40ಕ್ಕೂ ಹೆಚ್ಚು ಹೊಲಿಗೆ ಹಾಕಿಸಿಕೊಂಡರೂ ಮನೆಗೆ ತಿಳಿಸದ ಯೋಧ..!

By Web DeskFirst Published Sep 25, 2018, 4:16 PM IST
Highlights

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಸಿಗದಾಳು ಗ್ರಾಮದ ಬಿ.ಎಸ್.ಎಫ್ ಯೋಧ ಆದರ್ಶ್ ಜಮ್ಮು-ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಣರಾಜ್ಯೋತ್ಸವಕ್ಕೆ ವಾರದ ಹಿಂದೆ ಜಮ್ಮುವಿನ ಸಾಂಬಾ ಜಿಲ್ಲೆಯ ಹತ್ತು ಕಿ.ಮೀ. ದೂರದ ರಾಜ್‍ಘಡ್‍ನಲ್ಲಿ ಬೀಡುಬಿಟ್ಟಿದ್ದರು. ಈ ವೇಳೆ ಪಾಕ್ ಉಗ್ರರು ಸೀಮಾ ಗಡಿ ಉಲ್ಲಂಘನೆ ಮಾಡಿ ದಾಳಿ ಮಾಡಿದ್ದರು.

ಚಿಕ್ಕಮಗಳೂರು[ಸೆ.25]: ಭಯೋತ್ಪಾದಕರ ದಾಳಿಯಲ್ಲಿ ಸೊಂಟಕ್ಕೆ ಗಾಯವಾಗಿ, ಎಡಗೈಗೆ 40ಕ್ಕೂ ಹೆಚ್ಚು ಹೊಲಿಗೆ ಹಾಕಿಸಿಕೊಂಡು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ತಿಂಗಳವರೆಗೆ ಮನೆಯವರಿಗೆ ವಿಷಯವನ್ನು ಹೇಳದೆ ಗಟ್ಟಿತನ ಮೆರೆದಿದ್ದಾರೆ ಬಿ.ಎಸ್.ಎಫ್ ಯೋಧ ಆದರ್ಶ್. ಮನೆಯವರು ಗಾಬರಿಯಾಗ್ತಾರೆಂದು ಬೆಡ್ ಮೇಲೆ ಮಲಗಿಕೊಂಡೇ ಚೆನ್ನಾಗಿದ್ದೇನೆ ಎಂದು ಹೇಳುವ ಮೂಲಕ ಮಲೆನಾಡಿನ ವೀರಯೋಧ ತಾಯಿ ಹಾಗೂ ತಾಯ್ನಾಡಿನ ಪ್ರೀತಿ ಮೆರೆದಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಸಿಗದಾಳು ಗ್ರಾಮದ ಬಿ.ಎಸ್.ಎಫ್ ಯೋಧ ಆದರ್ಶ್ ಜಮ್ಮು-ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಣರಾಜ್ಯೋತ್ಸವಕ್ಕೆ ವಾರದ ಹಿಂದೆ ಜಮ್ಮುವಿನ ಸಾಂಬಾ ಜಿಲ್ಲೆಯ ಹತ್ತು ಕಿ.ಮೀ. ದೂರದ ರಾಜ್‍ಘಡ್‍ನಲ್ಲಿ ಬೀಡುಬಿಟ್ಟಿದ್ದರು. ಈ ವೇಳೆ ಪಾಕ್ ಉಗ್ರರು ಸೀಮಾ ಗಡಿ ಉಲ್ಲಂಘನೆ ಮಾಡಿ ದಾಳಿ ಮಾಡಿದ್ದರು. 15 ಭಾರತೀಯ ಯೋಧರ ತಂಡವೂ ಪ್ರತಿದಾಳಿ ಮಾಡಿತ್ತು. ಉಗ್ರರ ಶೆಲ್ ದಾಳಿಯಿಂದ ಆದರ್ಶ್ ಕೈ ಹಾಗೂ ಸೊಂಟಕ್ಕೆ ಗಾಯವಾಗಿತ್ತು. ಉಗ್ರರ ಜೊತೆ ದಾಳಿಗೂ ಮುಂಚೆ ಪತ್ನಿ ಜೊತೆ ಆದರ್ಶ್ ಮಾತನಾಡಿದ್ದರು. ಆ ಬಳಿಕವೂ ಆದರ್ಶ್ ದಾಳಿಯ ವಿಚಾರವನ್ನ ಪತ್ನಿಗೆ ಹೇಳಿರಲಿಲ್ಲ. 

ಇದೀಗ ಮನೆಯಲ್ಲಿ ಚಿಕಿತ್ಸೆ ಹಾಗೂ ವಿಶ್ರಾಂತಿಯಲ್ಲಿರೋ ಯೋಧ ದಾಳಿಯನ್ನ ನೆನೆಯುತ್ತಿದ್ದು ಗಡಿ, ಸೈನಿಕ ವೃತ್ತಿ, ಹೋರಾಟ ಹೇಗಿರುತ್ತೆಂದು ಸುತ್ತಮುತ್ತಲಿನವರಿಗೆ ಹೇಳ್ತಿದ್ದು, ನನಗೂ ತಾಯಿಗಿಂತ ತಾಯ್ನಾಡೆ ಮುಖ್ಯ ಅಂತಿದ್ದಾರೆ. 2000 ಇಸವಿಯಲ್ಲಿ ಸೇನೆಗೆ ಸೇರಿದ್ದ ಆದರ್ಶ್, 2010ರಲ್ಲಿ ಕಮಾಂಡರ್ ಆಗಿ ವಿಶೇಷ ತರಬೇತಿ ಪಡೆದಿದ್ದಾರೆ. ಆ ತರಬೇತಿಯೇ ಉಗ್ರರ ಜೊತೆ ಹೋರಾಡೋದಕ್ಕೆ ಉತ್ತೇಜನ ನೀಡಿತು ಅಂತಾರೆ ಆದರ್ಶ್. ಆದ್ರೆ, ಉಗ್ರರೊಂದಿಗೆ ಸೆಣಸಾಟದಲ್ಲಿ ಸ್ನೇಹಿತ ಹಾಗೂ ಸೈನಿಕ ಕೇರಳದ ಸುರೇಶ್ ಸಾವನ್ನಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸ್ತಾರೆ.

click me!