ಬಳ್ಳಾರಿಯಲ್ಲಿ ಹೊಯ್ಸಳರ ಕಾಲದ ಅಪರೂಪದ ವೀರಗಲ್ಲು ಪತ್ತೆ, ಚಿತ್ರದುರ್ಗದ ವೀರನ ಮರಣದ ಉಲ್ಲೇಖ!

Published : Jan 18, 2026, 07:25 PM IST
Hoysala era hero stone

ಸಾರಾಂಶ

ಕಂಪ್ಲಿಯ  ಬಳ್ಳಾಪುರ ಗ್ರಾಮದಲ್ಲಿ 12-13ನೇ ಶತಮಾನದ ಕುಮ್ಮಟದುರ್ಗ-ಹೊಯ್ಸಳರ ಕಾಲದ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಈ ಶಾಸನವು ಚಿಂತಮಕಲ್ಲು ಯುದ್ಧದಲ್ಲಿ ವೀರಮರಣ ಹೊಂದಿದ ನಾಗಯ ಎಂಬ ವೀರನ ಕಥೆಯನ್ನು ವಿವರಿಸುತ್ತದೆ. ಈ ಆವಿಷ್ಕಾರವು ಮಧ್ಯಯುಗೀನ ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.

ಬಳ್ಳಾರಿ: ಕಂಪ್ಲಿ ತಾಲ್ಲೂಕಿನ ಬಳ್ಳಾಪುರ ಗ್ರಾಮದ ಕೃಷಿ ಗದ್ದೆಯಲ್ಲಿ ಕುಮ್ಮಟದುರ್ಗ–ಹೊಯ್ಸಳರ ಕಾಲಘಟ್ಟಕ್ಕೆ ಸೇರಿದ ಸುಮಾರು 12ರಿಂದ 13ನೇ ಶತಮಾನಕ್ಕೆ ಸಂಬಂಧಿಸಿದ ಅಪರೂಪದ ವೀರಗಲ್ಲು (ವೀರಗಲ್ಲು) ಪತ್ತೆಯಾಗಿದ್ದು, ಈ ಪುರಾತತ್ವ ಆವಿಷ್ಕಾರ ಇತಿಹಾಸಾಸಕ್ತರಲ್ಲಿ ವಿಶೇಷ ಕುತೂಹಲವನ್ನು ಮೂಡಿಸಿದೆ.

ಈ ಮಹತ್ವದ ವೀರಗಲ್ಲನ್ನು ಸಂಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಹಾಗೂ ಅವರ ಸಂಶೋಧಕ ತಂಡ ಪತ್ತೆಹಚ್ಚಿದ್ದು, ಮಧ್ಯಯುಗೀನ ಕರ್ನಾಟಕದ ರಾಜಕೀಯ ಮತ್ತು ಯುದ್ಧ ಇತಿಹಾಸವನ್ನು ಅರಿಯಲು ಇದು ಅತ್ಯಂತ ಪ್ರಮುಖ ದಾಖಲೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಳ್ಳಾಪುರ ಗ್ರಾಮದ ರೈತ ಹರಿಜನ ದೊಡ್ಡಮಾಯಪ್ಪ ಅವರ ಗದ್ದೆಯಲ್ಲಿ ಈ ವೀರಗಲ್ಲು ಮೂರು ತುಂಡುಗಳಾಗಿ ಚದುರಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಸಂಶೋಧಕರು ಅವುಗಳನ್ನು ಜೋಡಿಸಿ ಪ್ರಾಥಮಿಕ ಅಧ್ಯಯನ ನಡೆಸಿದ್ದು, ವೀರಗಲ್ಲಿನ ಮೇಲ್ಭಾಗ ಅಥವಾ ಮತ್ತೊಂದು ಪ್ರಮುಖ ಭಾಗ ಕಣ್ಮರೆಯಾಗಿರುವುದು ಗಮನಕ್ಕೆ ಬಂದಿದೆ. ಕಾಲಾಂತರದಲ್ಲಿ ಉಂಟಾದ ಹಾನಿಯಿಂದಾಗಿ ಈ ಭಾಗ ನಾಶವಾಗಿರಬಹುದೆಂದು ಅಂದಾಜಿಸಲಾಗಿದೆ.

ನಾಗಯ ಎಂಬ ವೀರನು ಚಿಂತಮಕಲ್ಲು ಪ್ರದೇಶದಲ್ಲಿ  ವೀರಮರಣ

ವೀರಗಲ್ಲಿನ ಶಾಸನದ ಪ್ರಕಾರ, ನಾಗಯ ಎಂಬ ವೀರನು ಚಿಂತಮಕಲ್ಲು (ಇಂದಿನ ಚಿತ್ರದುರ್ಗ) ಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ವೀರಮರಣ ಹೊಂದಿದ್ದಾನೆ ಎಂಬ ಉಲ್ಲೇಖ ದೊರೆತಿದೆ. ರಾಜ್ಯದ ರಕ್ಷಣೆಯ ಉದ್ದೇಶದಿಂದ ನಡೆದ ಈ ಯುದ್ಧದಲ್ಲಿ ಅಪಾರ ಶೌರ್ಯ ಪ್ರದರ್ಶಿಸಿ ಪ್ರಾಣತ್ಯಾಗ ಮಾಡಿದ ನಾಗಯ ವೀರನ ಸ್ಮರಣಾರ್ಥ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ ಎಂಬುದು ಶಾಸನದ ಸಾರವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮೈಸೂರಿನ ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕ ಡಾ. ಮುನಿರತ್ನಂ, “ಗೋನೆಯ ನಾಯಕನ ಮಗನಾಗಿದ್ದ ಪ್ರಾಂತಾಧಿಕಾರಿ ಬೊಮ್ಮಯ್ಯನ ಪುತ್ರ ನಾಗಯ, ರಾಜ್ಯದ ಉಳಿವಿಗಾಗಿ ಚಿಂತಮಕಲ್ಲಿನಲ್ಲಿ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ ಘಟನೆ ಈ ವೀರಗಲ್ಲಿನ ಶಾಸನದಲ್ಲಿ ವಿವರವಾಗಿ ಪ್ರತಿಬಿಂಬಿತವಾಗಿದೆ. ಇದು ಹೊಯ್ಸಳ–ಕುಮ್ಮಟದುರ್ಗ ಕಾಲಘಟ್ಟದ ಇತಿಹಾಸವನ್ನು ಅರಿಯಲು ಅತ್ಯಂತ ಪ್ರಮುಖ ದಾಖಲೆ” ಎಂದು ತಿಳಿಸಿದ್ದಾರೆ.

ಸಂರಕ್ಷಣೆಯ ಅಗತ್ಯವಿದೆ

ಇನ್ನೊಂದೆಡೆ, ಗಂಗಾವತಿಯ ಖ್ಯಾತ ಇತಿಹಾಸ ಸಂಶೋಧಕ ಶರಣಪ್ಪ ಕೋಲ್ಕಾರ ಅವರು ಮಾತನಾಡಿ, “ಶಾಸನದ ಭಾಷಾ ಶೈಲಿ, ಶಿಲ್ಪಕಲೆ ಹಾಗೂ ಐತಿಹಾಸಿಕ ಹಿನ್ನೆಲೆಗಳನ್ನು ಅವಲೋಕಿಸಿದರೆ, ಈ ವೀರಗಲ್ಲು ಕಂಪಿಲರಾಯನ ಕಾಲಘಟ್ಟಕ್ಕೆ ಸೇರಿರಬಹುದಾದ ಸಾಧ್ಯತೆ ಹೆಚ್ಚಾಗಿದೆ. ಈ ಪತ್ತೆ ಉತ್ತರ ಕರ್ನಾಟಕದ ಮಧ್ಯಯುಗೀನ ರಾಜಕೀಯ, ಯುದ್ಧ ಹಾಗೂ ಆಡಳಿತ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಹೊಸ ಆಯಾಮ ನೀಡುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವೀರಗಲ್ಲು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಇತಿಹಾಸ ಪ್ರೇಮಿಗಳು ಅದರ ಸಂರಕ್ಷಣೆಯ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದಾರೆ. ಪುರಾತತ್ವ ಇಲಾಖೆ ತಕ್ಷಣ ಕ್ರಮ ಕೈಗೊಂಡು ವೀರಗಲ್ಲನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಒಟ್ಟಾರೆ, ಕುಮ್ಮಟದುರ್ಗ–ಹೊಯ್ಸಳರ ಕಾಲಘಟ್ಟಕ್ಕೆ ಸೇರಿದ ಈ ಅಪರೂಪದ ವೀರಗಲ್ಲಿನ ಪತ್ತೆ ತಾಲೂಕು ಹಾಗೂ ಜಿಲ್ಲೆಯ ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲಿದ ಮಹತ್ವದ ಘಟನೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ವರುಣ ಕ್ಷೇತ್ರಕ್ಕೆ 323 ಕೋಟಿ ರೂಪಾಯಿ ಗಿಫ್ಟ್: ಖಜಾನೆ ಖಾಲಿ ಅಂದೋರಿಗೆ ಈ ಕಾಮಗಾರಿಗಳೇ ಉತ್ತರ; ವಿಪಕ್ಷಗಳಿಗೆ ಯತೀಂದ್ರ ಸಿದ್ದರಾಮಯ್ಯ ಟಾಂಗ್!
ಹಾಸನದ 7ನೇ ತರಗತಿ ಬಾಲಕ ಏಷ್ಯನ್ ಬುಕ್‌ ಆಫ್ ರೆಕಾರ್ಡ್, ಕಣ್ಣು ಮುಚ್ಚಿಕೊಂಡೇ 1 ನಿಮಿಷದಲ್ಲಿ 8 ಕ್ಯೂಬ್ ಕಮಾಲ್!