ಹನುಮಂತ ದೇವರ ಜಾತ್ರೆಗೆ ₹600 ಪಟ್ಟಿ ಸಂಗ್ರಹ: ಹಣ ಕೊಡದ 7 ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ ಹಾಕಿದ ಗ್ರಾಮಸ್ಥರು!

Published : May 01, 2026, 05:46 PM IST
Bagalkot social boycott

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಹುಣಸೀಕಟ್ಟಿ ಗ್ರಾಮದಲ್ಲಿ, ಜಾತ್ರೆಯ ದೇಣಿಗೆ ನೀಡದ ಕಾರಣಕ್ಕೆ 7 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಈ ಅಮಾನವೀಯ ಪದ್ಧತಿಯ ವಿರುದ್ಧ ಸಂತ್ರಸ್ತರು ಅಧಿಕಾರಿಗಳಿಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬಾಗಲಕೋಟೆ (ಮೇ 01): ಇಂದಿನ ಆಧುನಿಕ ಯುಗದಲ್ಲೂ ಹಳ್ಳಿಗಳಲ್ಲಿ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿ. ಕೇವಲ 600 ರೂಪಾಯಿ ದೇಣಿಗೆ (ಗ್ರಾಮದ ಜಾತ್ರೆಯ ಪಟ್ಟಿ ಹಣ) ನೀಡಿಲ್ಲ ಎಂಬ ಕಾರಣಕ್ಕೆ ಗ್ರಾಮದ 7 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಏನಿದು ವಿಲಕ್ಷಣ ಘಟನೆ?

ಗ್ರಾಮದಲ್ಲಿ ಏಪ್ರಿಲ್ 2 ರಂದು ಹನುಮಂತ ದೇವರ ಓಕುಳಿ ಜಾತ್ರೆ ನಡೆದಿತ್ತು. ಈ ಜಾತ್ರೆಗಾಗಿ ಪ್ರತಿ ಮನೆಯಿಂದ ಪಟ್ಟಿ ಹಣ ವಸೂಲಿ ಮಾಡಲಾಗಿತ್ತು. ಆದರೆ, ಗ್ರಾಮದ 7 ಕುಟುಂಬಗಳು 600 ರೂಪಾಯಿ ಪಟ್ಟಿ ಹಣ ನೀಡಲು ನಿರಾಕರಿಸಿದ್ದವು ಎನ್ನಲಾಗಿದೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಗ್ರಾಮದ ಹಿರಿಯರು, ಏಪ್ರಿಲ್ 5 ರಂದು ಇಡೀ ಊರಿನಲ್ಲಿ ಡಂಗುರ ಸಾರಿಸಿ ಈ ಏಳು ಕುಟುಂಬಗಳನ್ನು 'ದೈವದಿಂದ ಹೊರಗಿಡಲಾಗಿದೆ' ಎಂದು ಘೋಷಿಸಿದ್ದಾರೆ.

ಬಹಿಷ್ಕಾರದ ಕಠಿಣ ನಿಯಮಗಳು:

ಹಿರಿಯರು ಸಾರಿಸಿರುವ ಡಂಗುರದ ಪ್ರಕಾರ, ಬಹಿಷ್ಕಾರಕ್ಕೊಳಗಾದ ಕುಟುಂಬಗಳ ವಿರುದ್ಧ ಈ ಕೆಳಗಿನ ನಿರ್ಬಂಧ ಹೇರಲಾಗಿದೆ:

  • ಈ ಕುಟುಂಬಗಳ ಮನೆಗೆ ಯಾವುದೇ ಸ್ವಾಮೀಜಿಗಳು ಅಥವಾ ಪೂಜಾರಿಗಳು ಹೋಗುವಂತಿಲ್ಲ.
  • ಇವರ ಮನೆಯಲ್ಲಿ ನಡೆಯುವ ಯಾವುದೇ ಶುಭ ಅಥವಾ ಅಶುಭ ಕಾರ್ಯಗಳಿಗೆ ಗ್ರಾಮಸ್ಥರು ಹಾಜರಾಗುವಂತಿಲ್ಲ.
  • ಗ್ರಾಮದ ಕಿರಾಣಿ ಅಂಗಡಿಯವರು ಈ ಕುಟುಂಬಗಳಿಗೆ ಯಾವುದೇ ಜೀವನಾವಶ್ಯಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ.

ನ್ಯಾಯಕ್ಕಾಗಿ ರೇಲ್ವೆ ಉದ್ಯೋಗಿಯ ಹೋರಾಟ:

ಬಹಿಷ್ಕಾರಕ್ಕೊಳಗಾದವರಲ್ಲಿ ಯಲ್ಲಪ್ಪ ಛಗಣ್ಣವರ ಎಂಬುವವರು ಹುಬ್ಬಳ್ಳಿಯ ರೇಲ್ವೆ ವರ್ಕ್‌ಶಾಪ್‌ನಲ್ಲಿ ಸೀನಿಯರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಅಮಾನವೀಯ ಪದ್ಧತಿಯನ್ನು ಪ್ರಶ್ನಿಸಿರುವ ಅವರು, 'ನಮಗೆ ಈ ಬಹಿಷ್ಕಾರದಿಂದ ಸಮಾಜದಲ್ಲಿ ತೀವ್ರ ಅಪಮಾನವಾಗಿದೆ, ನಮ್ಮ ಗೌರವಕ್ಕೆ ಧಕ್ಕೆಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲ್ಲಪ್ಪ ಅವರು ಜಮಖಂಡಿ ತಹಸೀಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಡಂಗುರ ಸಾರಿದವರು ಮತ್ತು ಸಾರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಭೇಟಿ; ಸಂತ್ರಸ್ತರ ಅತೃಪ್ತಿ:

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಭೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಕೇವಲ ಸಮಾಧಾನ ಮಾಡಿದರೆ ಸಾಲದು, ನಮಗಾದ ಅಪಮಾನಕ್ಕೆ ಹೊಣೆ ಯಾರು? ಅನ್ಯಾಯ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಶಿಕ್ಷೆಯಾಗಬೇಕು ಎಂದು ಸಂತ್ರಸ್ತ ಕುಟುಂಬಗಳು ಪಟ್ಟು ಹಿಡಿದಿವೆ. ಸಂವಿಧಾನದ ಅಡಿಯಲ್ಲಿ ಸಾಮಾಜಿಕ ಬಹಿಷ್ಕಾರವು ಗಂಭೀರ ಅಪರಾಧವಾಗಿದ್ದು, ಜಿಲ್ಲಾಡಳಿತ ಈ ಪ್ರಕರಣವನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಬೀದರ್‌ನ ಬಾನಿಗೆ ಮರಳಿದ ಲೋಹದ ಹಕ್ಕಿ! ಬೀದರ್‌-ಬೆಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಬೆಂಗಳೂರು ಜಲಮಂಡಳಿಯಿಂದ ನಿವಾಸಿಗಳಿಗೆ ಕಾವೇರಿ ನೀರಿನ ದರ ಏರಿಕೆ ಶಾಕ್, ಮತ್ತೆ ಶೇ.3ರಷ್ಟು ಹೆಚ್ಚಳ!