ಸಿಎಂ ತನಿಖೆ ಎದುರಿಸ್ತೀನಿ ಅಂತಾರೆ, ಅವರೇ ಕೋರ್ಟ್‌ಗೆ ತಡೆ ಕೋರಿ ಅರ್ಜಿ ಸಲ್ಲಿಸ್ತಾರೆ: ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ

By Santosh NaikFirst Published Sep 27, 2024, 12:08 PM IST
Highlights

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಕೇಸ್‌ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದ್ದು, ಎಫ್‌ಐಆರ್‌ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಈ ಕೇಸ್‌ನಲ್ಲಿ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ನೈತಿಕವಲ್ಲ ಎಂದು ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು (ಸೆ.27): ಸಿಎಂ ಸಿದ್ದರಾಮಯ್ಯ ಪಾಲಿಗೆ ಮುಡಾ ಕೇಸ್‌ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಅವರ ಮೇಲೆ ಎಫ್‌ಐಆರ್‌ ದಾಖಲು ಮಾಡುವ ಸಮಯ ಸನ್ನಿಹಿತವಾಗುತ್ತಿರುವ ನಡುವೆಯೇ ಬಿಜೆಪಿಗರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದೆ. ಇನ್ನು ಎಫ್‌ಐಆರ್‌ ಟೆನ್ಶನ್‌ ನಡುವೆ ಸಿದ್ದರಾಮಯ್ಯ ಇಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಪ್ರಕರಣದ ಕುರಿತಾಗಿ ಮಾತನಾಡಿರುವ ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲೇಬೇಕು ಎಂದು ಹೇಳಿದ್ದಾರೆ.ಮುಡಾ ಕೇಸ್‌ನಲ್ಲಿ ಸಿಎಂ ಮೊದಲಿನಿಂದಲೂ ತಾವು ತನಿಖೆ ಎದುರಿಸಲು ಸಿದ್ದ ಎಂದು ಹೇಳುತ್ತಲೇ ಬಂದಿದ್ದಾರೆ. ಹಾಗಿದ್ದಾಗ ತನಿಖೆಗೆ ತಡೆ ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು ಏಕೆ? ಎಂದೂ ಪ್ರಶ್ನೆ ಮಾಡಿದ್ದಾರೆ.

'ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಏಕೆಂದರೆ, ವಿಚಾರಣೆ ಮಾಡುವ ಪೊಲೀಸರು ಸರ್ಕಾರದ ಅಧೀನದಲ್ಲಿ ಇರುತ್ತಾರೆ. ಇವರು ಸರ್ಕಾರದ ಮುಖ್ಯಸ್ಥರಾಗಿ ಇರುತ್ತಾರೆ. ತಮ್ಮ ಮೇಲಿನ ವಿಚಾರಣೆಯ ವೇಳೆ ಅಂತಾ ದೊಡ್ಡ ಹುದ್ದೆಯಲ್ಲಿ ಇರುವುದು ಸರಿಯಲ್ಲ. ಇದು ಜನರಲ್ಲೂ ಸಂಶಯ ಮೂಡಲು ಕಾರಣವಾಗುತ್ತದೆ. ನೈತಿಕತೆ ಆಧಾರದ ಮೇಲೂ ಸಿದ್ದರಾಮಯ್ಯ ಅವರು ತಮ್ಮ ಮೇಲಿನ ತನಿಖೆಯ ಹಂತದಲ್ಲಿ ದೊಡ್ಡ ಹುದ್ದೆಯಲ್ಲಿ ಇರುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. ಈ ಕೇಸ್‌ಅನ್ನು ವಿಚಾರಣೆ ಮಾಡೋದು ರಾಜ್ಯದ ಪೊಲೀಸ್‌ ಅವರು, ಅದು ಲೋಕಾಯುಕ್ತ ಪೊಲೀಸರೇ ಆಗಿರಲಿ, ರಾಜ್ಯ ಪೊಲೀಸ್‌ ಆಗಿರಲಿ. ಅವರು ಮುಖ್ಯಮಂತ್ರಿಗಳ ಅಡಿಯಲ್ಲಿಯೇ ಇರುವವರು. ಇನ್ನು ಮಾಜಿ ನ್ಯಾಯಮೂರ್ತಿಗಳ ಕಮೀಷನ್‌ನಿಂದ ವಿಚಾರಣೆ ಮಾಡುತ್ತೇವೆ ಎಂದು ಸರ್ಕಾರ ಹೇಳಬಹುದು. ಆದರೆ, ಅದೂ ಕೂಡ ಸರಿಯಲ್ಲ. ಕೋರ್ಟ್‌ನವರೇ ಲೋಕಾಯುಕ್ತ ಪೊಲೀಸ್‌ಗೆ ಆದೇಶ  ನೀಡಿ ತನಿಖೆ ಮಾಡುವಂತೆ ಹೇಳಿದ್ದಾರೆ. ಅದಲ್ಲದೆ, ಕಮೀಷನ್‌ ಆಫ್‌ ಎನ್‌ಕ್ವೈರಿ ಅಡಿಯಲ್ಲಿ ವಿಚಾರಣೆ ನಡೆದರೆ, ಅಲ್ಲಿ ತಪ್ಪು ಆಗಿದೆಯೋ ಇಲ್ಲವೋ ಎಂದು ಹೇಳುತ್ತಾರೆಯಷ್ಟೇ. ಆರೋಪಿ ಯಾರು ಎಂದು ಹೇಳೋದಿಲ್ಲ. ಕೇಸ್‌ ಹಾಕಬೇಕಾದರೆ ಪೊಲೀಸರೇ ಬೇಕಾಗುತ್ತದೆ' ಎಂದು ಹೇಳಿದ್ದಾರೆ.

ನಾನು ತನಿಖೆಯನ್ನು ಎದುರಿಸಲು ಸಿದ್ದ ಎನ್ನುವ ಸಿದ್ದರಾಮಯ್ಯ ಅವರು, ತನಿಖೆಯನ್ನು ಎದುರಿಸಬೇಕು. ಅದರ ಬದಲು ತನಿಖೆಗೆ ತಡೆ ಕೋರಿ ಕೋರ್ಟ್‌ಗೆ ಅರ್ಜಿ ಹಾಕಿದ್ದು ಯಾಕೆ? ನನ್ನ ಮೇಲೆ ಎಫ್‌ಐಆರ್‌ ಹಾಕದೇ ಇರಲಿ ಕೋರ್ಟ್‌ ಮೊರೆ ಹೋಗಿದ್ದರು. ಅದನ್ನೀಗ ಕೋರ್ಟ್‌ ತಿರಸ್ಕರಿಸಿದೆ. ನನ್ನ ಮೇಲಿನ ವಿಚಾರಣೆ ಪೂರ್ಣ ಆಗುವವರೆಗೂ ಸಿಎಂ ಸ್ಥಾನ ವಹಿಸಿಕೊಳ್ಳಲ್ಲ ಎಂದು ಸ್ವತಃ ಅವರೇ ಹೇಳಬೇಕಿತ್ತು ಎಂದಿದ್ದಾರೆ.

ಕುಮಾರಸ್ವಾಮಿ ಅಂತಲ್ಲ,  ಸಿದ್ದರಾಮಯ್ಯ ಅಂತಲ್ಲ. ಯಾರ ಮೇಲೆ ವಿಚಾರಣೆ ಇದ್ದರೂ ಅವರು ದೊಡ್ಡ ಹುದ್ದೆಯಲ್ಲಿ ಇರಬಾರದು ಎನ್ನುವುದು ನನ್ನ ಅಭಿಪ್ರಾಯ. ಇನ್ನು ಕುಮಾರಸ್ವಾಮಿ ಅವರು ನನ್ನ ಮೇಲೆ ಕೇಸ್‌ ಹಾಕಬೇಕಾಗಿರುವುದು ಕರ್ನಾಟಕ ಪೊಲೀಸ್‌. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಡಿಯಲ್ಲಿದೆ. ನಾನು ಅವರ ಮೇಲೆ ನಿಯಂತ್ರಣ ಹೇರಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಬಹುದು. ಆದರೆ, ಸಿದ್ದರಾಮಯ್ಯನವರಿಗೆ ಹಾಗೆ ಹೇಳಲು ಸಾಧ್ಯವಿಲ್ಲ. ಯಾವುದೇ ವಿಚಾರಣೆ ಆದರೂ, ಅದರಲ್ಲಿ ಪ್ರಭಾವಗಳು ಇರಬಾರದು ಎನ್ನುವುದು ನನ್ನ ಮಾತು ಎಂದು ತಿಳಿಸಿದ್ದಾರೆ.

Latest Videos

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಗುತ್ತಾ?

ಗರ್ವನರ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಅದರ ಅಡಿಯಲ್ಲಿ ಪ್ರಾಸಿಕ್ಯೂಷನ್‌ ನಡೆಯಲೇಬೇಕು. ಪ್ರಾಸಿಕ್ಯೂಷನ್‌ ಆದರೆ, ವಿಚಾರಣೆ ನಡೆಯಲೇಬೇಕು. ಆರೋಪ ಪಟ್ಟಿ ದಾಖಲಾಗಿಯೇ ಆಗುತ್ತದೆ. ಈ ಹಂತದಲ್ಲಿ ವಿಚಾರಣೆ ಮಾಡುವ ಸಂಸ್ಥೆ ನಿಮ್ಮ ಅಡಿಯಲ್ಲಿ ಇರಬಾರದು ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ತಪ್ಪು ಎಂದು ಹೈಕೋರ್ಟ್‌ ಮೂರು, ನಾಲ್ಕು ಬಾರಿ ವಿಚಾರವನ್ನು ಗಮನಿಸಿದೆ. ಹೈಕೋರ್ಟ್‌,ಜನಪ್ರತಿನಿಧಿಗಳ ನ್ಯಾಯಾಲಯದ ಜಡ್ಜ್‌ ಕೂಡ ಇದನ್ನೇ ಹೇಳಿದ್ದಾರೆ ಎಂದರು.

ತೀರ್ಪನ್ನು ಒಪ್ಪಲ್ಲ ಎಂದ್ರೆ ಕೋರ್ಟನ್ನೇ ಮುಚ್ಚಿ ಬಿಡಿ: ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿ

ಕಾನೂನಲ್ಲಿ ರಾಜೀನಾಮೆ ಕೊಡಬೇಕು ಅಂತೇನೂ ಇಲ್ಲ. ಆದರೆ, ಕೆಲವು ಹುದ್ದೆಗಳಿಗೆ ನೈತಿಕತೆ ಅನ್ನೋದು ಇರುತ್ತದೆ. ಇದು ಸಾರ್ವಜನಿಕರ ಹಿತಾಸಕ್ತಿಯಿಂದ ಸರಿಯಲ್ಲ. ಈ ಪ್ರಕರಣದ ತೀರ್ಪು ಕೊಡುವುದು ಕೋರ್ಟ್‌, ವ್ಯಕ್ತಿಯ ಮೇಲಿನ ಆರೋಪ ಸತ್ಯವೋ, ಸುಳ್ಳೋ ಎನ್ನುವುದನ್ನು ತಿಳಿಸುವ ಏಕೈಕ ಅಧಿಕಾರ ಇರುವುದು ಕೋರ್ಟ್‌ಗೆ ಮಾತ್ರ. ಕೋರ್ಟ್‌ನಲ್ಲಿ ಈಗ ಮೇಲ್ನೊಟಕ್ಕೆ ಆರೋಪ ಸತ್ಯ ಎಂದು ಹೇಳಿರುವ ಕಾರಣ, ಅವರು ಈಗ ಆರೋಪಿ ಎಂದು ಹೇಳಿದ್ದಾರೆ.

click me!