
ಬೆಂಗಳೂರು (ಮೇ.08) ಬಡತನ, ಕಷ್ಟ, ಸೋಲು, ಗೆಲುವು ಎಲ್ಲವನ್ನು ನೋಡಿ ಬೆಳೆದ ರೈತನ ಮಗನ ಇದೀಗ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾನೆ. ಅಥಣಿ ತಾಲೂಕಿನ ಸವದಿ ಗ್ರಾಮದ ರೈತನ ಮಗ 25ರ ಹರೆಯದ ಬಸವರಾಜ್ ಕೆಂಪವದ್ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ( ಯುಪಿಎಸ್ಸಿ) ನಡೆಸಿದ ಪರೀಕ್ಷೆಯಲ್ಲಿ ಬಸವರಾಜ್ ಸಾಧನೆ ನೋಡಿ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯಾಭ್ಯಾಸ ಮುಗಿಸಿ ನೇರವಾಗಿ ಬೆಂಗಳೂರು ಬಂದ ಬಸವರಾಜ್ ಬಳಿಕ ಸಣ್ಣ ರೂಂ ಬಾಡಿಗೆ ಪಡೆದು ಅಧ್ಯಯನ ಆರಂಭಿಸಿದ್ದ. ಬಹುತೇಕರು ಕೋಚಿಂಗ್ ಸೆಂಟರ್ ಸೇರಿ ಅಧ್ಯಯನ ಆರಂಭಿಸುತ್ತಾರೆ. ಇದು ಬಸವರಾಜ್ಗೆ ಹೊರೆಯಾಗಿತ್ತು. ಹೀಗಾಗಿ ಯಾವುದೇ ಕೋಚಿಂಗ್ ಸೆಂಟರ್ ಸೇರದ ಬಸವರಾಜ್ ಪ್ರತಿ ದಿನ 10 ಗಂಟೆಗೆ ಲೈಬ್ರರಿಗೆ ಹಾಜರಾಗುತ್ತಿದ್ದ. ಲೈಬ್ರರಿ ಬಾಗಿಲು ಮುಚ್ಚುವವರೆಗೆ ಅಲ್ಲೇ ಅಧ್ಯಯನ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಬಸವರಾಜ್ ಕೆಂಪವದ್ ಒಂದು ದಿನ ಲೈಬ್ರರಿ ತಪ್ಪಿಸಿಲ್ಲ. ಒಂದು ದಿನ ಅಧ್ಯಯನ ನಿಲ್ಲಿಸಿಲ್ಲ. ಇದರ ಫಲ ಇದೀಗ ಫಲಿತಾಂಶದಲ್ಲಿ ಸ್ಪಷ್ವವಾಗಿ ಗೋಚರಿಸಿದೆ.
ಬಸವರಾಜ್ ಮೊದಲ ಪ್ರಯತ್ನದಲ್ಲಿ ಐಎಫ್ಎಸ್ ಪರೀಕ್ಷೆಯ ಪ್ರಿಲಿಮಿನರಿ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಆಧರೆ ಛಲ ಬಿಡದ ಬಸವರಾಜ್ ಅಧ್ಯಯನ ತೀವ್ರಗೊಳಿಸಿದ್ದರು. ಪರೀಕ್ಷಾ ಮಾದರಿಯನ್ನು ಅರಿತುಕೊಂಡು ಅದರಂತೆ ಅಧ್ಯಯನ ಆರಂಭಿಸಿದ್ದರು. ಹೀಗಾಗಿ ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಲು ಸಾಧ್ಯವಾಗಿದೆ.
ಕೃಷಿ ಕುಟುಂಬದಿಂದ ಬಂದ ಬಸವರಾಜ್ಗೆ ಪರಿಸರ, ಪ್ರಕೃತಿ ಮೇಲೆ ವಿಶೇಷ ಪ್ರೀತಿ ಹಾಗೂ ಕಾಳಜಿ ಇದೆ. ಹೀಗಾಗಿ ತಾನು ಅರಣ್ಯ ಇಲಾಖೆಯಲ್ಲಿ ಸೇವೆ ಮಾಡಲು ನಿರ್ಧರಿಸಿದ್ದರು. ತನ್ನ ಜ್ಞಾನ, ಹೊಸ ತಂತ್ರಜ್ಞಾನ ಬಳಕೆ ಮೂಲಕ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಬಿಎಸ್ಸಿ ಫಾರೆಸ್ಟ್ರಿ ಪದವಿ ಮುಗಿಸಿರುವ ಬಸವರಾಜ್ಗೆ ಬಳಿಕ ಗ್ರಂಥಾಲಯಗಳೇ ನೆರವಾಗಿದೆ.