ಕೊರೋನಾ ಭೀತಿ: ಹೂತಿದ್ದ ಬಾಲಕಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

By Kannadaprabha NewsFirst Published Apr 25, 2020, 2:58 PM IST
Highlights

ಕೋಳಿಹಾಳ್‌ ತಾಂಡಾದ ಬಾಲಕಿ ಅನುಮಾನಾಸ್ಪದ ಸಾವು| ನಕಲಿ ವೈದ್ಯನ ಚಿಕಿತ್ಸೆಗೆ ಬಲಿಯಾಗಿದ್ದ ಬಾಲಕಿ ಪ್ರಕರಣ| ಕೋವಿಡ್‌-19 ಈ ಸಂದರ್ಭದಲ್ಲಿ ಯಾವುದೇ ಸಾವಿನ ಪ್ರಕರಣ ನಿರ್ಲಕ್ಷಿಸಬಾರದು| ಅವಧಿ ಮೀರಿದ ಔಷಧಿ ಸೇವನೆಯಿಂದ ಈ ಸಾವು ಸಂಭವಿಸಿತೆ ಎಂಬ ಕಾರಣಕ್ಕಾಗಿ ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು| 

ಹುಣಸಗಿ(ಏ.25): ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೋಳಿಹಾಳ್‌ ತಾಂಡಾದ 13 ವರ್ಷದ ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹಾಗೂ ತಹಸೀಲ್ದಾರ ವಿನಯಕುಮಾರ ಪಾಟೀಲ್‌ ಸಮ್ಮುಖದಲ್ಲಿ ತಜ್ಞ ವೈದ್ಯರಾದ ಪ್ರವೀಣ ಪಾಟೀಲ, ಡಾ.ಧರ್ಮರಾಜ ಹೊಸಮನಿ ಶವ ಹೊರತೆಗೆದು ಪರಿಕ್ಷೆ ನಡೆಸಿದ್ದಾರೆ. 

ಕೋವಿಡ್‌-19 ಈ ಸಂದರ್ಭದಲ್ಲಿ ಯಾವುದೇ ಸಾವಿನ ಪ್ರಕರಣವನ್ನು ನಿರ್ಲಕ್ಷಿಸಬಾರದು ಅಲ್ಲದೆ, ಅವಧಿ ಮೀರಿದ ಔಷಧಿ ಸೇವನೆಯಿಂದ ಈ ಸಾವು ಸಂಭವಿಸಿತೆ ಎಂಬ ಕಾರಣಕ್ಕಾಗಿ ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಜ್ವರದಿಂದ ಬಾಲಕಿ ಸಾವು ಪ್ರಕರಣ: ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್

ತೀವ್ರ ಜ್ವರ ಹಾಗೂ ಅನಾರೋಗ್ಯದಿಂದಾಗಿ ಗ್ರಾಮದ ವಾಸಂತಿ ಎಂಬ ಬಾಲಕಿಯನ್ನ ಅಲ್ಲಿನ ಆರ್‌.ಎಂ.ಪಿ. ಅಜೀತ್‌ ಎಂಬಾತನ ಬಳಿ ಕರೆದೊಯ್ಯಲಾಗಿತ್ತು. ಬಾಲಕಿಯ ತಂದೆ ಸಂತೋಷ್‌ ಹಾಗೂ ತಾಯಿ ಕೂಲಿ ಅರಸಿ ಮಹಾರಾಷ್ಟ್ರಕ್ಕೆ ತೆರಳಿದ್ದರಿಂದ ದೊಡ್ಡಪ್ಪನ ಮನೆಯಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದರು.

ವಾಸಂತಿಗೆ ಕಳೆದ ಎರಡ್ಮೂರು ದಿನಗಳಿಂದ ಭಾರಿ ಜ್ವರ ಬರುತ್ತಿತ್ತು. ಮಂಗಳವಾರ ಕೋಳಿಹಾಳ ಗ್ರಾಮದಲ್ಲಿರುವ ಅಜೀತ್‌ ಬಿಸ್ವಕುಮಾರ ಎಂಬಾತನ ಬಳಿ ಪೋಷಕರು ಚಿಕಿತ್ಸೆಗೆಂದು ಕರೆದೊಯ್ದಿದ್ದಾರೆ. ಎರಡು ಇಂಜೆಕ್ಷನ್‌ ಹಾಗೂ ಮಾತ್ರೆಗಳನ್ನು ಬಾಲಕಿಗೆ ನೀಡಲಾಗಿತ್ತು. ರಾತ್ರಿ 10.30 ಗಂಟೆಯ ಸುಮಾರಿಗೆ ಬಾಲಕಿಗೆ ಅತಿಯಾದ ತಲೆನೋವು ಹಾಗೂ ಎರಡ್ಮೂರು ಬಾರಿ ವಾಂತಿಯಿಂದ ಬಳಲಿ, ಕೊನೆಗೆ ನಸುಕಿನ ಜಾವ 5.30 ಸುಮಾರಿಗೆ ಮೃತಪಟ್ಟಿದ್ದಾಳೆ ಎಂದು ದೂರು ದಾಖಲಾಗಿತ್ತು.
 

click me!