
ಬೆಂಗಳೂರು: ಎಂಬಿಎ ಪರೀಕ್ಷೆಯಲ್ಲಿ ಫೇಲ್ ಆಗಿರುವ ಹಿನ್ನೆಲೆಯಲ್ಲಿ ಪತ್ರ ಬರೆದು ಮನೆ ಬಿಟ್ಟು ಹೋಗಿರುವ 25 ವರ್ಷದ ಯುವಕ ಕಾರ್ತಿಕ್ ಕಾಣೆಯಾಗಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಮೂಲದ ಕಾರ್ತಿಕ್ ಕಳೆದ ಕೆಲವು ವರ್ಷಗಳಿಂದ ಕೆ.ಆರ್.ಪುರಂ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಆತ, ಕುಟುಂಬದ ಏಕೈಕ ಆಧಾರವಾಗಿದ್ದನು.
ಕಳೆದ ಕೆಲವು ದಿನಗಳ ಹಿಂದೆ ಎಂಬಿಎ ಮರುಪರೀಕ್ಷೆಯ ಫಲಿತಾಂಶ ಬಂದಾಗ ಕಾರ್ತಿಕ್ ಮತ್ತೆ ಅಯೋಗ್ಯ ಎನಿಸಿಕೊಂಡಿದ್ದರು. ಈ ಆಘಾತವನ್ನು ತಾಳಲಾಗದೆ, ಆತ್ಮನಿಂದನೆಗೊಂಡ ಕಾರ್ತಿಕ್ ಪತ್ರ ಬರೆದು ಮನೆಯಿಂದ ಹೊರಟಿದ್ದಾರೆ.
ಈ ಪತ್ರ ಬರೆದ ನಂತರ, ಸೆಪ್ಟೆಂಬರ್ 5ರಂದು ಬೆಳಿಗ್ಗೆ ತನ್ನ ರೂಮ್ನಿಂದ ಹೊರಟ ಕಾರ್ತಿಕ್, ರಾಮಮೂರ್ತಿನಗರ ಬಳಿಯ ಆಲದಮರ ಬಸ್ಸ್ಟಾಪ್ನಲ್ಲಿ ಬಸ್ ಹತ್ತಿ ಹೊರಟಿರುವುದಾಗಿ ಶಂಕಿಸಲಾಗಿದೆ.
ಕಾರ್ತಿಕ್ ತನ್ನ ಕಂಪನಿಯ ಮೊಬೈಲ್ ಹಾಗೂ ಖಾಸಗಿ ಮೊಬೈಲ್ ಎರಡನ್ನೂ ರೂಮ್ನಲ್ಲೇ ಬಿಟ್ಟು ಹೊರಟಿದ್ದಾರೆ. ಇದರಿಂದ ಪೋಷಕರ ಆತಂಕ ಇನ್ನಷ್ಟು ಹೆಚ್ಚಾಗಿದೆ. ಕಾರ್ತಿಕ್ ಅವರ ತಂದೆ ಚಂದ್ರಶೇಖರ್ ಶೆಟ್ಟಿ, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮಗನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಪೋಷಕರು ಸಾರ್ವಜನಿಕರಿಗೆ ಮನವಿ ಮಾಡಿದ್ದು ಹೀಗಾಗಿದೆ. ನಮ್ಮ ಮಗ ಕಾರ್ತಿಕ್ ಎಲ್ಲಿಯಾದರೂ ಕಾಣಿಸಿಕೊಂಡರೆ ದಯವಿಟ್ಟು 9731605054 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರುತ್ತೇವೆ.