ಸಲಿಂಗಿ ಮದುವೆ ಸೃಷ್ಟಿಗೆ ವಿರುದ್ಧವಾದದ್ದು, ಇದನ್ನು ನಾನು ಒಪ್ಪೋದಿಲ್ಲ: ಪ್ರಮೋದ್ ಮುತಾಲಿಕ್

By Girish GoudarFirst Published Oct 17, 2023, 9:45 PM IST
Highlights

ಮದುವೆ ಎಂಬುದು ಪವಿತ್ರವಾದ ಬಂಧನ, ಅದಕ್ಕೆ ಕಳಂಕವಾಗಬಾರದು. ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ, ಸಲಿಂಗಿ ಮದುವೆ ಬೇಡ ಎಂದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ 

ಉಡುಪಿ(ಅ.17):  ಪರಶುರಾಮರನ್ನು ದೇವರು ಎಂಬ ನಂಬಿಕೆಯೊಂದಿಗೆ ದೇಶಾದ್ಯಂತ ಆರಾಧನೆ ಮಾಡಲಾಗುತ್ತದೆ. ತುಳುನಾಡಿನ ಸೃಷ್ಟಿಕರ್ತ ಪರಶುರಾಮ ಎಂಬ ಪ್ರತೀತಿ ಇದೆ. ಅಂತಹ ನಾಡಿನಲ್ಲೇ ಪರಶುರಾಮನಿಗೆ ಘೋರ ಅಪಚಾರ, ಅಪಮಾನ, ದ್ರೋಹ ಮಾಡಲಾಗಿದೆ. ಆದರೆ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರೇ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅನುಮಾನ ವ್ಯಕ್ತಪಡಿಸಿದರು. 

ಇಂದು(ಮಂಗಳವಾರ) ಉಡುಪಿಯ ಬ್ರಹ್ಮಗಿರಿಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ಕಾರ್ಕಳದ ಶಾಸಕರ ಸ್ವಾರ್ಥ, ಭ್ರಷ್ಟಚಾರಕ್ಕೆ ಈತ ದೇವರನ್ನೂ ಬಿಡಲ್ಲ, ರಾಜ್ಯದಲ್ಲಿ ಹಿಂದೂ ಸಮಾಜ ತಲೆತಗ್ಗಿಸುವಂತಾಗಿದೆ. ಹಿಂದೂ ಧರ್ಮದ ಹೆಸರಲ್ಲಿ ಶಾಸಕನಾದ ವ್ಯಕ್ತಿ ಈ ಮಟ್ಟಕ್ಕೆ ಇಳಿಯಬಾರದಿತ್ತು, ಉಡುಪಿ ದೇವರನಾಡು, ಇಲ್ಲೇ ಶಾಸಕನಿಂದ ಅಪಚಾರವಾಗಿದೆ. ಇಷ್ಟಾದರೂ ಸುನೀಲ್ ಬಾಯಿಮುಚ್ಚಿಕೊಂಡು ಕೂತಿರೋದು ಶೋಭೆ ತರಲ್ಲ, ಪವಿತ್ರ ಶಾಸಕ ಸ್ಥಾನಕ್ಕೆ ಕಳಂಕವಾಗಿದೆ ಎಂದು ತಿಳಿಸಿದ್ದಾರೆ. 

ದುಬಾರಿಯಾದರೂ ವಿದ್ಯುತ್ ಖರೀದಿ ಅನಿವಾರ್ಯ: ಸಚಿವ ಚೆಲುವರಾಯಸ್ವಾಮಿ

ಚುನಾವಣೆ ಉದ್ದೇಶದಿಂದ ತರಾತುರಿಯಲ್ಲಿ ಪರಶುರಾಮನ ಮೂರ್ತಿಯನ್ನು ಉದ್ಘಾಟನೆ ಮಾಡಲಾಗಿದೆ. ಕಾಮಗಾರಿಗೆ ಒಂದು ವರ್ಷಬೇಕು ಎಂದು ಇಂಜಿನಿಯರ್ ಗಳು ಹೇಳಿದ್ದರೂ, ಆದರೆ ಚುನಾವಣೆಯ ಲಾಭ ಪಡೆಯುವ ಕಾರಣಕ್ಕೆ 41 ದಿನದೊಳಗೆ ರಚನೆ ಮಾಡಿದ್ದಾರೆ. ಆ ಸ್ಥಳಕ್ಕೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಇಲ್ಲ, ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಆಗಿದೆ. ಬಡವರಿಗೊಂದು ಕಾನೂನು, ಅಧಿಕಾರದಲ್ಲಿರುವವರಿಗೊಂದು ಕಾನೂನು. ಜಿಲ್ಲಾಧಿಕಾರಿ, ಕಟ್ಟಡ ನಿರ್ಮಿಸಿದ ನಿರ್ಮಿತಿ‌ ಕೇಂದ್ರದ ಮುಖ್ಯಸ್ಥರು ಆಗಿದ್ದು, ಸ್ವತ ಅಂದಿನ ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು ಎಂದರು. 

ಅಂದು 33 ಅಡಿ ಎತ್ತರದ ಕಂಚಿನ ಮೂರ್ತಿ ಎಂದು ಹೇಳಲಾಗಿತ್ತು. ಇವತ್ತು ಆ ಮೂರ್ತಿಯೇ ಇಲ್ಲವಾಗಿದೆ. ಮೂರ್ತಿಯನ್ನು ಕತ್ತರಿಸಿ ತೆಗೆದಿದ್ದಾರೆ. ಇದರಲ್ಲಿ ಕಾಂಗ್ರೇಸ್ ನವರು ಕೂಡಾ ಶಾಮೀಲಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ತನಿಖೆ ಯಾಕೆ ಮಾಡಿಲ್ಲ? ಉಸ್ತುವಾರಿ ಸಚಿವರು ಇದರಲ್ಲಿ ಅದ ಅಪಚಾರವನ್ನು ತನಿಖೆಯ ಮೂಲಕ ಬಹಿರಂಗ ಮಾಡಬೇಕು. ಆದರೆ ಅವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾ? ಎಂದು ಅನುಮಾನ ವ್ಯಕ್ತಪಡಿಸಿದರು. 

ಜಿಲ್ಲಾಧಿಕಾರಿ, ತಹಶೀಲ್ದಾರ್, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಶಾಸಕ ಸುನೀಲ್ ಕುಮಾರ್ ಅವರ ರಾಜಿನಾಮೆ ಪಡೆದು, ಬಂಧಿಸಿ ತನಿಖೆ ಮಾಡಲಿ, ಅಂದಿನ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. 

ಥೀಂ ಪಾರ್ಕ್ ನಲ್ಲಿರುವ ಹೊಟೇಲ್ ಗೂ ಅನುಮತಿ ಇಲ್ಲ, ಕಾಂಗ್ರೆಸ್ ನವರು ಕಾಮಗಾರಿ ಪೂರ್ಣಗೊಳಿಸೋದಾಗಿ ಹೇಳುತ್ತಿದ್ದಾರೆ, ಆದರೆ ತನಿಖೆ ನಡೆಯುವವರೆ ಮತ್ತೆ ಕಂಚಿನ ಮೂರ್ತಿ ಕೂರಿಸುವುದಕ್ಕೆ ಬಿಡುವುದಿಲ್ಲ. ರಾತೋರಾತ್ರಿ ಮೂರ್ತಿ ತೆಗೆಸಿದ್ದು ಈಗಿನ ಸರ್ಕಾರ, ಹಾಗಾಗಿ ಕಾಂಗ್ರೇಸ್ ಕೂಡಾ ಭಾಗಿಯಾಗಿದೆ. ಹಿಂದಿನ ಡಿಸಿ ಮೋಸದಿಂದ ಮೂರ್ತಿಯನ್ನು ಕೂರಿಸಿದರು, ಈಗಿನ ಡಿಸಿ ತೆಗೆಸಿದರು. ವಿಷ್ಣು ದೇವರ ಆರನೇ ಅವತಾರಕ್ಕೆ ಈ ರೀತಿ ಅವಮಾನ ಆಗಿದ್ದು, ನಾನು ಪರಶುರಾಮ ಪ್ರತಿಮೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುತ್ತೇನೆ ಎಂದರು. 

ಈ ಹಿಂದೆ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷನಾಗಿದ್ದ ಶಾಸಕ ಸುನೀಲ್ ಕುಮಾರ್,‌ ನಾಲ್ಕು ಎಕರೆ ದಲಿತರಿಗೆ ಮೀಸಲಿಟ್ಟ ಭೂಮಿಯನ್ನು ಗುತ್ತಿದಾರನಿಗೆ ಕೊಟ್ಟಿದ್ದಾರೆ. ದಲಿತರಿಗೆ ಅನ್ಯಾಯವಾಗಿದೆ, ನ್ಯಾಯಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಈಗಿನ ಸರ್ಕಾರ ಯಾವುದೇ ಕಾಮಗಾರಿ ನಡೆಸಬಾರದು ಎಂದು ಸೂಚನೆ ನೀಡಿದೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಪ್ರ.ಕಾರ್ಯದರ್ಶಿ ಆನಂದ್ ಶೆಟ್ಟಿ, ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು,  ಅಡ್ಯಾರು, ಜಿ.ಪ್ರ.ಕಾರ್ಯದರ್ಶಿ ಸುದರ್ಶನ್ ಪೂಜಾರಿ, ಜಿ.ಸಂಘಟನಾ ಕಾರ್ಯದರ್ಶಿ ಕೀರ್ತಿರಾಜ್ ಕಿದಿಯೂರು ಉಪಸ್ಥಿತರಿದ್ದರು.

ಸಲಿಂಗಿ ವಿವಾಹ- ಸೃಷ್ಟಿಯ ವಿರುದ್ಧ ಕ್ರಿಯೆ- ಪ್ರಮೋದ್ ಮುತಾಲಿಕ್

ಸಲಿಂಗಿ ಮದುವೆ, ಸೃಷ್ಟಿಗೆ ವಿರುದ್ಧವಾಗಿದೆ. ಇದನ್ನು ನಾನು ಒಪ್ಪುವುದಿಲ್ಲ. ಅತ್ಯಂತ ಅಸಹ್ಯವಾದ ಪ್ರಕ್ರಿಯೆಗೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ, ಕೇಂದ್ರ ಸರ್ಕಾರದ ನಿಲುವು ಸರಿಯಿದೆ. ಸೃಷ್ಟಿಯ ವಿರುದ್ಧದ ಕ್ರಿಯೆಗೆ ಕಾನೂನು‌ ಮುದ್ರೆ ನೀಡುವುದು ಸೂಕ್ತವಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಸಲಿಂಗಿ ವಿವಾಹ ಕುರಿತಂತೆ  ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ತೀರ್ಪಿನ ಬಗ್ಗೆ ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.  ಮದುವೆ ಎಂಬುದು ಪವಿತ್ರವಾದ ಬಂಧನ, ಅದಕ್ಕೆ ಕಳಂಕವಾಗಬಾರದು. ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ, ಸಲಿಂಗಿ ಮದುವೆ ಬೇಡ ಎಂದರು. 

ಪ್ರಮೋದ್‌ ಮುತಾಲಿಕ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌: ಉಡುಪಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ನಿರ್ವಿಘ್ನ

ಮಂಗಳೂರು ಮಂಗಳಾದೇವಿ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಆವರಣದಲ್ಲಿ ಮುಸ್ಲಿಮರಿಗೆ ಅವಕಾಶ ಕೊಟ್ಟಿದ್ದಾರೆ, ವಿಹಿಂಪ ಹೋರಾಟಕ್ಕೆ ನನ್ನ ಬೆಂಬಲ ಇದೆ. ಆಸ್ತಿಕತೆ ಬೇಡ, ಹಿಂದೂಗಳ ವ್ಯಾಪಾರ ಬೇಕು, ಲಾಭ ಬೇಕು ಎಂದರೆ ಹೇಗೆ? ಗೋಪೂಜೆ ನಡೆಯುವ ದೇವಸ್ಥಾನದಲ್ಲಿ, ಗೋಹತ್ಯೆ ಮಾಡುವವರಿಗೆ ಯಾಕೆ ಅವಕಾಶ ನೀಡಬೇಕು ಎಂದು ಪ್ರಶ್ನಿಸಿದರು.

ಅಲ್ಲಾಹ್ ಒಬ್ಬನೇ ದೇವರು ಅನ್ನೋರಿಗೆ ಬಹುದೇವ ಉಪಾಸಕರ ವ್ಯಾಪಾರ ಯಾಕೆ..? ದೇಶದ ಸುರಕ್ಷತೆ ಹಿನ್ನೆಲೆಯಲ್ಲಿ ದಯವಿಟ್ಟು ಈ ರೀತಿ ಅವಕಾಶ ಬೇಡ, ಹಿಂದೂಗಳಿಗೆ ಮಾತ್ರ ಅವಕಾಶ ನೀಡಿ, ಹಿಂದೂ ವ್ಯಾಪಾರಿಗಳ ಮಳಿಗೆಗೆ ಕೇಸರಿ ಧ್ವಜ ಅಳವಡಿಸಿದ ಕ್ರಮ ಸರಿಯಾಗಿದೆ. ಈಗೀಗ ಮಳಿಗೆಗಳಿಗೆ ಹಿಂದೂ ಹೆಸರು ಇಟ್ಟುಕೊಂಡು ಮುಸ್ಲೀಮರು ವ್ಯಾಪಾರ ಮಾಡ್ತಾರೆ, ಹಿಂದೂಗಳು ಹಣೆ ಮೇಲೆ ಕುಂಕುಮ, ಭಸ್ಮ ಹಚ್ಚಿಕೊಂಡು ವ್ಯಾಪಾರ ಮಾಡಿ ಎಂದವರು ತಿಳಿಸಿದರು.

click me!