಬಿಡಾಡಿ ದನಗಳಿವೆ. ಜೊತೆಗೆ ರೈತರು ಸಾಕಿರುವ ರಾಸುಗಳು ಇವೆ. ರೈತರು ಕೂಡ ರಾಸುಗಳನ್ನ ಬೀದಿಯಲ್ಲಿ ಬಿಟ್ಟಿದ್ದಾರೆ. ಹಾಗಾಗಿ, ರಸ್ತೆಯಲ್ಲಿ ನಿತ್ಯ ರಾಸುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಈ ಬಗ್ಗೆ ಜಿಲ್ಲಾಡಳಿತವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಅಥವ ಗ್ರಾಮ ಪಂಚಾಯಿತಿಯೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸರ್ಕಾರ ಬಿಡಾಡಿ ದನಗಳನ್ನ ಗೋಶಾಲೆಗೆ ಸೇರಿಸಬೇಕೆಂದು ಸ್ಥಳಿಯರು ಕೂಡ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜಾನುವಾರುಗಳ ಮೇವಿಗೆ ಇದ್ದ ಗೋಮಾಳಗಳು ಒತ್ತುವರಿಯಾದ ಹಿನ್ನೆಲೆ ರಾಸುಗಳು ಎಲ್ಲೆಂದರಲ್ಲಿ ಮೇಯಲು ಹೋಗಿ ಪ್ರಾಣ ಕಳೆದುಳ್ಳುತ್ತಿವೆ ಎಂದು ಸ್ಥಳಿಯರು ಗೋಮಾಳ ಒತ್ತುದಾರರ ವಿರುದ್ಧವೂ ಕಿಡಿಕಾರಿದ್ದಾರೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಒತ್ತುವರಿಯಾಗಿರುವ ಗೋಮಾಳವನ್ನ ತೆರವು ಮಾಡಿ ಗೋವುಗಳು ಮೇವಿಗೆ ಮೀಸಲಿರಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.