ಹುಬ್ಬಳ್ಳಿಯಲ್ಲಿ ಪೊಲೀಸ್‌ ಇಲಾಖೆಯಿಂದ ಸ್ಪೆಷಲ್ ಡ್ರೈವ್‌

By Web DeskFirst Published Sep 21, 2019, 8:39 AM IST
Highlights

ಹುಬ್ಬಳ್ಳಿಯಲ್ಲಿ ಪೊಲೀಸ್‌ ಇಲಾಖೆಯಿಂದ ಸ್ಪೆಷಲ್  ಡ್ರೈವ್‌| ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಸ್ಪೆಷಲ್  ಡ್ರೈವ್‌|  ನಗರದ ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್‌ ಭದ್ರತೆ ಹೆಚ್ಚಳ| ಹಳೇ ಹುಬ್ಬಳ್ಳಿ, ದುರ್ಗದಬೈಲ್‌, ಕಮರಿಪೇಟ, ಕಸಬಾಪೇಟ, ನೇಕಾರನಗರ, ಸೆಟ್ಲಮೆಂಟ್‌ ಏರಿಯಾ ಸೇರಿ ಹಲವೆಡೆ ಸಂಚಾರಿ ಪೊಲೀಸರಿಂದ ಸ್ಪೆಷಲ್  ಡ್ರೈವ್‌| 

ಹುಬ್ಬಳ್ಳಿ: (ಸೆ.21) ಗಣೇಶ ವಿಸರ್ಜನೆ ಬಳಿಕ ನಡೆದ ಗಲಾಟೆಯಿಂದ ಪೊಲೀಸ್‌ ಕಮಿಷನರೇಟ್‌ ಎಚ್ಚೆತ್ತುಕೊಂಡಿದೆ. ಕಳೆದ ಎರಡು ದಿನಗಳಿಂದ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಗಲಾಟೆ ತಡೆಗಟ್ಟಲು ಹಾಗೂ ಸಂಚಾರ ನಿಯಮ ಪಾಲನೆಯಾಗುತ್ತಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಲು ಹಳೇಹುಬ್ಬಳ್ಳಿ ಭಾಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.


ಕಳೆದ ಎರಡು ದಿನಗಳಿಂದ ನಗರದ ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದ್ದು, ಅನುಮಾನ ಬಂದಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಒಂದು ವಾರದಲ್ಲಿ ನಡೆದ ಎರಡು ಕೊಲೆ, ಆರಕ್ಕೂ ಹೆಚ್ಚು ಹಲ್ಲೆ ಪ್ರಕರಣದಿಂದ ಎಚ್ಚೆತ್ತ ಇಲಾಖೆ ಹಳೇ ಹುಬ್ಬಳ್ಳಿ, ದುರ್ಗದಬೈಲ್‌, ಕಮರಿಪೇಟ, ಕಸಬಾಪೇಟ, ನೇಕಾರನಗರ, ಸೆಟ್ಲಮೆಂಟ್‌ ಏರಿಯಾ ಸೇರಿ ಹಲವೆಡೆ ಸಂಚಾರಿ ಪೊಲೀಸರು ಸ್ಪೆಷಲ್  ಡ್ರೈವ್‌ ಕೈಗೊಂಡರು. ವಾಹನಗಳಲ್ಲಿ ಮಾರಕಾಸ್ತ್ರ ಸಾಗಾಟ, ಕುಡಿದು, ಗಾಂಜಾ ಸೇವಿಸಿ ವಾಹನ ಚಾಲನೆ, ಅಪ್ರಾಪ್ತರಿಂದ ವಾಹನ ಚಾಲನೆ, ಹೆಲ್ಮೆಟ್‌ ಇಲ್ಲದೆ ಬೈಕ್‌ ಸವಾರಿ ಸೇರಿ ವಿವಿಧ ತಪಾಸಣೆ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉತ್ತರ ಹಾಗೂ ದಕ್ಷಿಣ ವಿಭಾಗದ ಕಮಿಷನರೆಟ್‌ ವಿಭಾಗದಿಂದ ಎಲ್ಲ ಸರ್ಕಲ್‌ಗಳು, ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ ಪೊಲೀಸರು ಪಾಲ್ಗೊಂಡಿದ್ದರು ಎಂದು ಡಿಸಿಪಿ ಶಿವಕುಮಾರ ಹೇಳಿದರು. 

ಪ್ರತಿದಿನ ಕಾರ್ಯಾಚರಣೆ ಇರಲಿ  

ಇದೇ ವೇಳೆ ಕಿತ್ತೂರು ಚೆನ್ನಮ್ಮ ಸರ್ಕಲ್‌, ಕೇಶ್ವಾಪುರ ಸೇರಿದಂತೆ ಮತ್ತಿತರರ ಪ್ರದೇಶಗಳಲ್ಲಿ ಸಂಚಾರಿ ಪೊಲೀಸರು ಇರಲಿಲ್ಲ. ಆ ಪ್ರದೇಶಗಳಲ್ಲಿ ಎಂದಿನಂತೆ ಸಂಚಾರಿ ನಿಯಮ ಉಲ್ಲಂಘನೆಗಳು ಸಾಕಷ್ಟು ಆದರೂ ಯಾರೊಬ್ಬರು ಕೇಳುವವರೇ ಇರಲಿಲ್ಲ. ಮಹಾನಗರದಲ್ಲಿ ಸಂಚಾರ ನಿಯಮ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗದಂತೆ ತಡೆಯಲು ಕಾರ್ಯಾಚರಣೆ ನಡೆಯಲಿ. ಆದರೆ ನಿರಂತರವಾಗಿರಲಿ. ಬರೀ ಯಾವತ್ತೋ ಒಂದು ದಿನ ಕಾರ್ಯಾಚರಣೆ ಮಾಡಿದರೆ ಉಪಯೋಗವೇನು? ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೆ ಅಪರಾಧ ಪ್ರಕರಣಗಳು ತಹಬದಿಗೆ ಬರುತ್ತವೆ. ಈ ನಿಟ್ಟಿನಲ್ಲಿ ಪೊಲೀಸ್‌ ಕಮಿಷನರೇಟ್‌ ಕ್ರಮ ಕೈಗೊಳ್ಳಬೇಕು. ರೌಡಿಗಳನ್ನು ಹೆಡೆಮೂರಿ ಕಟ್ಟಬೇಕು ಎಂದು ನಾಗರಿಕರ ಬಸವರಾಜ ಮೆಣಸಗಿ ಆಗ್ರಹಿಸಿದ್ದಾರೆ.
 

click me!