Chikkaballapur: ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಸುಧಾಕರ್

By Govindaraj SFirst Published Feb 8, 2023, 9:38 PM IST
Highlights

ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆ ಮಾಡಲು ಮುಂದಿನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. 

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಫೆ.08): ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆ ಮಾಡಲು ಮುಂದಿನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. ಮುದ್ದೇನಹಳ್ಳಿಯ ಮುಖಂಡ ಶಿವಕುಮಾರ್ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐಐಟಿ ಸ್ಥಾಪನೆ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಲಾಗುವುದು, ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಜೊತೆಗೆ ಮುಖ್ಯಮಂತ್ರಿಗಳಿಂದ ಇದಕ್ಕೆ ಶಿಫಾರಸ್ಸು ಪತ್ರ ಕೊಡಿಸುವುದಾಗಿ ಅವರು ಹೇಳಿದರು.

ಸರ್ ಎಂವಿ ಅವರಿಗೆ ನಿಜವಾದ ಗೌರವ: ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ ಡೇ ಆಗಿ ಆಚರಿಸಲಾಗುತ್ತಿದೆ. ಅವರ ಹುಟ್ಟೂರಿನಲ್ಲಿ ಐಐಟಿ ತೆರೆದರೆ ಅವರಿಗೆ ನಿಜವಾದ ಗೌರವ ಸಮರ್ಪಣೆ ಮಾಡಿದಂತಾಗುತ್ತದೆ, ಮುದ್ದೇನಹಳ್ಳಿ ರಾಜಧಾನಿ ಬೆಂಗಳೂರಿಗೆ ಅತೀ ಸಮೀಪದಲ್ಲಿದ್ದು, ಬೋಧಕರಿಗೆ ಕೊರತೆ ಇಲ್ಲ. ಹಾಗಾಗಿ ಐಐಟಿ ಮಾಡಲು ಮುದ್ದೇನಹಳ್ಳಿ ಯೋಗ್ಯ ಸ್ಥಳವಾಗಿದೆ. ಜೊತೆಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿವಿಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ಮುದ್ದೇನಹಳ್ಳಿಯನ್ನು ಶಿಕ್ಷಣ ವಲಯವಾಗಿ ಬದಲಿಸುವ ಪಣ ತೊಟ್ಟಿರುವುದಾಗಿ ಸಚಿವರು ಹೇಳಿದರು.

ಕೆ.ಆರ್‌.ಪೇಟೆಯಲ್ಲಿ ರೇವಣ್ಣ ಸ್ಪರ್ಧೆ ಮಾಡಲ್ಲ: ಶಾಸಕ ಸಿ.ಎಸ್‌.ಪುಟ್ಟರಾಜು

ಮುದ್ದೆನಹಳ್ಳಿ ಅತಿ ದೊಡ್ಡ ಗ್ರಾಪಂ ಆಗಿದ್ದು, ಈ ಗ್ರಾಪಂ ವ್ಯಾಪ್ತಿಯ ಪ್ರತಿ ಕುಗ್ರಾಮದಲ್ಲಿಯೂ ಅಬಿವೃದ್ಧಿ ಮಾಡಲಾಗಿದೆ. ಗುಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ, ಇಡೀ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಇದ್ದರೆ, ಮುದ್ದೇನಹಳ್ಳಿ ಗ್ರಾಮಕ್ಕೆ ಒಂದು ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿದೆ. ಈ ಗ್ರಾಪಂನ ಎಲ್ಲ ಗ್ರಾಮಗಳ ನಿವೇಶನ ರಹಿತರಿಗೆ ಉಚಿತ ನಿವೇಶನ ನೀಡುವ ಕೆಲಸವಾಗಿದೆ. ಜೊತೆಗೆ ಅರಣ್ಯ ಇಲಾಖೆ ಜೊತೆ ಇರುವ ಸಂಘರ್ಷ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪಿಎಫ್ಐ ಸಂಘಟನೆಯಿಂದ ಜೀವ ಬೆದರಿಕೆ: ಮೇಲುಕೋಟೆ ಯತಿರಾಜ ಜೀಯರ್‌ಗೆ ವೈ ಮಾದರಿ ಭದ್ರತೆ

ಸ್ತ್ರೀ ಶಕ್ತಿ ಸಂಘಗಳಿಗೆ ವಿಶೇಷ ಸೌಲಭ್ಯ ನೀಡಲಾಗಿದೆ, ಮಹಿಳೆಯರಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಮುದ್ದೇನಹಳ್ಳಿಯಲ್ಲಿ ಸ್ನಾತಕೋತ್ತರ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವ್ಯಾಸಂಗಕ್ಕೆ 300 ಕೋಟಿ ಅನುದಾನ ನೀಡಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸರ್ ಎಂವಿ ಅವರ ಗ್ರಾಮವನ್ನು ದೇಶ ಗುರ್ತಿಸುವಂತಾಗಬೇಕು ಎಂಬ ಕನಸು ಹೊಂದಿರುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ರಾಮಣ್ಣ, ಶಿವಕುಮಾರ್, ಗ್ರಾಪಂ ಅಧ್ಯಕ್ಷ ಮುನಿನಾರಯಣಪ್ಪ, ರಮೇಶ್, ನಾರಾಯಣಸ್ವಾಮಿ, ಮುರಳಿ, ಮಂಜುನಾಥ್, ಮುನಿರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!