ಕೆಆರ್‌ಎಸ್‌ ಅಣೆಕಟ್ಟೆಗೆ ಸ್ಟಾಪ್‌ಲಾಕ್ ಗೇಟ್ ಅಳವಡಿಕೆ ಅಗತ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

By Kannadaprabha NewsFirst Published Aug 12, 2024, 5:10 PM IST
Highlights

ತುಂಗಭದ್ರಾ ಜಲಾಶಯದಲ್ಲಿ ಆದ ಕ್ರಸ್ಟ್‌ಗೇಟ್ ಚೈನ್ ಕಟ್ ಪ್ರಕರಣದಿಂದ ಎಚ್ಚೆತ್ತು ಕೆಆರ್‌ಎಸ್ ಜಲಾಶಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. 

ಪಾಂಡವಪುರ (ಆ.12): ತುಂಗಭದ್ರಾ ಜಲಾಶಯದಲ್ಲಿ ಆದ ಕ್ರಸ್ಟ್‌ಗೇಟ್ ಚೈನ್ ಕಟ್ ಪ್ರಕರಣದಿಂದ ಎಚ್ಚೆತ್ತು ಕೆಆರ್‌ಎಸ್ ಜಲಾಶಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಕೃಷಿ-ಖುಷಿ ಕಾರ್ಯಕ್ರಮದಲ್ಲಿ ಭತ್ತದ ಸಸಿ ನಾಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾರಾಯಣಪುರ, ಆಲಮಟ್ಟಿ ಜಲಾಶಯದಲ್ಲಿ ಸ್ಟಾಪ್ ಲಾಕ್‌ಗೇಟ್ ಅಳವಡಿಸಲಾಗಿದೆ. ತುಂಗಭದ್ರ ಜಲಾಶಯದಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸಿಲ್ಲ. ಅದಕ್ಕಾಗಿಯೇ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದರು.

ಕೆಆರ್‌ಎಸ್ ಅಣೆಕಟ್ಟೆಯಲ್ಲೂ ಸ್ಟಾಪ್ ಲಾಕ್ ಗೇಟ್ ಅಳವಡಿಸಿಲ್ಲ. ಅಣೆಕಟ್ಟು ನಿರ್ಮಾಣ ಕಾಲದಲ್ಲಿ ಸ್ಟಾಪ್‌ಲಾಕ್ ವ್ಯವಸ್ಥೆ ಇಲ್ಲದಿದ್ದ ಕಾರಣ ಹಾಕಿರಲಿಲ್ಲ. ಈಗ ತುಂಗಭದ್ರಾ ಜಲಾಶಯದಲ್ಲಿ ಉಂಟಾಗಿರುವ ಪರಿಸ್ಥಿತಿ ಗಮನಿಸಿದರೆ ಕೆಆರ್‌ಎಸ್ ಸುರಕ್ಷತೆ ಹಾಗೂ ರೈತರ ಹಿತದೃಷ್ಟಿಯಿಂದ ಕೂಡಲೇ ಸ್ಟಾಪ್‌ಲಾಕ್ ವ್ಯವಸ್ಥೆ ಅಳವಡಿಸುವ ಅವಶ್ಯಕತೆ ಇದೆ ಎಂದರು. ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತವಾಗಿದೆ. ೧೯ನೇ ಕ್ರಸ್ಟ್‌ಗೇಟ್‌ನ ಚೈನ್ ತುಂಡಾದ ಪರಿಣಾಮ ಬಾಗಿಲು ತೆರೆದುಕೊಂಡಿದೆ. ಇದರಿಂದ ೩೦ ಸಾವಿರ ಕ್ಯುಸೆಕ್ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. 

Latest Videos

ಈ ಅನಾಹುತದಿಂದ ಜಲಾಶಯದ ೬೦ ಟಿಎಂಸಿ ನೀರು ಖಾಲಿಯಾಗುತ್ತದೆ. ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆ ತಂದಿದೆ ಎಂದು ಬೇಸರದಿಂದ ನುಡಿದರು. ತುಂಗಭದ್ರಾ ಜಲಾಶಯವನ್ನು ೭೦ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ತಾಂತ್ರಿಕ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿವೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಇದನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ನ ಚೈನ್ ತುಂಡಾದ ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷ್ಯ ಎನ್ನಲಾಗದು. 

ಸಂಸದ ರಾಘವೇಂದ್ರ ಎಷ್ಟು ಪೆದ್ದ ಅಂದರೆ ಯಾರಿಗೆ ಅರ್ಜಿ ಕೊಡಬೇಕು ಎಂದು ಗೊತ್ತಿಲ್ಲ: ಸಚಿವ ಮಧು ಬಂಗಾರಪ್ಪ

ಜಲಾಶಯದ ತಾಂತ್ರಿಕ ಸಮಿತಿ ಇರುತ್ತದೆ. ಆ ಸಮಿತಿ ಪ್ರತಿ ವರ್ಷ ಜಲಾಶಯದ ಸುರಕ್ಷತೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುತ್ತದೆ. ಕಾಟಾಚಾರದ ಪರಿಶೀಲನೆಗಳು ನಡೆದಾಗ ಈ ರೀತಿಯ ಅನಾಹುತಗಳು ಸಂಭವಿಸುತ್ತವೆ. ತಾಂತ್ರಿಕವಾಗಿ ಪರಿಣತಿ ಹೊಂದಿರುವ ತಜ್ಞರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಎಸ್‌ಟಿಜಿ ವಿದ್ಯಾಸಂಸ್ಥೆಯ ಸಿ.ಪಿ.ಶಿವರಾಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಇತರರಿದ್ದರು.

click me!