'ಯತ್ನಾಳ ಗೂಂಡಾಗಿರಿ ಮಾಡಿದ್ರೆ ಅದೇ ಭಾಷೆಯಲ್ಲೇ ಉತ್ತರ ಕೊಡ್ತೇವೆ'

By Suvarna NewsFirst Published Jan 16, 2020, 10:59 AM IST
Highlights

ಜನರು ಚೆನ್ನಾಗಿ ಕೆಲಸ ಮಾಡೋಕೆ ಅಂತ ಅಧಿಕಾರ ಕೊಟ್ಟಿದ್ದಾರೆ|  ಯಾರ್ಯಾರಿಗೋ ಹಗುರುವಾಗಿ ಮಾತನಾಡೋಕೆ ಅಲ್ಲ| ಯತ್ನಾಳ ಬೇಕಾಬಿಟ್ಟಿಯಾಗಿ ಮಾತನಾಡುವ ಚಾಳಿಯನ್ನ ಬಿಡಬೇಕು| ಅಧಿಕಾರ ಇಲ್ಲದಾಗ ನಿರಾಣಿ ಮನೆಗೆ ಶಿರಸಾಷ್ಟಾಂಗ ಹಾಕಿ, ನಿರಾಣಿ ಅವರ ಮನೆ ನಾಯಿ ಬೆಕ್ಕಿಗೂ ಕಾಲು ಹಿಡಿದಿದ್ದನ್ನು ನೆನಪಿಸಿಕೊಳ್ಳಬೇಕು|

ಬಾಗಲಕೋಟೆ(ಜ.16): ರಾಜಕೀಯವಾಗಿ, ಔದ್ಯೋಗಿಕವಾಗಿ ಸ್ವಚ್ಚಾರಿತ್ರ್ಯ ಹೊಂದಿದ್ದರೆ ನಾವು ಯಾವುದೇ ಚರ್ಚೆಗೂ ಸಿದ್ಧರಿದ್ದೇವೆ. ಅವನೇನಾದ್ರೂ ಗೂಂಡಾಗಿರಿ ಭಾಷೆಯಲ್ಲಿ ಮಾತನಾಡಿದರೆ ನಾವು ಕೂಡ ಗೂಂಡಾಗಿರಿ ಭಾಷೆಯಲ್ಲೇ ಉತ್ತರ ಕೊಡೋಕೆ ಸಿದ್ದರಿದ್ದೇವೆ ಎಂದು ಹೇಳುವ ಮೂಲಕ ಉದ್ಯಮಿ ಸಂಗಮೇಶ ನಿರಾಣಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ತಿರುಗೇಟು ನೀಡಿದ್ದಾರೆ. 

ಗುರುವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಚೆನ್ನಾಗಿ ಕೆಲಸ ಮಾಡೋಕೆ ಅಂತ ಅಧಿಕಾರ ಕೊಟ್ಟಿದ್ದಾರೆ. ಯಾರ್ಯಾರಿಗೋ ಹಗುರುವಾಗಿ ಮಾತನಾಡೋಕೆ ಅಲ್ಲ. ಯತ್ನಾಳ ಬೇಕಾಬಿಟ್ಟಿಯಾಗಿ ಮಾತನಾಡುವ ಚಾಳಿಯನ್ನ ಬಿಡಬೇಕು. ಅಧಿಕಾರ ಇಲ್ಲದಾಗ ನಿರಾಣಿ ಮನೆಗೆ ಶಿರಸಾಷ್ಟಾಂಗ ಹಾಕಿ, ನಿರಾಣಿ ಅವರ ಮನೆ ನಾಯಿ ಬೆಕ್ಕಿಗೂ ಕಾಲು ಹಿಡಿದಿದ್ದನ್ನು ನೆನಪಿಸಿಕೊಳ್ಳಬೇಕು. ಅಧಿಕಾರ ಇಲ್ಲದಾಗ ಸಂಗಮೇಶ ನಿರಾಣಿ ಅಧಿಕಾರ ಕೊಡಿಸಿಕೊಟ್ಟಿದ್ದಾರೆ ಅಂತ ಹೇಳಿದ್ದು ಇದೇ ಯತ್ನಾಳ ಅವರೇ ಎಂದು ಹೇಳಿದ್ದಾರೆ. 

ವಚನಾನಂದ ಸ್ವಾಮೀಜಿ ಬೆದರಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಹಿಂದೆ ಯಡಿಯೂರಪ್ಪ, ಕರಂದ್ಲಾಜೆ ವಿರುದ್ಧ ಏಕವಚನದಲ್ಲೇ ಮಾತನಾಡಿ, ದೇವೇಗೌಡರಿಗೆ ಜೀ ಹುಜೂರ್ ಎಂದವರು. ಶೆಟ್ಟರ್ ಮತ್ತು ಜೋಷಿ ಅವರಿಗೆ ಶೆಟ್ರು ಭಟ್ರು ಎಂದವರು, ವಿಜಯ್ ಸಂಕೇಶ್ವರರಿಗೆ ಅಧಿಕಾರ ಬಿಡುವಂತೆ ಮಾತನಾಡಿದ್ದರು. ಮೋದಿ, ಅಮಿತ್ ಶಾನಂತವರಿಗೂ ಮಾತನಾಡಿ ಹರಕು ಚಾಳಿಯನ್ನ ಯತ್ನಾಳ ತೋರಿಸಿದ್ದಾರೆ. ಇವರಿಗೆ ರಾಜಕೀಯದಲ್ಲಿರಲು ನೈತಿಕತೆ ಇಲ್ಲ. ಬಿಜೆಪಿಯವರ ಕಾಲಿಗೆ ಬಿದ್ದು ಪಕ್ಷ ಸೇರಿದ್ದಾರೆ ಎಂದು ಹೇಳಿದ್ದಾರೆ. 
ಕಾಖಾ೯ನೆಯೊಂದನ್ನ ಬಂದ್ ಮಾಡಿ ಬಂದವರು, ಇವರಿಗೆ ಮಾತನಾಡಲು ಯೋಗ್ಯತೆ ಇಲ್ಲ. ಬೆಳಗಾವಿ ವಿಭಾಗದಲ್ಲಿ ನಿರಾಣಿ ಸಮೂಹ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ. ನಿರಾಣಿ ಸಂಸ್ಥೆ ಬಗ್ಗೆ ಹೀಗೆ ಬೇಕಾಬಿಟ್ಟಿ ಮಾತನಾಡಿದರೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ತಿಳಿಸಿದ್ದಾರೆ. 

ಯತ್ನಾಳ ಅವರನ್ನ ಮನೆಯಲ್ಲಿದ್ದಾಗ ಅವರನ್ನ ಬೆಳೆಸುವಲ್ಲಿ ನನಗೆ ಯಾವ ಸಹೋದರರು ಬಂದಿಲ್ಲ. ಒಬ್ಬ ನೇತಾರ ಇದ್ದಾನಾ, ನಾಡು ಕಟ್ಟುತಾನ ಅಂತ ಹೇಳಿ ಪರಸ್ಪರ ಸಹಾಯ ಮಾಡಿದ್ದೇನೆ. ಆದ್ರೆ ಅವರ ದುಷ್ಟ ಬುದ್ದಿಯಿಂದ ಯಾರ ಅವರನ್ನ ಬೆಳೆಸಿದ್ರೋ ಅವರಿಗೆ ಮೋಸ ಮಾಡಿದ್ದಾರೆ. ನಿರಾಣಿಯವರು ಇವರಿಗಿಂತ ಮುಂಚೆಯೇ ರಾಜಕೀಯಕ್ಕೆ ಬಂದವರಾಗಿದ್ದಾರೆ. ರಾಜಕೀಯದಲ್ಲಿ ನಿರಾಣಿಯವರಿಗೆ, ಯತ್ನಾಳ ಅವರಿಗೆ ಯಾವುದೇ ಸಂಭಂದ ಇಲ್ಲ. ನಿರಾಣಿಯವರು ಯತ್ನಾಳ ಅವರಿಗೆ ರಾಜಕೀಯ ಪುನಜ೯ನ್ಮ ನೀಡಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಹೇಳಿದ್ದಾರೆ. 

ನಾನು ಯಾವ ರಾಜಕೀಯ ಬಗ್ಗೆಯೂ ಮಾತನಾಡುವುದಿಲ್ಲ, ನಿರಾಣಿ ಸಂಸ್ಥೆಯ ವಿರುದ್ಧ ಮಾತನಾಡಿದ ಲಫಂಗ ಯತ್ನಾಳ ಹೇಳಿಕೆ ಹಿನ್ನೆಲೆ ಸ್ಟೇಟಮೆಂಟ್ ಕೊಡಲು ಮಾಧ್ಯಮ ಎದುರು ಬಂದಿದ್ದೇನೆ. ಯತ್ನಾಳ ಯಾವುದೇ ವಿಷಯ ಇಟ್ಟುಕೊಂಡು ಬಂದರೂ ನಾನು ಚರ್ಚೆಗೆ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. 

ನಿರಾಣಿ ಮಠಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಮುರುಗೇಶ ನಿರಾಣಿ ರಾಜ್ಯದಲ್ಲಿ ಎಲ್ಲ ಸಮುದಾಯಕ್ಕೂ  ಪ್ರಶ್ನಾತೀತ ನಾಯಕರಾಗಿದ್ದಾರೆ. ಓರ್ವ ಶಾಸಕರಾಗಿ, ಸಚಿವರಾಗಿ ನಾಡು ಕಟ್ಟುವ ಕೆಲಸ ಮಾಡಿದ್ದಾರೆ. ಅಧಿಕಾರ ಇಲ್ಲದೆ ಇರುವಾಗಲೂ ಜನರ ಸೇವೆ ಮಾಡಿದ್ದಾರೆ. ನಮ್ಮಂತಹ ಸಾವಿರಾರು ಯುವಕರಿಗೆ ಒಳ್ಳೆಯ ದಾರಿ ತೋರಿಸಿ ಮುನ್ನಡೆಸಿದ್ದಾರೆ ಎಂದು ಹೇಳಿದ್ದಾರೆ. 
 

click me!