ಕಾಸರಗೋಡು ವಿದ್ಯಾರ್ಥಿಗಳಿಗೆ ಗಡಿ ಭಾಗದಿಂದ ಬಸ್‌ ಸೌಲಭ್ಯ..!

By Kannadaprabha NewsFirst Published Jun 16, 2020, 7:07 AM IST
Highlights

ಕೊರೋನಾ ಸೋಂಕಿನ ಅಬ್ಬರದ ನಡುವೆಯೂ ಜೂ.25ರಿಂದ ಜು.4ರ ವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದೆ. ದ.ಕ ಜಿಲ್ಲೆಯಲ್ಲೂ ಒಟ್ಟು 95 ಪರೀಕ್ಷಾ ಕೇಂದ್ರಗಳಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಕಾಸರಗೋಡಿನ 345 ವಿದ್ಯಾರ್ಥಿಗಳು ದ.ಕ.ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.

ಮಂಗಳೂರು(ಜೂ.16): ಕೊರೋನಾ ಸೋಂಕಿನ ಅಬ್ಬರದ ನಡುವೆಯೂ ಜೂ.25ರಿಂದ ಜು.4ರ ವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದೆ. ದ.ಕ ಜಿಲ್ಲೆಯಲ್ಲೂ ಒಟ್ಟು 95 ಪರೀಕ್ಷಾ ಕೇಂದ್ರಗಳಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಕಾಸರಗೋಡಿನ 345 ವಿದ್ಯಾರ್ಥಿಗಳು ದ.ಕ.ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಕಾಸರಗೋಡಿನ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯುತ್ತಿರುವುದರಿಂದ ಅವರಿಗೆ ಬಂದುಹೋಗಲು ಸೂಕ್ತ ಬಸ್‌ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಮೂಲಕ ತಲಪಾಡಿ ಗಡಿ ಬಂದ್‌ ಇದ್ದರೂ ಕೂಡ ಕಾಸರಗೋಡಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ.

ಎಲ್ಲ ಗಡಿಗಳಲ್ಲೂ ಬಸ್‌ ಸೌಲಭ್ಯ:

ದ.ಕ.ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕಾಸರಗೋಡಿನ 345 ಮಂದಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇವರಿಗೆ ಪರೀಕ್ಷೆಗೆ ಹಾಜರಾಗಲು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಬಸ್‌ಗಳನ್ನು ಈಗಾಗಲೇ ಗೊತ್ತುಪಡಿಸಿದೆ. ತಲಪಾಡಿ ಸೇರಿ ಎಲ್ಲ ಎಂಟು ಗಡಿಗಳಲ್ಲೂ ಬಸ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗಡಿ ಭಾಗದ ವಿದ್ಯಾರ್ಥಿಗಳ ಸಂಚಾರ ವಿಚಾರವಾಗಿ ಕಾಸರಗೋಡು ಮತ್ತು ದ.ಕ. ಜಿಲ್ಲಾಡಳಿತ ನಡುವೆ ಮಾತುಕತೆ ನಡೆದಿದ್ದು, ಪಾಸ್‌ ಮೂಲಕ ಅವರು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲಿದ್ದಾರೆ. ಪರೀಕ್ಷೆಗೆ ಹಾಜರಾಗುವವರಿಗೆ ಯಾವುದೇ ಗಡಿ ಸಮಸ್ಯೆ ಅಡ್ಡಿಯಾಗುವುದಿಲ್ಲ. ಪಾಸ್‌ ತೋರಿಸಿ ಸಂಚರಿಸಬಹುದಾಗಿದೆ.

ಬೆಳಗ್ಗೆ 8.45ಕ್ಕೆ ಸರಿಯಾಗಿ ಗಡಿಯಲ್ಲಿರಬೇಕು!

ಕಾಸರಗೋಡಿನಿಂದ ಬರುವ ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಬೆಳಗ್ಗೆ 8.45ಕ್ಕೆ ಸರಿಯಾಗಿ ತಲಪಾಡಿ ಗಡಿಯಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ. ಅಲ್ಲಿಂದ ಬಸ್‌ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯುವ ವ್ಯವಸ್ಥೆ ಆಗಲಿದೆ. ಅಲ್ಲದೆ ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್‌ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಕಾಸರಗೋಡಿನ ವಿದ್ಯಾರ್ಥಿಗಳನ್ನು ಕರೆತರಲು ತಲಪಾಡಿ ಗಡಿಯ ಬದಲು ಮಂಜೇಶ್ವರದವರೆಗೆ ಬಸ್‌ ಬರುವಂತಾಗಬೇಕು ಎಂಬ ಬೇಡಿಕೆ ವಿದ್ಯಾರ್ಥಿಗಳಿಂದ ಬಂದಿದೆ. ಈ ಕುರಿತಂತೆ ಶಿಕ್ಷಣ ಇಲಾಖೆ ಜಿಲ್ಲಾಡಳಿತದ ಗಮನ ಸೆಳೆದಿದೆ. ಜಿಲ್ಲಾಡಳಿತ ಸೂಚನೆ ನೀಡಿದರೆ ವಿದ್ಯಾರ್ಥಿಗಳನ್ನು ಕರೆತರಲು ಮಂಜೇಶ್ವರದವರೆಗೂ ಬಸ್‌ ತೆರಳಲಿದೆ.

ಕಾಡು ಪ್ರಾಣಿ ಎಂದು ತಿಳಿದು ಹಾರಿಸಿದ ಗುಂಡು ಗೆಳಯನಿಗೆ ಬಿತ್ತು...!

95 ಪರೀಕ್ಷಾ ಕೇಂದ್ರ: ಮಾರ್ಗಸೂಚಿಯಂತೆ ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಯಾವುದೇ ವಿದ್ಯಾರ್ಥಿಗೆ ರೋಗದ ಯಾವುದೇ ಲಕ್ಷಣ ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತೇಕವಾದ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 102 ವಿಶ್ರಾಂತಿ ಕೊಠಡಿ ಸಿದ್ಧಪಡಿಸಲಾಗುತ್ತಿದೆ. ಪರೀಕ್ಷೆ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗುತ್ತದೆ.

ದ.ಕ. ಜಿಲ್ಲೆಗೆ ರಾಜ್ಯದಿಂದ 65 ಸಾವಿರ ಮಾಸ್ಕ್‌ಗಳು ಬಂದಿದ್ದು, ವಿದ್ಯಾರ್ಥಿಗಳಿಗೆ ವಿತರಿಸುವ ದೃಷ್ಟಿಯಿಂದ ಎಲ್ಲಾ ಶಾಲೆಗಳಿಗೆ ತಲುಪಿಸಲಾಗಿದೆ. ಜೂ.15ರಿಂದ ಪರೀಕ್ಷಾ ಪ್ರವೇಶ ಪತ್ರ ವಿತರಣೆಯಾಗಲಿದ್ದು, ಇದೇ ಸಂದರ್ಭ ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್‌ಗಳು ದೊರೆಯಲಿವೆ.

ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್....!

ಸಹಾಯವಾಣಿ: ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಅಗತ್ಯ ಮಾಹಿತಿ ಪಡೆಯಲು ದ.ಕ. ಜಿಲ್ಲೆಯ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ರಜಾ ದಿನ ಹೊರತು ಪಡಿಸಿ ಪ್ರತಿ ದಿನ ಕಚೇರಿ ಸಮಯದಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಜಿಲ್ಲಾ ಕೇಂದ್ರದ ಸಹಾಯವಾಣಿ-ಟೋಲ್‌ ಫ್ರೀ-180042511017, ಮೊಬೈಲ್‌ 9845651353. ಬಂಟ್ವಾಳ-08255-232579, 9449020453, ಬೆಳ್ತಂಗಡಿ 08256-232004, 9008763829, ಮಂಗಳೂರು ಉತ್ತರ 0824-2423627,9449946810, ಮಂಗಳೂರು ದಕ್ಷಿಣ, 0824-2451250, 9740028090, ಮೂಡಬಿದಿರೆ 08258-236461, 948315753, ಪುತ್ತೂರು 08251-230827, 7619564178, ಸುಳ್ಯ 08257-230419, 9481720143.

ದ್ವಿತೀಯ ಪಿಯುಸಿ ಪರೀಕ್ಷೆ: ಸಹಾಯವಾಣಿ

ಜೂನ್‌ 18ರಂದು ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯು ಸಹಾಯವಾಣಿ ಸ್ಥಾಪಿಸಿದೆ. ವಿದ್ಯಾರ್ಥಿಗಳು ಯಾವುದೇ ನೆರವು ಬೇಕಿದ್ದಲ್ಲಿ ಅಥವಾ ಸಂಶಯಗಳಿದ್ದರೆ, ದೂರವಾಣಿ ಸಂಖ್ಯೆ 0824-2453787 ಇಲ್ಲಿಗೆ(ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ) ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

click me!