Chikkamagaluru Rains; ಮಳೆ ಆರ್ಭಟಕ್ಕೆ ಮಲೆನಾಡು ತತ್ತರ, ಹಲವು ವರ್ಷಗಳ ನಂತರ ದಾಖಲೆಯ ಮಳೆ

By Gowthami KFirst Published Sep 5, 2022, 8:25 PM IST
Highlights

ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯ ಮಳೆ ಕಳೆದ ರಾತ್ರಿ ಸುರಿದಿದೆ. ಚಿಕ್ಕಮಗಳೂರು ತಾಲ್ಲೂಕಿನ ಸಾರಗೋಡು ಹಾಗೂ ಕಳಸಾಪುರ ಗ್ರಾಮಗಳಲ್ಲಿ ಕಳೆದ ರಾತ್ರಿ ಏಕಾಏಕಿ ಸುರಿದ ಭಾರೀ ಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಸೆ.5): ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯ ಮಳೆ ಕಳೆದ ರಾತ್ರಿ ಸುರಿದಿದೆ. ಚಿಕ್ಕಮಗಳೂರು ತಾಲ್ಲೂಕಿನ ಸಾರಗೋಡು ಹಾಗೂ ಕಳಸಾಪುರ ಗ್ರಾಮಗಳಲ್ಲಿ ಕಳೆದ ರಾತ್ರಿ ಏಕಾಏಕಿ ಸುರಿದ ಭಾರೀ ಮಳೆಗೆ ಜನತೆ ತತ್ತರಿಸಿದ್ದು, ಹಲವು ವರ್ಷಗಳ ನಂತರದ ದಾಖಲೆ ಮಳೆ ಇದು ಎನ್ನಲಾಗಿದೆ. ಸಾರಗೋಡು ಗ್ರಾಮದಲ್ಲಿ ಕಳೆದ ರಾತ್ರಿ ಕೇವಲ ಒಂದು ಗಂಟೆ ಅವಧಿಯಲ್ಲಿ ಸುಮಾರು 200 ಮಿ.ಮೀ.ನಷ್ಟು ಭಾರೀ ಮಳೆಯಾಗಿದ್ದು, ಇದು ಇತಿಹಾಸದಲ್ಲೇ ದಾಖಲೆ ಎಂದು ಹೇಳಲಾಗುತ್ತಿದೆ.ಈ ರಣರಕ್ಕಸ ಮಳೆಗೆ ಕಾಫಿನಾಡಿಗರು ಬೆಚ್ಚಿ ಬೆರಗಾಗಿದ್ದಾರೆ. ಏಕಾ ಏಕಿ ಗುಡುಗು, ಮಿಂಚಿನೊಂದಿಗೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಮಲೆನಾಡಿನಲ್ಲಿ ಮಳೆ ಮಾಮೂಲು ಎಂದು ಭಾವಿಸಿದ್ದ ಗ್ರಾಮದ ಜನರು ಕೆಲವೇ ನಿಮಿಷದಲ್ಲಿ ವರುಣ ಹಿಂದೆಂದೂ ಕಾಣದ ರೀತಿಯಲ್ಲಿ ಆರ್ಭಟಿಸಿದ್ದನ್ನು ಕಂಡು ಕಂಗಾಗಲಾಗಿದ್ದಾರೆ. ಮೋಡದ ರಾಶಿಯೇ ಮಳೆ ರೂಪದಲ್ಲಿ ಇಡೀಯಾಗಿ ಬಿತ್ತೇನೋ ಎನ್ನುವ ರೀತಿ ಸುರಿದ ಮಳೆಯನ್ನು ಕಂಡು ಭಯಭೀತರಾಗಿದ್ದಾರೆ. ಸಾರಗೋಡು, ಹುಯಿಗೆರೆ ಸುತ್ತಮುತ್ತಲ ಗ್ರಾಮಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದಿದ್ದು, ಹಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಮನೆಗಳ ಕಾಂಪೌಂಡ್ಗಳು ಕುಸಿತಗೊಂಡಿವೆ.

ಬಯಲುಸೀಮೆ ಅಬ್ಬರದ ಮಳೆಗೆ ತತ್ತರಿಸಿದ ಜನರು 
ಸದಾ ಮಳೆಯ ಕೊರತೆ ಅನುಭವಿಸುವ ಅರೆಮಲೆನಾಡು ಪ್ರದೇಶವಾದ ಕಳಸಾಪುರ ಗ್ರಾಮದಲ್ಲೂ ಮಾಯದಂತಹ ಮಳೆ ಸುರಿದಿದೆ. ಧಾರಕಾರ ಮಳೆಯಿಂದ ಗ್ರಾಮದ ಹೃದಯ ಭಾಗದಲ್ಲೇ ನದಿಯೊಂದು ಸೃಷ್ಠಿಯಾಗಿದೆ, ವರುಣನ ಆರ್ಭಟಕ್ಕೆ ಅರ್ಧಕರ್ಧ ಗ್ರಾಮವೇ ಮುಳುಗಡೆ ಆಗಿದೆ. ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಜನ ಕಂಗಾಲಾಗಿದ್ದು, ನೋಡ ನೋಡುತ್ತಿದ್ದಂತೆ ಗ್ರಾಮದ ರಸ್ತೆಗಳು ನದಿಯಂತಾಗಿದ್ದು ಗ್ರಾಮ ಅಂಚಿನ ಶೆಟ್ಟಿಕೆರೆ ಕೋಡಿ ಬಿದ್ದ ಹಿನ್ನೆಲೆ ಈ ಅನಾಹುತ ಸಂಭವಿಸಿದೆ. ರಸ್ತೆಯ ಮೇಲೆ ಭೋರ್ಗರೆಯುತ್ತಿರುವ ಮಳೆಯ ನೀರು ಗ್ರಾಮದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಜಲರಾಶಿಯನ್ನು ಕಾಣುವಂತಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಶೆಟ್ಟಿಕೆರೆ ಅನಾಹುತಗಳನ್ನು ಸೃಷ್ಠಿಸಲು ಕಾದು ಕುಳಿತಂತೆ ಭಾಸವಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಭಯ, ಆತಂಕ ಸೃಷ್ಟಿಯಾಗಿತ್ತು. ಕೆರೆ ಕೋಡಿ ನೀರಿನಲ್ಲಿ ಮರದ ದಿಮ್ಮಿಗಳು ಕೊಚ್ಚಿ ಹೋಗುತ್ತಿವೆ. 

 

Bengaluru Rain; 1998ರ ಬಳಿಕ ಮೊದಲ ಬಾರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ!

ಈಶ್ವರಹಳ್ಳಿ ಗ್ರಾಮದೇವತೆಗೆ ಜಲದಿಗ್ಬಂಧನ
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ತಾಲ್ಲೂಕಿನ  ಈಶ್ವರಹಳ್ಳಿ ಕೆರೆ ಕೋಡಿ ಬಿದ್ದು ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಕೋಡಿ ನೀರಿನಿಂದ ರಾಜ್ಯ ಹೆದ್ಧಾರಿ ಜಲಾವೃತವಾಗಿದೆ. ಚಿಕ್ಕಮಗಳೂರು-ಜಾವಗಲ್ ರಸ್ತೆ ಜಲಾವೃತವಾಗಿದ್ದು ರಸ್ತೆಯ ಮೇಲೆ ಹರಿಯುತ್ತಿರುವ ಕೆರೆಯ ಕೋಡಿ ನೀರು ಹರಿಯುತ್ತಿದೆ. ಈಶ್ವರಹಳ್ಳಿ ಬಸ್ ನಿಲ್ದಾಣದ ಬಳಿ ರಾಜ್ಯ ಹೆದ್ಧಾರಿ ಜಲಾವೃತವಾಗಿದ್ದು ವಾಹನ ಸವಾರರು ಪರದಾಟ ನಡೆಸಿದ್ದು  ಜೀವಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Heavy Rain in Bengaluru: ಇನ್ನೂ ಮೂರು ಗಂಟೆ ಭಾರಿ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ಇನ್ನು ಇದೇ ಕೋರಿ ನೀರಿನಿಂದ ಈಶ್ವರಹಳ್ಳಿ ಗ್ರಾಮದೇವತೆಗೆ ಜಲದಿಗ್ಬಂಧನವಾಗಿದ್ದು ಭಕ್ತರು ದೇವಿ ದರ್ಶನ ಪಡೆಯುಲು ಹರಸಾಹಸವನ್ನೇ ಮಾಡಿದ್ದಾರೆ. ಈಶ್ವರಹಳ್ಳಿ ಗ್ರಾಮದ ದೇವತೆ  ಹೊಟಗಟ್ಟಮ್ಮ ದೇವಸ್ಥಾನಕ್ಕೆ ಕೆರೆ ನೀರು ನುಗ್ಗಿದೆ. ಇದರ ಪರಿಣಾಮ . ದೇವಾಲಯದ ಒಳಭಾಗದಲ್ಲಿ ಮೂರು ರಿಂದ ನಾಲ್ಕು ಅಡಿಗಳಷ್ಟು ನೀರು ನಿಂತಿದೆ .ದೇವಾಲಯ ಜಲಾವೃತದ ನಡುವೆಯೂ ದೇವರಿಗೆ ವಿಶೇಷ ಪೂಜೆ ಗ್ರಾಮಸ್ಥರು ಸಲ್ಲಿಸಿದ್ದಾರೆ.  ಇದೇ ಮೊದಲ ಬಾರಿಗೆ ಈ ಪರಿಯ ನೆರೆ ಕಂಡು ಜನತೆ ಕಂಗಾಗಲಾಗಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಬಯಲು ಭಾಗದದ ಹಲವು ಕಡೆಗಳಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಜನರು ಬಿಡುವು ನೀಡೋ ವರುಣ ಎಂದು ಮೊರೆ ಇಡುವಂತಾಗಿದೆ.

click me!