
ಬಳ್ಳಾರಿ: ರೀಲ್ಸ್, ಫೋಟೋಶೂಟ್ ಮಾಡಲು ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಮಾಡೆಲ್ ಹೌಸ್ಗೆ ಬಂದಿದ್ದ ಕೆಲ ಯುವಕರು ಬೆಂಕಿ ಹೊತ್ತಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ ಎಂದು ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
ಬೆಂಕಿಗೆ ಆಹುತಿಯಾದ ಮನೆಯನ್ನು ಶನಿವಾರ ಬೆಳಗ್ಗೆ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಅನುಮಾನವಿದ್ದ 8 ಜನರನ್ನು ಬಂಧಿಸಿದ್ದೇವೆ. ಇದರಲ್ಲಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿದ್ದಾರೆ. ಈ ಪೈಕಿ ಕೆಲವು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮತ್ತೆ ಕೆಲವರು ಶಾಲೆ ಬಿಟ್ಟವರಿದ್ದಾರೆ. ಇಬ್ಬರು ಮುಂಬೈನಿಂದ ಬಂದವರೂ ಇದ್ದಾರೆ ಎಂದು ತಿಳಿಸಿದರು.ರೀಲ್ಸ್, ಫೋಟೋಶೂಟ್ ಮಾಡಲು ಹುಡುಗರ ಗುಂಪು ಈ ಮನೆಗೆ ಆಗಾಗ ಬರುತ್ತಿತ್ತು. ಬೇರೆ, ಬೇರೆಯವರೂ ಇಲ್ಲಿಗೆ ಬಂದು ಹೋಗುತ್ತಿದ್ದರು. ಬಂಧಿತರ ಮೊಬೈಲ್ ಪರಿಶೀಲನೆಯಿಂದ ನಮಗೆ ಇದೆಲ್ಲವೂ ಗೊತ್ತಾಗಿದೆ. ಇದಕ್ಕೆ ಪೂರಕವಾಗಿ ಮನೆಯಲ್ಲಿ ಸಿಗರೆಟ್ ತುಣುಕುಗಳು, ಬೆಂಕಿಪೊಟ್ಟಣಗಳು ಅಲ್ಲಲ್ಲಿ ಬಿದ್ದಿರುವುದು ಕಂಡು ಬಂದಿದೆ. ಗುಂಪಿನಲ್ಲಿದ್ದ ಬಾಲಕನೊಬ್ಬ ಮನೆಯಲ್ಲಿದ್ದ ವಸ್ತುವೊಂದಕ್ಕೆ ಬೆಂಕಿ ಹೊತ್ತಿಸಿದ್ದಾನೆ. ಆದರೆ, ಬೆಂಕಿ ನಿಯಂತ್ರಣಕ್ಕೆ ಬಾರದೇ ಇಡೀ ಮನೆಗೆ ವ್ಯಾಪಿಸಿದೆ ಎಂದು ಅವರು ತಿಳಿಸಿದರು.
ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ ಪ್ರಕರಣದ ಬಂಧಿತ ಆರೋಪಿಗಳು ಯಾವ ಉದ್ದೇಶ ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಯಾವುದೇ ಸಾಧ್ಯತೆಗಳನ್ನು ನಾವು ಅಲ್ಲಗಳೆಯುವುದಿಲ್ಲ. ದೂರಿನಲ್ಲಿ ಹೇಳಿರುವುವಂತಹ ಯಾವುದೇ ವಸ್ತುಗಳು ಆ ಮನೆಯಲ್ಲಿ ನಮಗೆ ಸಿಕ್ಕಿಲ್ಲ. ಮನೆಯಲ್ಲಿ ಅವರು ಹೇಳಿದ ವಸ್ತುಗಳು ಈ ಹಿಂದೆ ಇದ್ದಿರಬಹುದು. ಅದನ್ನು ಕದ್ದುಕೊಂಡು ಹೋಗಿರುವ ಸಾಧ್ಯತೆಯೂ ಇದೆ. ಆದರೆ, ಈಗಂತೂ ಯಾವುದೇ ವಸ್ತುಗಳು ಸಿಕ್ಕಿಲ್ಲ. ಲೇಔಟ್ನಲ್ಲಿ ಯಾವುದೇ ಭದ್ರತೆ, ಸಿಸಿಟಿವಿ ಇರಲಿಲ್ಲ. ಇಂಥ ವ್ಯವಸ್ಥೆ ಮಾಡಿಕೊಳ್ಳುವ ಜವಾಬ್ದಾರಿ ಅವರದ್ದು. ನಗರದ ಹೊರವಲಯದ ಲೇಔಟ್ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅದರ ನಿಯಂತ್ರಣಕ್ಕೆ ರಾತ್ರಿ ಗಸ್ತು, ಪೊಲೀಸ್ ಭದ್ರತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರಕರಣ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ದೂರಿನಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಅವರು ತಿಳಿಸಿದರು.
ನಗರ ಹೊರವಲಯದ ಜಿ-ಸ್ಕ್ವೇರ್ ಲೇಔಟ್ನ ಮಾಡೆಲ್ ಹೌಸ್ ಬೆಂಕಿ ಅವಘಡ ಪ್ರಕರಣದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕೈವಾಡವಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಶನಿವಾರ ಘಟನಾ ಸ್ಥಳಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ರೀಲ್ಸ್ ಮಾಡುವ ಹುಡುಗರು ಕೃತ್ಯ ಎಸಗಿದ್ದಾರೆ, ಮಾಡೆಲ್ ಹೌಸ್ ಪಾಳು ಬಿದ್ದಿತ್ತು. ಯಾವುದೇ ಸೆಕ್ಯೂರಿಟಿ ಇರಲಿಲ್ಲ’ ಎಂದು ಎಸ್ಪಿಯವರು ಹೇಳಿದ್ದಾರೆ. ಆದರೆ, ಮಾಡೆಲ್ ಹೌಸ್ಗೆ ನಾವು ಸೆಕ್ಯೂರಿಟಿ ನಿಯೋಜಿಸಿದ್ದೇವೆ. ರೀಲ್ಸ್ ಮಾಡುವ ಹುಡುಗರು ಈ ಕೃತ್ಯ ಎಸಗಿದ್ದಾರೆ ಎಂದರೆ ನಂಬುವುದು ಹೇಗೆ ಸಾಧ್ಯ? ರೀಲ್ಸ್ ಮಾಡುವವರು ಬೆಂಕಿಯನ್ನು ಏಕೆ ಹಚ್ಚುತ್ತಾರೆ? ಎಂದು ಪ್ರಶ್ನಿಸಿದರು.
ಕಳೆದ ಆಗಸ್ಟ್ ನಲ್ಲಿ ಮಾಡೆಲ್ ಹೌಸ್ನ ಗೇಟ್ಗಳನ್ನು ಮುರಿದು ಕೆಲವು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ಗ್ರಾಮೀಣ ಠಾಣೆಗೆ ದೂರು ನೀಡಿದ್ದೇವೆ. ಗ್ರಾಮೀಣ ಸಿಪಿಐ ಆಗಿದ್ದ ಸತೀಶ್ ಅವರು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಎಎಸ್ಪಿ ರವಿಕುಮಾರ್ ಅವರು ಸಿಪಿಐ ಸತೀಶ್ ಅವರಿಗೆ ಯುವಕರನ್ನು ಬಂಧಿಸದಂತೆ ಒತ್ತಡ ಹೇರಿ, ಬಿಡುಗಡೆ ಮಾಡಿಸಿದರು. ದುಷ್ಕರ್ಮಿಗಳನ್ನು ಈ ಇಬ್ಬರೇ ರಕ್ಷಣೆ ಮಾಡಿದರು ಎಂದು ಆರೋಪಿಸಿದರು.
ಜಿ-ಸ್ಕ್ವೇರ್ ಲೇಔಟ್ ಮೇಲೆ ಶಾಸಕ ಭರತ್ ರೆಡ್ಡಿ ಕಣ್ಣು ಹಾಕಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪ್ರಕರಣದ ಹಿಂದೆ ಭರತ್ ರೆಡ್ಡಿಯ ಕೈವಾರವಿದೆ ಎಂದು ದೂರಿದರು.
ಬ್ಯಾನರ್ ಗಲಭೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳಾದ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿಯನ್ನು ಬಂಧಿಸಲಾಗಿಲ್ಲ. ಭರತ್ ರೆಡ್ಡಿಯಂತಹ ಕ್ರಿಮಿನಲ್ಗಳನ್ನು ಸಿಎಂ ರಕ್ಷಣೆ ಮಾಡುತ್ತಿದ್ದಾರೆ. ಇವರು ಮುಂದೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಸಿಎಂ ಸಿದ್ಧರಾಮಯ್ಯ ನಿಜಕ್ಕೂ ಪ್ರಾಮಾಣಿಕ ರಾಜಕಾರಣಿಯಾಗಿದ್ದರೆ ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.