ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯಗೆ ಒತ್ತಾಯ

Published : Feb 18, 2023, 05:35 AM IST
 ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯಗೆ ಒತ್ತಾಯ

ಸಾರಾಂಶ

ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಬೇಕು ಎಂದು ದೊಡ್ಡಹುಂಡಿ ಗ್ರಾಮಸ್ಥರು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಒತ್ತಾಯಿಸಿದರು.

  ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಬೇಕು ಎಂದು ದೊಡ್ಡಹುಂಡಿ ಗ್ರಾಮಸ್ಥರು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಒತ್ತಾಯಿಸಿದರು.

ಮೈಸೂರು ತಾಲೂಕು ದೊಡ್ಡಹುಂಡಿಯ ಗ್ರಾಮಸ್ಥರು ಗುರುವಾರ ರಾತ್ರಿ ಬೆಂಗಳೂರಿನ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀವೆ ನಿಲ್ಲಬೇಕು, ಈ ಬಾರಿ ನಿಮ್ಮನ್ನು ಗೆಲ್ಲಿಸುತ್ತೇವೆ, ನೀವು ನಿಲ್ಲದಿದ್ದರೆ, ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಋುಣ ನನ್ನ ಮೇಲೆ ಇದೆ. ಆದರೆ ನನ್ನನ್ನು ಸೋಲಿಸಿದ ಕ್ಷೇತ್ರದಲ್ಲಿ ಮತ್ತೆ ನಾನು ನಿಲ್ಲುವುದಿಲ್ಲ. ಈ ಬಾರಿ ಹೈಕಮಾಂಡ್‌ ಒಪ್ಪಿದರೆ ಕೋಲಾರದಿಂದ ಸ್ಪರ್ಧಿಸುತ್ತೇನೆ. ಡಾ. ಯತೀಂದ್ರ ವರುಣದಿಂದ ಸ್ಪರ್ಧಿಸುತ್ತಿದ್ದಾರೆ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆಮಾಡುತ್ತೇವೆ. ನಾನೇ ಅಭ್ಯರ್ಥಿ ಎಂದು ತಿಳಿದು, ಕಾಂಗ್ರೆಸ್‌ ಅಭ್ಯರ್ಥಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಿಸಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ಚಾಮುಂಡೇಶ್ವರಿ ಕ್ಷೇತ್ರದ ಉಳಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡೋಣ ಎಂದರು.

ಈ ವೇಳೆ ಧನಗಳ್ಳಿ ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷ ಪುಟ್ಟಬಸವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಸೋಮಣ್ಣ, ಗೌಡಿಕೆ ಚಿಕ್ಕೇಗೌಡ, ಮಾಲೇಗೌಡ, ಡಿ.ಸಿ. ಬಸವೇಗೌಡ, ಪೋಸ್ಟ್‌ ಬಸವರಾಜಪ್ಪ, ಸಿ. ಚಿಕ್ಕಣ್ಣ, ಎನ್‌. ಚಿಕ್ಕೇಗೌಡ, ಅಂಗಡಿ ನಾಗರಾಜು, ವದರಯ್ಯನ ಚಿಕ್ಕೇಗೌಡ, ಕ್ಲಬ್‌ ಮಹಾದೇವು, ಎಂ. ಎತ್ತೇಗೌಡ, ಮರಣಿ ಬಸಪ್ಪ, ಸಿ. ನಾಗೇಂದ್ರ, ಡಿ. ಬಸವರಾಜು, ಡೈರಿ ಬಸಪ್ಪ, ಕೆ. ಬಸವೇಗೌಡ, ಪಿ. ನಾಗೇಗೌಡ, ಕೆರೆಹುಂಡಿ ಕನಕೇಗೌಡ, ಬಸವಲಿಂಗು, ಮಹಾದೇವಸ್ವಾಮಿ, ಶ್ರೀನಿವಾಸ್‌ ಹಾಗೂ ಗ್ರಾಮಸ್ಥರು ಇದ್ದರು.

ಜೆಡಿಎಸ್‌ನ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.

 ಮೈಸೂರು :  ಕಳೆದ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಚಾಮುಂಡೇಶ್ವರಿ ಕ್ಷೇತ್ರವನ್ನು ಕಾಂಗ್ರೆಸ್‌ ಭದ್ರಕೋಟೆಯನ್ನಾಗಿಸಿಕೊಳ್ಳಲು ಮುಂದಾಗಿರುವ ಪಕ್ಷದ ನಾಯಕರು, ಶುಕ್ರವಾರ ಜೆಡಿಎಸ್‌ನ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಮೈಸೂರು-ಹುಣಸೂರು ರಸ್ತೆಯ ಲಿಂಗದೇವರುಕೊಪ್ಪಲಿನ ಬಳಿ ಕಾಂಗ್ರೆಸ್‌ ಆಯೋಜಿಸಿದ್ದ ಸ್ವಾಭಿವಾನಿ ಪಡೆ ಕಾಂಗ್ರೆಸ್‌ ಸೇರ್ಪಡೆ ಹಾಗೂ ಕಾಂಗ್ರೆಸ್‌ ಪಕ್ಷದ ಬೃಹತ್‌ ಸಮಾವೇಶದಲ್ಲಿ ಜಿ.ಟಿ.ದೇವೇಗೌಡರ ವಿರೋಧಿ ಬಣದ ಹಲವರು ಕಾಂಗ್ರೆಸ್‌ ಸೇರಿದರು.

ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಸಿಟ್ಟಿಗೆದ್ದು ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದ ಪ್ರಮುಖ ನಾಲ್ವರು ಮುಖಂಡರಾದ ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್‌. ಮಾದೇಗೌಡ, ಮುಖಂಡ ಹಿನಕಲ್‌ ಕೆಂಪನಾಯಕ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಸ್ವಾಭಿಮಾನಿ ಪಡೆಯ ನಾಯಕರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು. ಜೆಡಿಎಸ್‌ನಲ್ಲಿ ತಮಗಾದ ಅನ್ಯಾಯ ಮತ್ತು ನಾಯಕರಿಂದ ನೋವಿನಿಂದ ಕಾಂಗ್ರೆಸ್‌ ಸೇರಿದ್ದೇವೆ. ಅಧಿಕಾರದ ಆಸೆ ಇಲ್ಲದೆ ಪಕ್ಷ ಗೆಲ್ಲಿಸುವುದು ನಮ್ಮ ಉದ್ದೇಶ ಎಂದರು.

ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, 1983ರಿಂದ ಅನುಯಾಯಿ ಆಗಿದ್ದೆ. ಸಿದ್ದರಾಮಯ್ಯ ಅವರು ವರುಣ ಕ್ಷೇತ್ರಕ್ಕೆ ಹೋಗಿದ್ದರಿಂದ ಕಾಂಗ್ರೆಸ್‌ ಹಿಡಿತ ತಪ್ಪಿತು. ಜಿ.ಟಿ.ದೇವೇಗೌಡರು ಏನೇನೋ ಹೇಳಿ ನಂಬಿಸಿದರು. 2013ರಲ್ಲಿ ಜೆಡಿಎಸ್‌ಗೆ ಹೋದೆವು. 2018ರಲ್ಲಿ ಜಿ.ಟಿ.ದೇವೇಗೌಡರ ಗೆಲುವಲ್ಲ. ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂದು ಜನರು ನಿರ್ಧರಿಸಿದ್ದರಿಂದ ಜಿ.ಟಿ.ದೇವೇಗೌಡರು ಗೆದ್ದರು. ಕ್ಷೇತ್ರದಲ್ಲಿ ಸಾವಿರಾರು ಮಂದಿ ಕೋವಿಡ್‌ಗೆ ಬಲಿಯಾದರು. ಆದರೂ ಕ್ಷೇತ್ರದ ಶಾಸಕ ಜನರ ಸಂಕಷ್ಟಆಲಿಸಲಿಲ್ಲ. ಸಾಂತ್ವನ ಹೇಳಲಿಲ್ಲ. ಅವನ ಮಗನೂ ದೊಡ್ಡ ಕ್ರಿಮಿನಲ್‌ ಆಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು

PREV
Read more Articles on
click me!

Recommended Stories

Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!