ವಿಸರ್ಜನೆ ವೇಳೆ ಗಣೇಶಗೆ ಕಲ್ಲು- ಮದ್ದೂರು ಉದ್ವಿಗ್ನ : ವಿಗ್ರಹದ ಮೇಲೆ ಉಗುಳಿದ ಸಾಗರ ಬಾಲಕರು

Kannadaprabha News   | Kannada Prabha
Published : Sep 08, 2025, 05:59 AM IST
Lord Ganesha. (File photo/ANI)

ಸಾರಾಂಶ

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಣಪತಿ ಮೂರ್ತಿ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ತೂರಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಭಾನುವಾರ ನಡೆದಿದೆ.

ಮದ್ದೂರು : ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಣಪತಿ ಮೂರ್ತಿ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ತೂರಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಭಾನುವಾರ ನಡೆದಿದೆ. ಇದರ ಬೆನ್ನಲ್ಲೇ, ಧಾರ್ಮಿಕ ಕೇಂದ್ರವೊಂದರ ಮೇಲೆ ಕಲ್ಲು ತೂರಾಟ ನಡೆದಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಎರಡು ಗುಂಪುಗಳು ಪರಸ್ಪರ ಕಲ್ಲೆಸೆದುಕೊಂಡಿವೆ. ಈ ವೇಳೆ ಪೊಲೀಸರು ಸೇರಿ 30 ಜನ ಗಾಯಗೊಂಡಿದ್ದಾರೆ. ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಲಾಗಿದೆ.

ಇದಾದ ಬೆನ್ನಲ್ಲೇ, ಕ್ರಮಕ್ಕೆ ಆಗ್ರಹಿಸಿ ಎರಡು ಸಮುದಾಯದ ಜನರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಗಲಭೆಯಾಗಬಹುದು ಎಂಬ ಭೀತಿಯಿಂದ ಪೊಲೀಸರು ಮತ್ತೊಂದು ಸುತ್ತು ಲಾಠಿ ಪ್ರಹಾರ ನಡೆಸಿ ಜನರನ್ನು ಓಡಿಸಿದ್ದಾರೆ. ಸದ್ಯ ಮದ್ದೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಘಟನೆ ಖಂಡಿಸಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಸೋಮವಾರ ಮದ್ದೂರು ಬಂದ್‌ಗೆ ಕರೆ ನೀಡಿವೆ.

ಗಲಾಟೆ ಹಿನ್ನೆಲೆಯಲ್ಲಿ ಭಗ್ನಗೊಂಡು ಅನಾಥವಾಗಿ ರಸ್ತೆಯಲ್ಲೇ ಬಿಟ್ಟು ಹೋಗಲಾಗಿದ್ದ ಗಣೇಶ ಮೂರ್ತಿಯನ್ನು ಪೊಲೀಸರೇ ವಿಸರ್ಜಿಸಿದ್ದಾರೆ.

ಕಲ್ಲುತೂರಾಟ:

ಮದ್ದೂರು ಪಟ್ಟಣದ ರಾಮ್ ರಹೀಂ ನಗರಕ್ಕೆ ಹೊಂದಿಕೊಂಡಿರುವ ಚನ್ನೇಗೌಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯನ್ನು ಭಾನುವಾರ ಸಂಜೆ ವಿಸರ್ಜನೆಗಾಗಿ ಡಿಜೆಯೊಂದಿಗೆ ಸಂಭ್ರಮದಿಂದ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಮೆರವಣಿಗೆ ರಾಮ್ ರಹೀಂ ನಗರದ ಮುಬಾರಕ್ ವೃತ್ತದ ಮಸೀದಿ ಮುಂಭಾಗದಿಂದ ಹೋಗುವಾಗ ಡಿಜೆ ಬಳಸಿ, ಕೇಸರಿ ಬಾವುಟಗಳೊಂದಿಗೆ ಯುವಕರು ನೃತ್ಯ ಮಾಡುತ್ತಿದ್ದರು. ಆಗ ಗಣೇಶಮೂರ್ತಿ ಮತ್ತು ಯುವಕರ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು ಪ್ರತಿಯಾಗಿ ಪಕ್ಕದಲ್ಲೇ ಇದ್ದ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿ ಮೆರವಣಿಗೆ ವೇಳೆ ಭದ್ರತೆಯಲ್ಲಿದ್ದ ಪೊಲೀಸರು, ಗೃಹರಕ್ಷಕದಳ ಸಿಬ್ಬಂದಿ ಸೇರಿದಂತೆ ಎರಡೂ ಸಮುದಾಯಗಳ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತಕ್ಷಣ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಎಲ್ಲಾ ಅಂಗಡಿಗಳು ಬಂದ್‌:

ಘಟನೆ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಮುಂಜಾಗೃತ ಕ್ರಮವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪೇಟೆಯ ರಸ್ತೆಗಳಲ್ಲಿನ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಮಂಡ್ಯ ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ಆಗಮಿಸಿ ಪರಿಶೀಲಿಸಿ ಮಾಹಿತಿ ಪಡೆದಿದ್ದು, ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ 1 ಕೆಎಸ್‌ಆರ್‌ಪಿ, ಡಿಎಆರ್ ತಂಡವನ್ನು ಭದ್ರತೆಗೆ ನಿಯೋಜಿಸಲಾಗಿದೆ.==ಪೊಲೀಸರಿಂದಲೇ

ಗಣಪತಿ ವಿಸರ್ಜನೆ

ಎರಡು ಗುಂಪುಗಳ ನಡುವಿನ ಘರ್ಷಣೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು. ಈ ವೇಳೆ ಕಲ್ಲುತೂರಾಟ ಮತ್ತು ಜನರ ನೂಕುನುಗ್ಗಲಿನಲ್ಲಿ ಗಣೇಶ ವಿಗ್ರಹ ಭಗ್ನಗೊಂಡು ಅನಾಥವಾಗಿತ್ತು. ಈ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಪೊಲೀಸರೇ ವಶಕ್ಕೆ ತೆಗೆದುಕೊಂಡು ಉಪ್ಪಿನಕೆರೆ ಕೆರೆಯಲ್ಲಿ ರಾತ್ರಿ ವಿಸರ್ಜನೆ ಮಾಡಿದ್ದಾರೆ.

ಮೆರವಣಿಗೆ ಪಟ್ಟಣದ ರಾಮ್ ರಹೀಂ ನಗರದ ಬಳಿಯ ಮಸೀದಿ ಬಳಿ ಬಂದಾಗ ಏಕಾಏಕಿ 60 ರಿಂದ 70 ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದರು. ಅಲ್ಲದೇ ಪಕ್ಕದಲ್ಲೆ ಇದ್ದ ಗುಜರಿಯಿಂದ ಐದಾರು ಕಬ್ಬಿಣದ ರಾಡುಗಳನ್ನು ತೂರಿದರು.

- ಘಟನಾ ಸ್ಥಳದಲ್ಲಿದ್ದ ಜಯಲಕ್ಷ್ಮಿ

ಗಣೇಶನ ವಿಗ್ರಹದ ಮೇಲೆ ಉಗುಳಿದ ಸಾಗರ ಬಾಲಕರು!

ಸಾಗರ: ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಇಬ್ಬರು ಬಾಲಕರು ಗಣಪತಿ ಮೂರ್ತಿಯ ಮೇಲೆ ಉಗುಳಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ಭಾನುವಾರ ನಡೆದಿದ್ದು, ಕೆಲಕಾಲ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಸಂಬಂಧ ಪೊಲೀಸರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಬಾಲಕರ ತಾಯಿ ಖೈರುನ್ನೀಸಾ ಹಿಂದೂ ಸಮಾಜದ ಕ್ಷಮೆಯಾಚಿಸಿದ್ದಾರೆ

PREV
Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ