'ಯಡಿಯೂರಪ್ಪ ಪದಚ್ಯುತಿಯಿಂದ ಬಿಜೆಪಿಗೆ ಪೆಟ್ಟು ಬೀಳೋದ್ರಲ್ಲಿ ಸಂದೇಹವೇ ಇಲ್ಲ'

By Kannadaprabha NewsFirst Published Jul 28, 2021, 11:54 AM IST
Highlights

*  ಯಡಿಯೂರಪ್ಪರಂತ ದಕ್ಷ, ಕ್ರಿಯಾಶೀಲ ವ್ಯಕ್ತಿ ಸಿಗುವುದೇ ಬಹಳ ಕಷ್ಟ
*  ಯಡಿಯೂರಪ್ಪರನ್ನೇ ಸಿಎಂ ಆಗಿ ಮುಂದುವರಿಸಿದ್ರೆ ಚೆನ್ನಾಗಿತ್ತು
* ಒಂದು ಧರ್ಮಪೀಠದ ಜಗದ್ಗುರು ಆಗಿ ರಾಜಕೀಯ ವಿಚಾರ ಮಾತನಾಡಲು ಇಚ್ಛೆ ಪಡಲ್ಲ
 

ಬೆಳಗಾವಿ(ಜು.28): ಬಿ.ಎಸ್‌.ಯಡಿಯೂರಪ್ಪ ಪದಚ್ಯುತಿಯಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬಹಳಷ್ಟು ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ ಎಂದು ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಧರ್ಮಪೀಠದ ಜಗದ್ಗುರು ಆಗಿ ರಾಜಕೀಯ ವಿಚಾರ ಮಾತನಾಡಲು ಇಚ್ಛೆ ಪಡಲ್ಲ. ಆದರೆ, ಯಡಿಯೂರಪ್ಪರಂತ ದಕ್ಷ, ಕ್ರಿಯಾಶೀಲ ವ್ಯಕ್ತಿ ಸಿಗುವುದೇ ಬಹಳ ಕಷ್ಟ. ಯಡಿಯೂರಪ್ಪ ಪಕ್ಷಕ್ಕಾಗಿ, ರಾಜ್ಯದ ಅಭಿವೃದ್ಧಿಗಾಗಿ ಶ್ರಮಪಟ್ಟಿದ್ದು ಎಲ್ಲರಿಗೂ ಗೊತ್ತಿದೆ. ವಯಸ್ಸಾಗಿದ್ದರೂ ಉಳಿದಂತಹ ಅವಧಿ ಕೊಟ್ಟಿದ್ದರೆ ಚೆನ್ನಾಗಿತ್ತು. ಇದು ಕೇವಲ ಮಠಾಧೀಶರ ಭಾವನೆಯಲ್ಲ ಎಲ್ಲ ಸಮುದಾಯದವರ ಭಾವನೆ ಆಗಿತ್ತು ಎಂದು ಹೇಳಿದರು.

ಸುಳ್ಳು ಹೇಳುವಲ್ಲಿ ಬಿಜೆಪಿಗರು ನಿಸ್ಸೀಮರು: ಸಿದ್ದರಾಮಯ್ಯ

ಆಷಾಢ ಕಳೆದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ಸಮಾಧಾನ ಇರುತ್ತಿತ್ತು. ಆದರೆ, ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಮನಸ್ಸಿಗೆ ಆಘಾತವಾಗುವಂತ ವಿಚಾರ ಪ್ರಕಟ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ಆದೇಶ ಪಾಲಿಸುವ ದೊಡ್ಡ ಗುಣ ಯಡಿಯೂರಪ್ಪ ಅವರಲ್ಲಿ ಕಾಣುತ್ತಿದ್ದೇವೆ. ಪಕ್ಷದ ರಾಷ್ಟ್ರೀಯ ನಾಯಕರ ಆದೇಶಕ್ಕೆ ಬದ್ಧ ಎಂದು ಹೇಳಿದ್ದರು. ಯಡಿಯೂರಪ್ಪರಂತಹ ವ್ಯಕ್ತಿಯನ್ನು ಸಿಎಂ ಮಾಡುವ ನಿರ್ಧಾರ ರಾಷ್ಟ್ರೀಯ ನಾಯಕರು ಮಾಡಬಹುದು. ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಕನ್ನಡ ನಾಡಿನ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಅಭಿವೃದ್ಧಿ ಕೆಲಸ ಮಾಡಲಿ ಅಂತಾ ಹಾರೈಸುವೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರೂ ಎಲ್ಲರೂ ಅಂದುಕೊಂಡ ಹಾಗೇ ಸಿಎಂ ಎಂದರು. ಯಡಿಯೂರಪ್ಪರನ್ನೇ ಸಿಎಂ ಆಗಿ ಮುಂದುವರಿಸಿದ್ರೆ ಚೆನ್ನಾಗಿತ್ತು. ವೀರಶೈವ ಧರ್ಮದ ವ್ಯಕ್ತಿಯಾದ್ರೂ ಇಡೀ ಸಮಾಜದ ಭಾವನೆ ಅರ್ಥಮಾಡಿಕೊಂಡು ಸ್ಪಂದಿಸಿ ಕೆಲಸ ಮಾಡುವ ಸಿಎಂ ಆಗಿದ್ದರು. ಬೇರೆ ಪಕ್ಷದವರು ಬಿಎಸ್‌ವೈ ಉತ್ತಮ ಗುಣಗಳನ್ನು ಕೊಂಡಾಡಿದ್ದನ್ನು ನೀವೆಲ್ಲ ನೋಡಿದ್ದೀರಿ. ಅನ್ಯರು ಹಗೆಗಳಾದರೆ ಬಾಳಬಹುದು, ತನ್ನವರು ಹಗೆಗಳಾದ್ರೆ ಬಾಳಲಾಗದು. ಅದರಂತೆ ಹೊರಗಿನ ವೈರಿಗಳಿಂತ ಯಡಿಯೂರಪ್ಪ ಅವರ ಪಕ್ಷದವರೇ ವೈರಿಗಳಾಗಿ ಕೆಲಸ ಮಾಡಿದ್ದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿದೆ ಎಂದರು.

ಆ ನೋವನ್ನು ರಾಷ್ಟ್ರೀಯ ನಾಯಕರು ಯಾವ ರೀತಿ ಸರಿಪಡಿಸುತ್ತಾರೋ? ಮುಂದಿನ ದಿನಗಳಲ್ಲಿ ಏನು ಸ್ಥಾನಮಾನ ಕೊಟ್ಟು ಗೌರವಿಸುತ್ತಾರೋ ಎಂಬುದರಲ್ಲಿ ಮುಂದಿನ ಭವಿಷ್ಯ ನಿರ್ಧಾರವಾಗಬಹುದು. ಬಿಎಸ್‌ವೈ ಪದಚ್ಯುತಿಯಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬಹಳಷ್ಟು ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ. ಮುಂದೆ ಯಾವುದೇ ಸಮುದಾಯದ ಸಿಎಂ ಆಗಲಿ ಎಲ್ಲರನ್ನೂ ಕಟ್ಟಿಕೊಂಡು ಅಭಿವೃದ್ಧಿ ಕೆಲಸ ಮಾಡಲಿ ಎಂದು ಹೇಳಿದರು.
 

click me!