ದಿನಾಂಕ ಘೋಷಣೆಯತ್ತ ಎಲ್ಲರ ಚಿತ್ತ : ರಣತಂತ್ರದಲ್ಲಿ ಮುಳುಗಿದ ಪಕ್ಷಗಳು

By Kannadaprabha NewsFirst Published Sep 9, 2020, 12:25 PM IST
Highlights

ಈಗಾಗಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಲವು ಪಕ್ಷಗಳು ಶೀಘ್ರದಲ್ಲೇ ಬರುವ ಚುನಾವಣೆಯೊಂದಕ್ಕೆ ತಯಾರಿ ನಡೆಸುತ್ತಿವೆ.

ವರದಿ : ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಸೆ.09):  ಜಿಲ್ಲೆಯ ರಾಜಕೀಯ ವಲಯದಲ್ಲಿ ಗ್ರಾಪಂ ಚುನಾವಣೆಗಳು ಮೊದಲಿನಿಂದಲೂ ರಾಜಕೀಯ ಪಕ್ಷಗಳಿಗೆ ತೀವ್ರ ಪ್ರತಿಷ್ಠೆಯಾಗಿದ್ದು, ಪಕ್ಷಾತೀತವಾಗಿ ಚುನಾವಣೆಗಳು ನಡೆದರೂ ಪಕ್ಷಗಳ ಪರೋಕ್ಷ ಬೆಂಬಲದಿಂದ ಸದಸ್ಯರು ಚುನಾವಣ ಅಖಾಡಕ್ಕೆ ಇಳಿಯುವುದು ಸರ್ವೇ ಸಾಮಾನ್ಯ. ಹೀಗಾಗಿ ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಬುನಾದಿ ಹಾಕಿಕೊಳ್ಳಲು ರಾಜಕೀಯ ಪಕ್ಷಗಳು ಹಾಗೂ ನಾಯಕರು ಮುಂದಾಗಿರುವುದು ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.

ಸದ್ದು ಮಾಡುತ್ತಿದೆ ಪಿಎಸ್‌ಎಸ್‌:

ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಲ್ಲಿ ಈ ಬಾರಿ ಸಿಪಿಎಂನಿಂದ ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಪ್ರಜಾ ಸಂಘರ್ಷ ಸಮಿತಿ ಹುಟ್ಟು ಹಾಕಿ ಮೊನ್ನೆಯಷ್ಟೆಸಾವಿರಾರು ಬೆಂಬಲಿಗರನ್ನು ಸೇರಿಸಿ ಹೋರಾಟ ನಡೆಸಿದ್ದು ಪರೋಕ್ಷವಾಗಿ ಶ್ರೀರಾಮರೆಡ್ಡಿ ಗ್ರಾಪಂಗಳ ಚುನಾವಣೆಗೆ ಸಜ್ಜಾಗುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿ ಕೂಡ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಹೆಸರಲ್ಲಿ ಕ್ಷೇತ್ರದಲ್ಲಿ ತಿರುಗಾಡುತ್ತಾ ಗ್ರಾಪಂಗಳ ಚುನಾವಣೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ..

ಚಿಕ್ಕಬಳ್ಳಾಪುರದಲ್ಲಿ ಕೈ ಪಡೆ ಸಭೆ:

ನಂದಿ ಸಮೀಪದ ಕಾರಹಳ್ಳಿ ಕ್ರಾಸ್‌ನಲ್ಲಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಜಿ.ಎಚ್‌.ನಾಗರಾಜ್‌ ತೋಟದಲ್ಲಿ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಒಟ್ಟಾಗಿ ಸಭೆ ಸೇರಿ ಬರುವ ಗ್ರಾಪಂಗಳಲ್ಲಿ ಪಕ್ಷ ಸಂಘಟನೆ, ಕಾರ್ಯತಂತ್ರದ ಬಗ್ಗೆ ಚರ್ಚೆಸಿದ್ದಾರೆ. ಜೆಡಿಎಸ್‌ ಕೂಡ ಪಕ್ಷದ ನೂತನ ಜಿಲ್ಲಾಧ್ಯಕ್ಷ ಕೆ.ಎಂ. ಮುನೇಗೌಡ ನೇತೃತ್ವದಲ್ಲಿ ತೆರೆಮರೆಯಲ್ಲಿ ಗ್ರಾಪಂಗಳ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗು ಶಂಕುಸ್ಥಾಪನೆ ಹೆಸರಲ್ಲಿ ಕ್ಷೇತ್ರದ್ಯಾಂತ ಸಂಚರಿಸಿ ಪರೋಕ್ಷವಾಗಿ ಗ್ರಾಪಂಗಳಿಗೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದಾರೆ.

'ಮಾಜಿ ಸಿಎಂ ಕುಮಾರಸ್ವಾಮಿ ಬಣ್ಣ ಬದಲಿಸುವ ಊಸರವಳ್ಳಿ' ...

ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಕುತೂಹಲ:

ಚಿಂತಾಮಣಿ, ಶಿಡ್ಲಘಟ್ಟತಾಲೂಕುಗಳಲ್ಲಿ ಸದ್ಯ ರಾಜಕೀಯ ಪರಿಸ್ಥಿತಿಗಳು ಗಮಿಸಿದರೆ ಭಿನ್ನವಾಗಿವೆ. ಕಳೆದ ಲೋಕಸಭೆಯಲ್ಲಿ ಕಮಲ ಹಿಡಿದ್ದ ಚಿಂತಾಮಣಿ ಮಾಜಿ ಶಾಸಕ ಸುಧಾಕರ್‌ ಯಾವುದೇ ಪಕ್ಷ ಸೇರದೇ ಸ್ವಾತಂತ್ರವಾಗಿದ್ದಾರೆ. ಅಲ್ಲಿ ಜೆಡಿಎಸ್‌ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಎಂ,ಸಿ. ಸುಧಾಕರ್‌ ಬೆಂಬಲಿಗರ ನಡುವೆ ಸ್ಪರ್ಧೆ ಏರ್ಪಡಲಿದೆ. ಶಿಡ್ಲಘಟ್ಟದಲ್ಲಿ ಕೂಡ ಕಾಂಗ್ರೆಸ್‌, ಜೆಡಿಎಸ್‌ ನಡುವೆಯೆ ಗ್ರಾಪಂ ಚುನಾವಣಾ ಕುಸ್ತಿ ನಡೆಯಲಿದೆ. ಜಿಲ್ಲೆಯ ಗೌರಿಬಿದನೂರಲ್ಲಿ ಗ್ರಾಪಂಗಳ ಚುನಾವಣಾ ಅಖಾಡಕ್ಕೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಕಾಂಗ್ರೆಸ್‌ ಶಾಸಕ ಶಿವಶಂಕರರೆಡ್ಡಿ ನೇತೃತ್ವದಲ್ಲಿ ಚುನಾವಣಾ ತಯಾರಿ ಭರದಿಂದ ಸಾಗಿದ್ದು ಶಿವಶಂಕರರೆಡ್ಡಿ ಪ್ರತಿ ಹೋಬಳಿ, ಗ್ರಾಪಂಗಳಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ಜೊತೆಗೆ ಮಹಿಳಾ ಸಂಘಗಳಿಗೆ ಸಾಲ ನೀಡಿ ಗ್ರಾಪಂ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದಾರೆ.

click me!