
ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮದುವೆ ಮೆರವಣಿಗೆಯ ವೇಳೆ ಉಂಟಾದ ಡಿಜೆ ವಿವಾದ ದೊಡ್ಡ ಗಲಭೆಗೆ ತಿರುಗಿ, ಎರಡು ಕುಟುಂಬಗಳ ನಡುವೆ ಮಾರಾಮಾರಿಗೆ ಕಾರಣವಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿ ಪ್ರಕಾರ, ಇದೇ ರವಿವಾರ ಮಾರೆಪ್ಪಾ ಅನ್ನೋರ ತಂಗಿ ಮದುವೆಯ ಮೆರವಣಿಗೆ ವೇಳೆ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಸದ್ದು ಅಧಿಕವಾಗಿದೆ ಎಂಬ ಕಾರಣಕ್ಕೆ ಕೆಲವು ಸ್ಥಳೀಯರು “ಡಿಜೆ ಬಂದ್ ಮಾಡಿರಿ” ಎಂದು ವಾಗ್ವಾದ ಎಬ್ಬಿಸಿದ್ದರು. ಇದನ್ನು ಗಮನಿಸಿದ ಮಾರೆಪ್ಪ ತಕ್ಷಣವೇ ಡಿಜೆ ಸದ್ದನ್ನು ನಿಲ್ಲಿಸಿದರು. ಆದರೂ, "ಯಾಕೆ ಡಿಜೆ ಹಾಕಿದ್ದಿರಿ? ಸದ್ದು ಮಾಡಿದ್ದೇಕೆ?" ಎಂದು ಕಾವಲಿ ಈರಣ್ಣ ಮತ್ತು ಅವರ ಕುಟುಂಬಸ್ಥರು ಮಾರೆಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಸೇರಿ ಎರಡು ಕುಟುಂಬಗಳ ಮಧ್ಯೆ ವಾಗ್ವಾದ ಹೆಚ್ಚಿತು.
ಈ ವೈಮನಸ್ಯದ ಮುಂದುವರಿಕೆಯಾಗಿ, ಸೋಮವಾರ ರಾತ್ರಿ ಮಾರೆಪ್ಪ ಅವರ ಮನೆಗೆ ನುಗ್ಗಿ, ಕಾವಲಿ ಈರಣ್ಣ ಹಾಗೂ ಅವರ ಕುಟುಂಬ ಸದಸ್ಯರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಾಳಿಯಲ್ಲಿ ಕಟ್ಟಿಗೆ, ಬೆತ್ತ, ಕಾರದ ಪುಡಿ, ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ. ಈ ದಾಳಿಯಿಂದಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು, ಕನಿಷ್ಠ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಮಾನ್ವಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಶೇಷವೆಂದರೆ, ಗಲಭೆಯಲ್ಲಿ ಭಾಗಿಯಾದ ಎರಡೂ ಕುಟುಂಬಗಳು ಇದುವರೆಗೆ ಯಾವುದೇ ಅಧಿಕೃತ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಮದುವೆಯ ಸಂಭ್ರಮ ಮಧ್ಯೆ ಉಂಟಾದ ಈ ಸಣ್ಣ ವಿವಾದ ದೊಡ್ಡ ಗಲಭೆಗೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.