Covid19: ಬೆಂಗ್ಳೂರಲ್ಲಿ ಮತ್ತೆ ಏರುತ್ತಿದೆ ಕೊರೋನಾ ಸೋಂಕು

By Kannadaprabha NewsFirst Published Nov 26, 2021, 6:16 AM IST
Highlights

*  94 ಪುರುಷರು, 77 ಮಹಿಳೆಯರು ಸೇರಿದಂತೆ 171 ಜನರಲ್ಲಿ ಸೋಂಕು ದೃಢ
*  ಈವರೆಗಿನ ಸೋಂಕಿತರ ಸಂಖ್ಯೆ 12,55,611ಕ್ಕೆ ಏರಿಕೆ
*  ಹೊಸ ವೈರಸ್‌ ಬಗ್ಗೆ ಎಚ್ಚರ ವಹಿಸಿ: ರಾಜ್ಯಗಳಿಗೆ ಸೂಚನೆ

ಬೆಂಗಳೂರು(ನ.26):  ನಗರದಲ್ಲಿ ಕೋವಿಡ್‌(Covid19) ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಗುರುವಾರ 94 ಪುರುಷರು, 77 ಮಹಿಳೆಯರು ಸೇರಿದಂತೆ 171 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ.

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,55,611ಕ್ಕೆ ಏರಿಕೆಯಾಗಿದೆ. 81 ಪುರುಷರು, 66 ಮಹಿಳೆಯರು ಸೇರಿದಂತೆ 147 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,34,143ಕ್ಕೆ ಏರಿಕೆಯಾಗಿದೆ. ಈ ವರೆಗೆ ಒಟ್ಟು 16,327 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಸದ್ಯ 5141 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

Corona In Karnataka: ಒಂದೇ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ, ಜನರಲ್ಲಿ ಮತ್ತೆ ಆತಂಕ!

ಕಳೆದ ಹತ್ತು ದಿನಗಳಿಂದ ಬೆಳ್ಳಂದೂರು ವಾರ್ಡ್‌ನಲ್ಲಿ 5, ಬೇಗೂರು ವಾರ್ಡ್‌ನಲ್ಲಿ 4, ಹೊರಮಾವು, ದೊಡ್ಡ ನೆಕ್ಕುಂದಿ, ಹಗದೂರು, ಗರುಡಾಚಾರ್‌ಪಾಳ್ಯ, ಉತ್ತರಹಳ್ಳಿ, ವಿಜ್ಞಾನ ನಗರ, ಹೂಡಿ ವಾರ್ಡ್‌ಗಳಲ್ಲಿ ತಲಾ 3, ಕೋರಮಂಗಲ ವಾರ್ಡ್‌ನಲ್ಲಿ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬನಶಂಕರಿ ದೇವಸ್ಥಾನ, ಹೊಸಕೆರೆಹಳ್ಳಿ, ದೀಪಾಂಜಲಿ ನಗರ, ಆಡುಗೋಡಿ, ಆಜಾದ್‌ನಗರ, ಕೆ.ಆರ್‌.ಮಾರುಕಟ್ಟೆ, ಚಲವಾದಿಪಾಳ್ಯ, ರಾಯಪುರ, ಜಗಜೀವನರಾಂ ನಗರ, ಹಮ್ಮಿಗೆ ನಗರ ವಾರ್ಡ್‌ಗಳಲ್ಲಿ ಕಳೆದ ಹತ್ತು ದಿನಗಳಿಂದ ಸೋಂಕು ಪತ್ತೆಯಾಗಿಲ್ಲ ಎಂದು ಬಿಬಿಎಂಪಿ(BBMP) ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

68 ಮೈಕ್ರೋ ಕಂಟೈನ್ಮೆಂಟ್‌

ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ 68 ಮೈಕ್ರೋ ಕಂಟೈನ್ಮೆಂಟ್‌ಗಳನ್ನು(Micro Containment) ಗುರುತಿಸಲಾಗಿದೆ. ಈ ಪೈಕಿ ಬೊಮ್ಮನಹಳ್ಳಿ 19, ದಕ್ಷಿಣ ವಲಯ 16, ಪೂರ್ವ 11, ಯಲಹಂಕ 10, ಮಹದೇವಪುರ 9, ಪಶ್ಚಿಮ 3 ಮೈಕ್ರೋ ಕಂಟೈನ್ಮೆಂಟ್‌ಗಳಿದ್ದು ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯ ಮೈಕ್ರೋ ಕಂಟೈನ್ಮೆಂಟ್‌ ಮುಕ್ತವಾಗಿವೆ.

Covid19: ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ: ಮನೆ ಬಾಗಿಲಿಗೇ ಬರಲಿದೆ 2ನೇ ಡೋಸ್‌

ಉಡುಪಿ: ಮತ್ತೆ ಎರಡಂಕಿಗೇರಿದ ಕೊರೋನಾ

ಉಡುಪಿ(Udupi): ಕಳೆದೊಂದು ತಿಂಗಳಿಂದ ಒಂದಂಕಿಯಲ್ಲಿದ್ದ ಕೊರೋನಾ ಗುರುವಾರ ಎರಡಂಕಿಗೇರಿದೆ. ಈ ದಿನ ಜಿಲ್ಲೆಯಲ್ಲಿ 1716 ಮಂದಿಗೆ ಕೊರೋನಾ(Coronavirus) ಪರೀಕ್ಷೆ ಮಾಡಲಾಗಿದ್ದು, 13 (ಶೇ 0.75) ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 12,60,986 ಮಂದಿಯಲ್ಲಿ 76,853 ಮಂದಿಗೆ ಸೋಂಕು ಪತ್ತೆಯಾಗಿದೆ. ಅವರಲ್ಲಿ 76,320 ಮಂದಿ ಗುಣಮುಖರಾಗಿದ್ದಾರೆ. ಈ ದಿನ 7 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 57 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 476 (ಶೇ 0.61) ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಅಲ್ಲದೇ ಇದುವರೆಗೆ 53 ಸೋಂಕಿತರಲ್ಲಿ ಫಂಗಸ್‌ ಪತ್ತೆಯಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ(Death).

ಹೊಸ ವೈರಸ್‌ ಬಗ್ಗೆ ಎಚ್ಚರ ವಹಿಸಿ: ರಾಜ್ಯಗಳಿಗೆ ಸೂಚನೆ

ನವದೆಹಲಿ: ಬೋಟ್ಸ್‌ವಾನಾ(Botswana)ಸೋಂಕು ಅಪಾಯಕಾರಿ ಎಂಬ ವರದಿಗಳ ಬೆನ್ನಲ್ಲೇ, ಈ ಬಗ್ಗೆ ಎಚ್ಚರ ವಹಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ(State Governments) ಕೇಂದ್ರ ಸರ್ಕಾರ(Central Government) ಸಂದೇಶ ರವಾನಿಸಿದೆ. ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ, ಹೊಸ ರೂಪಾಂತರಿ ತಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ, ಸಿಂಗಾಪುರ ಮತ್ತು ಬೋಟ್ಸ್‌ವಾನಾ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಅವರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದೆ.

click me!