Mysuru : ' ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶವಿದೆ '

By Kannadaprabha NewsFirst Published Dec 1, 2022, 5:23 AM IST
Highlights

ಸ್ವಾಭಿಮಾನದ ಪ್ರತೀಕವಾದ ಸಿದ್ದರಾಮಯ್ಯನವರು ಸಾಮಾಜಿಕ ವಿಷಯ ಬಂದಾಗ ಕನಕದಾಸರಂತೆ ಸೆಟೆದು ನಿಲ್ಲುತ್ತಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳಿದ್ದೂ, ತಾವು ಮತಚಲಾಯಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.

  ಮೈಸೂರು (ಡಿ.01):  ಸ್ವಾಭಿಮಾನದ ಪ್ರತೀಕವಾದ ಸಿದ್ದರಾಮಯ್ಯನವರು ಸಾಮಾಜಿಕ ವಿಷಯ ಬಂದಾಗ ಕನಕದಾಸರಂತೆ ಸೆಟೆದು ನಿಲ್ಲುತ್ತಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳಿದ್ದೂ, ತಾವು ಮತಚಲಾಯಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.

ನಗರದ ಕಲಾಮಂದಿರದಲ್ಲಿ (Karnataka)  ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವ ಹಾಗೂ ನಗರ, ಜಿಲ್ಲಾ, ತಾಲೂಕು ಕುರುಬರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಗಳಿಗೆ (Students) ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನಕರ ಗುಣ:

ಸಿದ್ದರಾಮಯ್ಯ ಅವರು ಕನಕದಾಸರ ಗುಣಗಳನ್ನು ಹೊಂದಿದ್ದಾರೆ. ಕನಕದಾಸರು ಭಕ್ತಿಯ ವಿಷಯದಲ್ಲಿ ಬಾಣದಂತೆ ಬಾಗುತ್ತಿದ್ದರು. ಆದರೆ ಸಾಮಾಜಿಕ ವ್ಯವಸ್ಥೆಯ ವಿಷಯ ಬಂದಾಗ ಬಿಲ್ಲಿನಂತೆ ಸೆಟೆದು ನಿಲ್ಲುತ್ತಿದ್ದರು. ಹಾಗೆ ಹೂಡಿದ ಬಾಣ ಕೊನೆಯಲ್ಲಿ ಹೂವನ್ನು ಚೆಲ್ಲುತ್ತಿತ್ತು. ಹಾಗೆಯೇ ಸ್ವಾಭಿಮಾನ ಎಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದರೆ ಸ್ವಾಭಿಮಾನ ಎನ್ನುವಂತಿರುವ ಸಿದ್ದರಾಮಯ್ಯನವರು ಸಾಮಾಜಿಕ ವಿಷಯದಲ್ಲಿ ಬಾಣದಂತ ಸೆಟೆದು ನಿಲ್ಲುತ್ತಾರೆ ಎಂದರು.

ಚಲನೆ ಇಲ್ಲದೆ ಅಭಿವೃದ್ಧಿಯಾಗಲ್ಲ

ಮೈಸೂರು : ಭಾರತದ ಜಾತಿ ವ್ಯವಸ್ಥೆ ನಿಂತ ನೀರಾಗಿದ್ದು, ಚಲನೆ ಇಲ್ಲದ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕಲಾಮಂದಿರದಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವ, ಮೈಸೂರು ನಗರ, ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಅಸಮಾನ ವ್ಯವಸ್ಥೆ ವಿರುದ್ಧ ಧ್ವನಿ ಎತ್ತುವ ಗುಣವನ್ನು ತಳ ಸಮುದಾಯಗಳು ಮೈಗೂಡಿಸಿಕೊಳ್ಳಬೇಕು. ಭಾರತದ ಜ್ಯಾತಿ ವ್ಯವಸ್ಥೆ ನಿಂತ ನೀರಾಗಿದೆ. ಚಲನೆ ಇಲ್ಲದ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವೇ ಇಲ್ಲ. ಕನಕದಾಸರು ಶೂದ್ರ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ವ್ಯಾಸರಾಯರು ವಿದ್ಯೆ ಹೇಳಿಕೊಡಲು ನಿರಾಕರಿಸಿದ್ದಾಗಿ ಅವರು ತಿಳಿಸಿದರು.

ಕನಕದಾಸರು ಅಂದು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಸಾಮಾಜಿಕ ಅಸಮಾನತೆಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಪುರಂದರದಾಸರಂತಹ ಮೇಲ್ಜಾತಿಯ ಸಂತರಿಂದ ಕನಕದಾಸರು ಸಾಕಷ್ಟುಅವಮಾನ, ಕಷ್ಟಎದುರಿಸಿದರು. ತಮ್ಮ ಜ್ಞಾನದ ಮೂಲಕ ನಳಚರಿತ್ರೆ, ಮೋಹತರಾಂಗಿಣಿ, ರಾಮದಾಸ ಚರಿತಾ ಎಂಬ ಕೃತಿಗಳನ್ನು ರಚಿಸಿದರು. ಬುದ್ಧ, ಬಸವಣ್ಣ, ಅಂಬೇಡ್ಕರ್‌ ಗಾಂಧಿಯಂತಹ ನಾಯಕರು ಇಲ್ಲಿನ ಅಸಮಾತೆಗಳ ವಿರುದ್ಧ ಸೆಟೆದು ನಿಂತಿದ್ದಾಗಿ ಅವರು ಹೇಳಿದರು.

ಸಾಮಾಜಿಕ ಅಸಮಾನ ವ್ಯವಸ್ಥೆಯಲ್ಲಿ ನೋವುಂಡವರಿಂದ ಮಾತ್ರ ಏನಾದರೂ ಬದಲಾವಣೆ ತರಲು ಸಾಧ್ಯ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಿಂದ ನಾನು ಈ ರಾಜ್ಯದ ಮುಖ್ಯಂತ್ರಿಯಾಗಲು ಸಾಧ್ಯವಾಯಿತು. ಪಟ್ಟಭದ್ರ ಹಿತಾಸಕ್ತಿಗಳಿಂದ ಸಂವಿಧಾನ ರಕ್ಷಣೆ ಮಾಡಬೇಕಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರ್‌ಎಸ್‌ಎಸ್‌ನವರು ದೇಶಭಕ್ತರೆಂದು ಹೇಳಿಕೊಳ್ಳುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ದೇಶ ಸುಧಾರಣೆ ಆಗುವುದು ಇಷ್ಟವಿಲ್ಲ ಎಂದು ಅವರು ಟೀಕಿಸಿದರು.

ದೌರ್ಜನ್ಯ, ಅಸಮಾನತೆ ಇರಬೇಕೆಂದು ಅವರು ಬಯಸುತ್ತಾರೆ. ಅದಕ್ಕಾಗಿಯೇ ಅವರು ದೇಶದಕದಲ್ಲಿ ಕೋಮು ಸಾಮರಸ್ಯ ಕದಡುತ್ತಿದ್ದಾರೆ. ಮುಸ್ಲಿಂ ಸಮುದಾಯದವರನ್ನು ಬಿದಿರು ಬೊಂಬೆಯಂತೆ ಮಾಡಿಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಕನಕ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ವಿಶ್ರಾಂತ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ನಗರ ಪಾಲಿಕೆ ಸದಸ್ಯ ಜೆ. ಗೋಪಿ, ಮಾಜಿ ಸದಸ್ಯ ಶಿವಣ್ಣ, ಮಾಜಿ ಮೇಯರ್‌ ಬೈರಪ್ಪ, ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್‌ ಸೇರಿದಂತೆ ಮೊದಲಾದವರು ಇದ್ದರು.

click me!