Tumakur : ಅಂತಿಮ ಮತದಾರರ ಪಟ್ಟಿಪ್ರಕಟ: ಡೀಸಿ

By Kannadaprabha NewsFirst Published Jan 4, 2023, 5:57 AM IST
Highlights

ಜಿಲ್ಲೆಯ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಸಂಬಂಧ ಸ್ವೀಕೃತವಾದ ಅರ್ಜಿ ಮತ್ತು ಆಕ್ಷೇಪಣೆಗಳನ್ನು ಶೇ.100ರಷ್ಟುವಿಲೇವಾರಿ ಮಾಡಲಾಗಿದ್ದು, ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು.

  ತುಮಕೂರು :  ಜಿಲ್ಲೆಯ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಸಂಬಂಧ ಸ್ವೀಕೃತವಾದ ಅರ್ಜಿ ಮತ್ತು ಆಕ್ಷೇಪಣೆಗಳನ್ನು ಶೇ.100ರಷ್ಟುವಿಲೇವಾರಿ ಮಾಡಲಾಗಿದ್ದು, ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣಾ ಆಯೋಗದ ನಿರ್ದೇಶನ ಅನುಸಾರ ಶುದ್ಧ, ನಿಖರ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸುವ ಪರಿಶೀಲನೆ ಕಾರ್ಯ ನಡೆದಿದ್ದು, ಮತದಾರರ ಪಟ್ಟಿಪರಿಷ್ಕರಣೆ ಸಮಯದಲ್ಲಿ ಜಿಲ್ಲಾ ನೋಡಲ್‌ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಮತಗಟ್ಟೆವ್ಯಾಪ್ತಿಯಲ್ಲಿನ ಮನೆಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿವಿಶೇಷ ಪರಿಷ್ಕರಣೆ ಕುರಿತು ಮತದಾರರಿಂದ ಅಭಿಪ್ರಾಯ/ಸೂಕ್ತ ದಾಖಲಾತಿ ಪಡೆದಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ 2683 ಮತಗಟ್ಟೆಗಳ ಮತದಾರರಿಂದ ಈಗಾಗಲೇ ಬಂದಿರುವ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು.

ಮತದಾರರ ಪಟ್ಟಿಯಲ್ಲಿನ ಸೇರ್ಪಡೆ, ತಿದ್ದುಪಡಿ, ಬದಲಾವಣೆ, ತೆಗೆದು ಹಾಕುವ ಕುರಿತ ವಿವರವಾದ ಅಂಕಿ ಅಂಶಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ಪರಿಶೀಲನೆಗೆ ನೀಡಲಾಗುವುದು. ಅಂತಿಮ ಪರಿಷ್ಕರಣೆಯ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ, ಏನಾದರೂ ಬದಲಾವಣೆಗಳಿದ್ದಲ್ಲಿ, ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟಿದ್ದಲ್ಲಿ ಕೂಡಲೇ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿದ್ದಲ್ಲಿ ಮುಕ್ತವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು.

ಓಟರ್‌ ಹೆಲ್ಪ್‌ಲೈನ್‌ ಆ್ಯಪ್‌:

ಭಾರತೀಯ ಚುನಾವಣಾ ಆಯೋಗದ ಅಧೀಕೃತ ಓಟರ್‌ ಹೆಲ್ಪ್‌ಲೈನ್‌ ಎಂಬ ಆ್ಯಪ್‌ ಅನ್ನು ಎಲ್ಲರೂ ಉಚಿತವಾಗಿ ಇನ್ಸ್‌ಟಾಲ್‌ ಮಾಡಬಹುದಾಗಿದ್ದು, ಮತದಾರರ ಚೀಟಿಯಲ್ಲಿ ಇರುವ ಬಾರ್‌ಕೋಡ್‌ ಅಥವಾ ಅದರಲ್ಲಿನ ಮಾಹಿತಿ ಅಥವಾ ಎಫಿಕ್‌ ನಂಬರ್‌ ಮೂಲಕ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೆ ಅಥವಾ ಇಲ್ಲವೆ ಎಂದು ಹುಡುಕಬಹುದಾಗಿದೆ. ಆನ್‌ಲೈನ್‌ ಮೂಲಕ ತಿಳಿಯಲು ರಾಷ್ಟ್ರೀಯ ಚುನಾವಣಾ ಸೇವಾ ಪೋರ್ಟಲ್‌ಗೆ ಹೋಗಬಹುದು. ಇಲ್ಲಿಯವರೆಗೂ ಆಧಾರ್‌ ಸಂಖ್ಯೆಯನ್ನು ಮತದಾನ ಪಟ್ಟಿಯಲ್ಲಿ ಸೇರಿಸಿದ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಆಧಾರ್‌ ಸಂಖ್ಯೆಯನ್ನು ನೀಡಿ, ಮತದಾರರ ಪಟ್ಟಿಯಲ್ಲಿ ನಮೂದಿಸಿರುವುದನ್ನು ದೃಢೀಕರಿಸಿಕೊಳ್ಳಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ವಿ. ಅಜಯ್‌, ಕಲ್ಪಶ್ರೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್‌ ಡಿ.ಎನ್‌., ಜಿಲ್ಲಾ ಸರ್ಜನ್‌ ಡಾ. ವೀಣಾ, ತಹಸೀಲ್ದಾರ್‌ ಸಿದ್ದೇಶ್‌, ರೇಣುಕುಮಾರ್‌, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಖಾ, ಶಿರಸ್ತೇದಾರ ಎನ್‌. ನರಸಿಂಹರಾಜು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಸೇರಿದಂತೆ ಸಂಬಂಧಿಸಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಭಾಗವಹಿಸಿದ್ದರು.

ಬಾಕ್ಸ್‌

ವ್ಯಾಕ್ಸಿನ್‌ ಕಾರ್ಯಕ್ರಮ ಚುರುಕುಗೊಳಿಸಿ

ಜೆ.ಇ. ಲಸಿಕಾ ಅಭಿಯಾನ-2022 ಅಂಗವಾಗಿ ಜಿಲ್ಲೆಯಲ್ಲಿ 1-15 ವರ್ಷದ ಮಕ್ಕಳಿಗೆ 5,23,544 ಜೆಇ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈಗಾಗಲೇ 4,97978 ಮಕ್ಕಳಿಗೆ ಲಸಿಕೆ ನೀಡಿ ಶೇ. 95ರಷ್ಟುಗುರಿ ಸಾಧಿಸಲಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತರು ಬಹಳಷ್ಟುಶ್ರಮಿಸಿದ್ದು, ಈ ಶ್ರೇಯಸ್ಸು ಅವರಿಗೆ ಸಲ್ಲಬೇಕಾಗಿದೆ. ಅರ್ಹ ಮಕ್ಕಳಿಗೆ ಜೆ.ಇ. ಲಸಿಕೆ ನೀಡುವ ಮೂಲಕ ಮಕ್ಕಳನ್ನು ಮೆದುಳು ಜ್ವರದಿಂದ ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ವ್ಯಾಕ್ಸಿನ್‌ ಕಾರ್ಯಕ್ರಮ ಚುರುಕುಗೊಳಿಸಿ ಇನ್ನು ಉಳಿದ ಮಕ್ಕಳಿಗೆ ಲಸಿಕೆ ನೀಡಿ ಶೇ.100ರಷ್ಟುಗುರಿ ಸಾಧಿಸಬೇಕು ಹಾಗೂ ಎಲ್ಲರೂ ಉತ್ತಮ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯುವುದು ಒಳ್ಳೆಯದು. ಕೋವ್ಯಾಕ್ಸಿನ್‌ ಲಸಿಕಾಕರಣ ಪೂರ್ಣಗೊಳಿಸಬೇಕು, ಯುಡಿಐಡಿ, ಅಭಾ ಕಾರ್ಡ್‌ ನೋಂದಣಿ, ವಿತರಣೆ ಅತ್ಯಂತ ಪ್ರಮುಖ ವಿಷಯವಾಗಿದೆ. ಉಚಿತ ಆರೋಗ್ಯ ಸೇವೆ ನೀಡುವ ಅಭಾ ಕಾರ್ಡ್‌ ನೋಂದಣಿ ಸಂಬಂಧ ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಈ ಕುರಿತು ವಿಶೇಷ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಡೀಸಿ ಪಾಟೀಲ ಸೂಚಿಸಿದರು.

click me!