
ಕಾರವಾರ: ಖಾಸಗಿ ಬಸ್ ಪಲ್ಟಿಯಾಗಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಅಳ್ಳಂಕಿ ಫ್ಯಾಕ್ಟರಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ.
ಭಾನುವಾರ ತಡರಾತ್ರಿ ಹೊನ್ನಾವರದಿಂದ ಸಾಗರ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಅಳ್ಳಂಕಿಯ ಸಮೀಪದ ತಿರುವಿನಲ್ಲಿ ರಾತ್ರಿ 11.30ರ ಸುಮಾರಿಗೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ಚಾಲಕ ಗಿರೀಶ್ ನಾಯ್ಕ (35) ಅತೀವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಅಪಘಾತದಲ್ಲಿ ಗುಂಡಬಾಳದ ಸುರೇಶ್ ಗೌಡ (36), ಆಶಾ ಸುರೇಶ್ ಗೌಡ (31) ಹಾಗೂ ಎರಡು ವರ್ಷದ ಭೂಮಿ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ.
ಜೊತೆಗೆ ನರಸಿಂಹ ಕ್ಷೇತ್ರ ಗೌಡ, ಶ್ರೀಯಾನ್ ಸುರೇಶ್ ಗೌಡ, ಮಹಮ್ಮದ್ ಇನಾಮ್, ಉಮಾ ಮೇಸ್ತ, ಸುಚಿತ್ರಾ ನಾಯ್ಕ, ಪ್ರವೀಣ ನಾಯ್ಕ, ಜೋಯಿಸ್ ರಾಕಿ ರೊಡ್ರಿಗ್ಸ್, ಪ್ರಿಯಾಂಕ ವೆರ್ಣೇಕರ, ಪೂಜಾ ನಾಯ್ಕ, ಗಾಯತ್ರಿ ಗೌಡ, ಸುರೇಶ್ ನಾಯ್ಕ, ನಿವೇದಿತಾ ನಾಯ್ಕ, ಸೌಮ್ಯ ಹೆಗಡೆ, ಅನ್ನಪೂರ್ಣಾ ಖಾರ್ವಿ, ಸಂದ್ಯಾ ಹೆಗಡೆ, ಮನೋಜ್ ಪಂಡಿತ್, ಸುಬ್ರಹ್ಮಣ್ಯ ಆಚಾರಿ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ
ಗಾಯಾಳುಗಳನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ಹೆಚ್ಚಿನ ಗಾಯಗಳಾದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಾವಳ್ಳಿ ಕ್ರಾಸ್ ಬಳಿ ಭೀಕರ ಬಸ್ ಅಪಘಾತ: ಬಾಗಲಕೋಟೆಯ ಮೂವರ ದುರ್ಮರಣ, 7 ಜನ ಗಂಭೀರ