
ರಾಯಚೂರು : ಮಧ್ಯ ಪ್ರಾಚ್ಯದಲ್ಲಿ ಯುದ್ಧದ ರಾಯಚೂರು ಜಿಲ್ಲೆಯ ಅಕ್ಕಿ ಗಿರಣಿ, ಹತ್ತಿ ಮಿಲ್ಗಳಿಗೂ ತಾಕುತ್ತಿದೆ. ಈ ಭಾಗದಲ್ಲಿ ಬೆಳೆಯುವ ಅದರಲ್ಲಿಯೂ ಸೋನಾ ಮಸೂರಿ, ಬಾಸುಮತಿ, ಆರ್ಎನ್ಆರ್ ಸೇರಿದಂತೆ ಹಲವು ರೀತಿಯ ತಳಿಗಳ ಅಕ್ಕಿಗೆ ಭಾರತದ ವಿವಿಧ ರಾಜ್ಯ ಸೇರಿದಂತೆ ಪ್ರಪಂಚದಾದ್ಯಂತ ಭಾರಿ ಬೇಡಿಕೆಯಿದೆ. ಕೊಲ್ಲಿ ರಾಷ್ಟ್ರಗಳಿಗೂ ಅಕ್ಕಿ ರಫ್ತು ಮಾಡಿ ಕೋಟ್ಯಂತರ ರು. ವ್ಯವಹಾರ ಮಾಡಲಾಗುತ್ತಿತ್ತು. ಇದೀಗ ಕೊಲ್ಲಿ ಯುದ್ಧದಿಂದಾಗಿ ಮಧ್ಯ ಪ್ರಾಚ್ಯ ದೇಶಗಳಲ್ಲಿ ರಫ್ತು ಆಗುವ ಅಕ್ಕಿ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಅಕ್ಕಿ ಗಿರಣಿ ಮಾಲೀಕರು ಕಂಗಾಲುಗೊಂಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 2 ಸಾವಿರಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿವೆ. ಅದರಲ್ಲಿ ಭತ್ತದ ನಾಡು ಖ್ಯಾತಿಯ ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ 100 ಸೇರಿದಂತೆ ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿವೆ. ರಫ್ತು ಕಾರ್ಯವು ಸಂಪೂರ್ಣವಾಗಿ ನಿಂತು ಹೋಗಿದ್ದರಿಂದ ಅಕ್ಕಿ ಗಿರಣಿ ಮಾಲೀಕರು ಆರ್ಥಿಕ ಸಂಕಷ್ಟವನ್ನು ಎದುರಿಸುವಂತೆ ಮಾಡಿದೆ. ಅಕ್ಕಿಗಳಿಗೆ ಬ್ರಾಂಡ್ ಹೆಸರನ್ನು ಹಾಕದೇ ಬಿಳಿ ಚೀಲಗಳಲ್ಲಿ ತುಂಬಿಡಲಾಗುತ್ತಿದೆ.
ರಾಯಚೂರಿನ ಹತ್ತಿಗೆ ಇಡೀ ವಿಶ್ವದಲ್ಲಿ ಬೇಡಿಕೆಯಿದೆ. ಇಲ್ಲಿ ಬೆಳೆದಂತಹ ಹತ್ತಿಯನ್ನು ಆಸ್ಟೇಲಿಯಾ, ಅಮೆರಿಕ, ಬಾಂಗ್ಲಾ, ಚೈನಾ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಹತ್ತಿ ರಫ್ತಿನಲ್ಲಿಯೂ ಸಹ ಸಾಕಷ್ಟು ವ್ಯತ್ಯಯ ಸೃಷ್ಠಿಯಾಗಿದೆ. ಬಟ್ಟೆ ತಯಾರಿಕೆಗೆ ಬೇಕಾದ ಸಿಂಥೆಟಿಕ್ ಮೆಟಿರಿಯಲ್ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಆಮದು ರಫ್ತು ಎರಡರ ಮೇಲೂ ಯುದ್ಧ ಪರಿಣಾಮ ಬೀರಿದೆ. ಹತ್ತಿ ರಫ್ತಿನಲ್ಲಿ ವ್ಯತ್ಯಯವಾಗಿದ್ದರಿಂದ ಹತ್ತಿ ಮಿಲ್ ಮಾಲೀಕರು ಸಹ ಹಲವಾರು ಸಮಸ್ಯೆಗಳಿಗೆ ತುತ್ತಾಗಿದ್ದಾರೆ.