ರಾಯಚೂರು: ಆ.10ರಿಂದ 16ವರೆಗೆ ಮಂತ್ರಾಲಯದಲ್ಲಿ ರಾಘವೇಂದ್ರ ಆರಾಧನೆ

By Kannadaprabha NewsFirst Published Jul 24, 2022, 6:00 AM IST
Highlights

ವಾರಗಳ ಕಾಲ ನಡೆಯಲಿರುವ ರಾಯರ ಆರಾಧನಾ ಮಹೋತ್ಸವದ ಕಳೆಯನ್ನು ಹೆಚ್ಚಿಸಲಿರುವ ತುಂಗಭದ್ರಾ ನದಿ 

ರಾಯಚೂರು(ಜು.24): ಮಹಾಮಾರಿ ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಅದ್ಧೂರಿತನಕ್ಕೆ ದೂರವಾಗಿದ್ದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಪ್ರಸಕ್ತ ಸಾಲಿನಲ್ಲಿ ಗತವೈಭವ ಮಾದರಿಯಲ್ಲಿ ಆಚರಿಸಲು ಶ್ರೀಮಠವು ಮುಂದಾಗಿದೆ.ಆಗಸ್ಟ್‌ 10ರಿಂದ 16ವರೆಗೆ ಶ್ರೀಗುರುಸಾರ್ವಭೌಮರ 351 ನೇ ಆರಾಧನಾ ಮಹೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲು ಶ್ರೀಮಠ ಮುಂದಾಗಿದ್ದು ಆ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಿದೆ.

ಶ್ರೀಮಠದ ವಿವಿಧ ವಿಭಾಗಗಳಲ್ಲಿ ಅಲಂಕಾರ ಹಾಗೂ ಭಕ್ತರಿಗೆ ಮೂಲ ಸವಲತ್ತುಗಳನ್ನು ಕಲ್ಪಿಸಿಕೊಡುವ ಕಾಮಗಾರಿಗಳು ಸಾಗಿವೆ. ಶ್ರೀಮಠದ ಮುಂಭಾಗದ ಎರಡೂ ಬದಿಯಲ್ಲಿ ಮಂಟಪಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು. ಸುಣ್ಣ ಬಣ್ಣದ ಕೆಲಸ ನಡೆದಿದೆ. ಮಠದ ಪ್ರಾಕಾರದ ಸ್ವಚ್ಛಗೊಳಿಸಿ ಬಣ್ಣ ಹಾಕಲಾಗುತ್ತಿದ್ದು, ಮುಂಭಾಗದ ಕಟ್ಟಡದ ಮೂರನೇ ಮಹಡಿಯ ನಿರ್ಮಾಣದ ಕೆಲಸವು ನಡೆದಿದೆ. ಇಷ್ಟೇ ಅಲ್ಲದೇ ವಸತಿ ನಿಲಯಗಳು, ಶೌಚಾಲಯ, ನದಿಗಟ್ಟದಲ್ಲಿ ಸಣ್ಣ-ಪುಟ್ಟಸಿವಿಲ್‌ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಂಡಿದ್ದು, ಮುಂದಿನ ಎರಡೂ ವಾರಗಳಲ್ಲಿ ಎಲ್ಲ ಕೆಲಸ-ಕಾರ್ಯಗಳು ಪೂರ್ಣಗೊಳ್ಳಲಿವೆ.

ಮಂತ್ರಾಲಯದ ರಾಯರ ಭಕ್ತರೇ ಎಚ್ಚರ! ಆನ್‌ಲೈನ್‌ನಲ್ಲಿ ಪ್ರಸಾದ ಬುಕ್‌ ನೆಪದಲ್ಲಿ ಖದೀಮರ ವಂಚನೆ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಎಲ್ಲೆಡೆ ಬಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ತುಂಗಭದ್ರಾ ನದಿಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು ಇದು ಈ ಬಾರಿಯ ರಾಯರ ಮಹೋತ್ಸವದ ಮತ್ತೊಂದು ಹೈಲೆಟ್‌ ಆಗಿದೆ. ವಾರಗಳ ಕಾಲ ನಡೆಯಲಿರುವ ರಾಯರ ಆರಾಧನಾ ಮಹೋತ್ಸವದ ಕಳೆಯನ್ನು ತುಂಗಭದ್ರಾ ನದಿ ಹೆಚ್ಚಿಸಲಿದ್ದು, ಭಕ್ತರಿಗೆ ರಾಯರ ದರ್ಶನದ ಜೊತೆಗೆ ಪುಣ್ಯಸ್ನಾನದ ಫಲವು ದಕ್ಕಲಿದೆ.
 

click me!