ರಸ್ತೆ ವಿಸ್ತರಣೆಗೆ ಸಾಲು ಮರದ ತಿಮ್ಮಕ್ಕನ ಮರಗಳ ಬಲಿ?

By Web DeskFirst Published Jun 3, 2019, 8:08 AM IST
Highlights

ರಸ್ತೆಗಳ ವಿಸ್ತರಣೆ ಕಾರ್ಯ ಸಾಲುಮರದ ತಿಮ್ಮಕ್ಕ ಅವರು ಮಕ್ಕಳಂತೆ ಬೆಳೆಸಿದ ಮರಗಳಿಗೆ ಕಂಟಕ  ಎದುರಾಗಿದೆ. 

ಕುದೂರು : ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರು ಮಕ್ಕಳಂತೆ ಸಾಕಿ ಬೆಳೆಸಿದ 287 ಆಲದ ಮರಗಳು ಇದೀಗ ರಾಜ್ಯ ಹೆದ್ದಾರಿ 94 ರಸ್ತೆ ಅಗಲೀಕರಣ ನೆಪದಲ್ಲಿ ಧರೆಗುರುಳುವ ಸಾಧ್ಯತೆಗಳಿವೆ.

ಬಾಗೇಪಲ್ಲಿ - ಹಲಗೂರು ರಾಜ್ಯ ಹೆದ್ದಾರಿಗಾಗಿ ರಸ್ತೆ ಅಗಲೀಕರಣ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಈ ವೇಳೆ ರಾಮನಗರ ಜಿಲ್ಲೆಯಲ್ಲಿ ತಿಮ್ಮಕ್ಕ ಅವರು ಬೆಳೆಸಿರುವ ಮರಗಳು ನಿರ್ನಾಮವಾಗಲಿದೆ ಎನ್ನಲಾಗಿದೆ. 

ಕುದೂರು ಗ್ರಾಮದಿಂದ ಹುಲಿಕಲ್ ಗ್ರಾಮದ ವರೆವಿಗಿನ ನಾಲ್ಕು ಕಿ.ಮೀ. ದೂರದವರೆವಿಗೂ ರಸ್ತೆಯ ಇಕ್ಕೆಲಗಳಲ್ಲಿ ತಿಮ್ಮಕ್ಕ ಅವರು ಬೆಳೆಸಿರುವ ಆಲದ ಮರಗಳು ಬಿಸಿಲು ಕೆಳಗೆ ಬೀಳದಂತೆ ಒಂದ ನ್ನೊಂದು ಬೆಸೆದುಕೊಂಡಿವೆ. ಇಲ್ಲಿನ ಒಂದೊಂದು ಮರವೂ ತಿಮ್ಮಕ್ಕನ ಸೇವೆಯನ್ನು ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದೆ. 

ಒಂದು ವೇಳೆ ಈ ರಸ್ತೆಯನ್ನು ಅಗಲೀಕರಣಗೊಳಿಸಲು ಹೊರಟರೆ ಈಗಿರುವ ಸಣ್ಣ ಕುರುಹು ಇಲ್ಲದಂತೆ ಮರಗಳು ಬೇರು ಸಹಿತ ನೆಲ ಕ್ಕುರುಳಲಿವೆ. ಈ ಮರಗಳೊಂದಿಗೆ ಈ ಹಾದಿಯಲ್ಲಿರುವ ತಿಮ್ಮಕ್ಕನ ಮನೆಯೂ ನೆಲಸಮವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿ ಸಿರುವ ಸಾಲು ಮರದ ತಿಮ್ಮಕ್ಕ, ನಾನು ಯಾವುದೇ ಕಾರಣಕ್ಕೂ ಸಾಲುಮರಗಳ ಒಂದೇ ಒಂದು ರೆಂಬೆಯನ್ನೂ ಕಡಿಯಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮಾತಿಗೂ ಬೆಲೆ ಕೊಡದೇ ಹೋದರೆ ನಾನು ಮರದ ಕೆಳಗೆ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಹೃದಯ ಭಾಗವೇ ಕಣ್ಮರೆ : ರಾಜ್ಯ ಹೆದ್ದಾರಿ ಕಾಯ್ದೆ 1964 ಅಧ್ಯಾಯ- 3 ಕ್ಲಾಸ್ 7(1) ರ ಅಡಿಯಲ್ಲಿ ಹೆದ್ದಾರಿ ರಸ್ತೆ ಗಡಿಗಳನ್ನು ಗುರುತಿಸುವ ಬಗ್ಗೆ ಲೋಕೋಪ ಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ರಾಮನಗರ ವಿಭಾಗದಿಂದ ಜೂ.೧ರಂದು ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿದಂತೆ ರಾಮನಗರ ತಾಲೂಕು ಮತ್ತು ಮಾಗಡಿ ತಾಲೂಕಿನ ಗ್ರಾಮಗಳ ಸರ್ವೇ ನಂಬರ್‌ಗಳ ಬಗ್ಗೆ ಜಾಹೀರಾತು ಪ್ರಕಟವಾಗಿದೆ. ಇದರ ಅನ್ವಯ ರಸ್ತೆಯ ಮಧ್ಯ ಭಾಗದಿಂದ ೪೦ ಮೀ.ವರೆಗೆ ಇರುವ ಜಮೀನು ರಸ್ತೆ ವಿಸ್ತರಣೆಗೆ ಬಳಕೆಯಾಗುತ್ತದೆ. 

ಲೋಕೋಪಯೋಗಿ ಇಲಾಖೆ ಯವರು ಪ್ರಕಟಿಸಿರುವ ಪ್ರಕಟಣೆಯ ಸರ್ವೆ ನಂಬರ್ಗಳು ಕುದೂರು ಗ್ರಾಮದ ಮುಖ್ಯರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಸರ್ವೆ ನಂಬರ್‌ಗಳಾಗಿವೆ. ಇದರಂತೆ ರಸ್ತೆ ವಿಸ್ತರಣೆ ಆಗಿದ್ದೇ ಆದರೆ, ಕುದೂರು ಗ್ರಾಮದ ಸ್ವರೂಪವೇ ಮಾಯವಾಗುತ್ತದೆ.
ಗ್ರಾಮದ ಪ್ರಮುಖ ವ್ಯಾಪಾರ ಮಳಿಗೆಗಳು ಇದೇ ರಸ್ತೆಯಲ್ಲಿದೆ. ಇದರಿಂದ ಗ್ರಾಮದ ವ್ಯಾಪಾರಸ್ಥರೂ ಆತಂಕಕ್ಕೆ ಒಳಗಾಗಿ ದ್ದಾರೆ. ರಸ್ತೆ ಅಗಲೀಕರಣ ಮಾಡುವುದಿದ್ದರೆ, ಕುದೂರು ಗ್ರಾಮದ ಹೊರವಲಯದಲ್ಲಿ ನಿರ್ಮಾಣ ವಾಗಿರುವ ಬೈಪಾಸ್ ರಸ್ತೆಯ ಮೂಲಕ ಮಾಡಲಿ ಎಂದು
ಒತ್ತಾಯಿಸಿದ್ದಾರೆ.


ಮರದ ಕೆಳಗೇ ಧರಣಿ ಕೂರ್ತೀನಿ

ಒಂದು ಮರ ಬೆಳೆಸೋಕೆ ನನ್ನ ಇಡೀ ಜನ್ಮಾನೇ ಸವೆಸಿದ್ದೀನಿ. ಅದನ್ನು ಕಡಿಯೋಕೆ ಮಾತ್ರ ಜನಾ ಯಾವಾಗಲೂ ಕೈಲಿ ಕೊಡಲಿ ಇಟ್ಕೊಂಡು
ನಿಂತ್ಕೊಂಡಿರ್ತಾರೆ. ರಸ್ತೆ ಆಗಬೇಕಾದರೆ ಮರಗಳ ಸಾಲನ್ನು ಬಿಟ್ಟು ಪಕ್ಕದ ಜಮೀನಿನಲ್ಲಿ ಮಾಡಿಕೊಳ್ಳಲಿ. ಆದರೆ ನಾನು ಯಾವುದೇ ಕಾರಣಕ್ಕೂ ಸಾಲುಮರಗಳ ಒಂದೇ ಒಂದು ರೆಂಬೆಯನ್ನು ಕಡಿಯಲು ಬಿಡುವುದಿಲ್ಲ. ಈ ಮಾತಿಗೂ ಮರ್ಯಾದೆ ಕೊಡದೇ ಹೋದರೆ ನಾನು ಮರದ ಕೆಳಗೆ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ.

ಸಾಲುಮರದ ತಿಮ್ಮಕ್ಕ ಪದ್ಮಶ್ರೀ ಪುರಸ್ಕೃತೆ

ನೋಟಿಫಿಕೇಶನ್ ಆಗಿಲ್ಲ, ತಕರಾರು ಸಲ್ಲಿಸಬಹುದು 

ಬಾಗೇಪಲ್ಲಿ - ಹಲಗೂರು ರಾಜ್ಯ ಹೆದ್ದಾರಿಗಾಗಿ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಹೆದ್ದಾರಿಗೆ ಅಗತ್ಯವಿರುವ ಭೂಮಿಯ ಮಾಹಿತಿಯನ್ನು ಸಾರ್ವಜನಿಕರ ತಿಳಿವಳಿಕೆಗಾಗಿ ಪ್ರಕಟಣೆಯನ್ನು ಮಾಡಲಾಗಿದೆ. ಅದು ಇನ್ನೂ ನೋಟಿಫಿಕೇಷನ್ ಆಗಿಲ್ಲ. ಸರ್ವೆ ಮಾಡಿರುವ ಭೂಮಿಯಲ್ಲಿ ಸಾಲು ಮರದ ತಿಮ್ಮಕ್ಕ ಅವರಿಗೆ ಸೇರಿದ ಮನೆ ಮತ್ತು ಅವರು ಬೆಳೆಸಿರುವ ಮರಗಳೂ ಸೇರಿವೆ. ಹೆದ್ದಾರಿಗೆ ಅವಶ್ಯವಾಗಿರುವ ಭೂಮಿಯ ಬಗ್ಗೆ
ಏನಾದರು ತಕರಾರು ಇದ್ದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.

ಕುಮಾರ್ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ರಾಮನಗರ.

ವರದಿ : ಗಂ ದಯಾನಂದ ಕುದೂರು

click me!